ಲೋಕಸಭಾ ಚುನಾವಣೆ: ಸಿಬ್ಬಂದಿ ಮಾಹಿತಿ ದಾಖಲಿಸಿ

KannadaprabhaNewsNetwork |  
Published : Dec 24, 2023, 01:46 AM IST
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಚುನಾವಣಾ ನಿರ್ವಹಣೆ ವ್ಯವಸ್ಥೆ ತಂತ್ರಾಂಶದಲ್ಲಿ ಸಿಬ್ಬಂದಿ ಮಾಹಿತಿ ದಾಖಲಿಸುವಂತೆ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ತರಬೇತಿ ಕಾರ್ಯಾಗಾರ ನಡೆಯಿತು. | Kannada Prabha

ಸಾರಾಂಶ

ಚುನಾವಣಾ ಕಾರ್ಯಕ್ರಮಗಳು ಯಶಸ್ವಿಯಾಗಲು ಮತಪೆಟ್ಟಿಗೆಗಳು, ಮತಗಟ್ಟೆಗಳು ಹಾಗೂ ಮತಗಟ್ಟೆ ಕೇಂದ್ರದ ಅಧಿಕಾರಿಗಳು, ಸಹಾಯಕ ಅಧಿಕಾರಿಗಳು ಹಾಗೂ ಚುನಾವಣಾ ಕಾರ್ಯದ ವಿವಿಧ ಸಮಿತಿಗಳ ಸದಸ್ಯರ ಪಾತ್ರ ಬಹುಮುಖ್ಯವಾಗಿದೆ. ಈ ಹಿನ್ನೆಲೆ ಇಲಾಖೆಗಳಲ್ಲಿ ಕೆಲಸ ಮಾಡುವ ಎಲ್ಲ ನೌಕರರ ಮಾಹಿತಿ ಕಡ್ಡಾಯವಾಗಿ ನೀಡಬೇಕು. ಇಲಾಖಾ ಅಧಿಕಾರಿಗಳ ಹಂತದಲ್ಲಿ ಚುನಾವಣಾ ಕಾರ್ಯಕ್ಕೆ ವಿನಾಯಿತಿ ನೀಡಲು ಅವಕಾಶವಿಲ್ಲ. ಕಾರಣ ವಿಶೇಷಚೇತನರು, ತೀವ್ರತರ ಕಾಯಿಲೆಗಳಿಂದ ಬಳಲುತ್ತಿರುವವರು, ೫೯ ವರ್ಷ ಮೇಲ್ಪಟ್ಟವರ ಮಾಹಿತಿಯನ್ನು ದಾಖಲಿಸುವುದು ಕಡ್ಡಾಯವಾಗಿದೆ

ಕನ್ನಡಪ್ರಭ ವಾರ್ತೆ ಹಾವೇರಿ

ಮುಂಬರುವ ಲೋಕಸಭಾ ಚುನಾವಣೆಯ ಮತಗಟ್ಟೆ ಹಾಗೂ ಚುನಾವಣಾ ವಿವಿಧ ಕಾರ್ಯಗಳ ನಿರ್ವಹಣೆಗಾಗಿ ಅಧಿಕಾರಿ, ಸಿಬ್ಬಂದಿ ಮಾಹಿತಿಯನ್ನು ರಾಷ್ಟ್ರೀಯ ಮಾಹಿತಿ ಕೇಂದ್ರ (ಎನ್‌ಐಸಿ)ದ ಹಾವೇರಿ ಘಟಕ ಅಭಿವೃದ್ಧಿ ಪಡಿಸಿರುವ ಚುನಾವಣಾ ಮಾಹಿತಿ ವ್ಯವಸ್ಥೆಯ ತಂತ್ರಾಂಶದಲ್ಲಿ ದಾಖಲಿಸುವಂತೆ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಚುನಾವಣಾ ನಿರ್ವಹಣೆ ವ್ಯವಸ್ಥೆ ತಂತ್ರಾಂಶದಲ್ಲಿ ಸಿಬ್ಬಂದಿ ಮಾಹಿತಿ ದಾಖಲಿಸುವಂತೆ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಆಯೋಜಿಸಲಾದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಚುನಾವಣೆ ಸುಸೂತ್ರವಾಗಿ ನಡೆಯಲು ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ, ಸಿಬ್ಬಂದಿ ನಿಖರವಾದ ಮಾಹಿತಿ ಅಗತ್ಯವಾಗಿದೆ. ಎಚ್.ಆರ್.ಎಂ.ಎಸ್. ನಲ್ಲಿರುವ ಸಿಬ್ಬಂದಿ ವಿವರವನ್ನು ಕಾಲೋಚಿತಗೊಳಿಸಿ, ಸದರಿ ಮಾಹಿತಿಯನ್ನು ಎಲೆಕ್ಸನ್ ಮ್ಯಾನೇಜಮೆಂಟ್ ಸಿಸ್ಟಂ ಆ್ಯಪ್‌ನಲ್ಲಿ ದಾಖಲಿಸಬೇಕು ಎಂದು ಸೂಚನೆ ನೀಡಿದರು.

ಚುನಾವಣಾ ಕಾರ್ಯಕ್ರಮಗಳು ಯಶಸ್ವಿಯಾಗಲು ಮತಪೆಟ್ಟಿಗೆಗಳು, ಮತಗಟ್ಟೆಗಳು ಹಾಗೂ ಮತಗಟ್ಟೆ ಕೇಂದ್ರದ ಅಧಿಕಾರಿಗಳು, ಸಹಾಯಕ ಅಧಿಕಾರಿಗಳು ಹಾಗೂ ಚುನಾವಣಾ ಕಾರ್ಯದ ವಿವಿಧ ಸಮಿತಿಗಳ ಸದಸ್ಯರ ಪಾತ್ರ ಬಹುಮುಖ್ಯವಾಗಿದೆ. ಈ ಹಿನ್ನೆಲೆ ಇಲಾಖೆಗಳಲ್ಲಿ ಕೆಲಸ ಮಾಡುವ ಎಲ್ಲ ನೌಕರರ ಮಾಹಿತಿ ಕಡ್ಡಾಯವಾಗಿ ನೀಡಬೇಕು. ಇಲಾಖಾ ಅಧಿಕಾರಿಗಳ ಹಂತದಲ್ಲಿ ಚುನಾವಣಾ ಕಾರ್ಯಕ್ಕೆ ವಿನಾಯಿತಿ ನೀಡಲು ಅವಕಾಶವಿಲ್ಲ. ಕಾರಣ ವಿಶೇಷಚೇತನರು, ತೀವ್ರತರ ಕಾಯಿಲೆಗಳಿಂದ ಬಳಲುತ್ತಿರುವವರು, ೫೯ ವರ್ಷ ಮೇಲ್ಪಟ್ಟವರ ಮಾಹಿತಿಯನ್ನು ದಾಖಲಿಸುವುದು ಕಡ್ಡಾಯವಾಗಿದೆ ಎಂದು ತಿಳಿಸಿದರು.

೧೦ ಸಾವಿರ ಸಿಬ್ಬಂದಿ:

ಜಿಲ್ಲೆಯಲ್ಲಿ ೧೦,೮೦೯ ಸಿಬ್ಬಂದಿ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ೬,೮೧೯ ಜನರು ಮತಗಟ್ಟೆಗಳ ಕಾರ್ಯನಿರ್ವಹಣೆಗೆ ಅಗತ್ಯವಿದೆ. ಉಳಿದಂತೆ ಚೆಕ್‌ಪೋಸ್ಟ್, ಫ್ಲೈಯಿಂಗ್ ಸ್ಕ್ವಾಡ್‌, ಎಸ್.ಎಸ್.ಟಿ. ಟಿಂ ಸೇರಿದಂತೆ ನೀತಿ ಸಂಹಿತೆ ನಿಗಾ ನಿರ್ವಹಣೆ ಹಾಗೂ ವಿವಿಧ ಸಮಿತಿಗಳ ಕಾರ್ಯನಿರ್ವಹಣೆಗೆ ಸಿಬ್ಬಂದಿ ಅಗತ್ಯವಿರುವುದರಿಂದ ಎಲ್ಲ ಹಂತದ ಅಧಿಕಾರಿ, ಸಿಬ್ಬಂದಿ ಮಾಹಿತಿ ದಾಖಲಿಸಬೇಕು ಎಂದು ಸೂಚನೆ ನೀಡಿದರು.

ಉಪನ್ಯಾಸಕ ಅರವಿಂದ ಐರಣಿ ಮಾತನಾಡಿ, ಹಾವೇರಿ ಎನ್‌ಐಸಿ ಅಧಿಕಾರಿಗಳು ಚುನಾವಣಾ ನಿರ್ವಹಣಾ ವ್ಯವಸ್ಥೆಯ ತಂತ್ರಾಂಶ ಅಭಿವೃದ್ಧಿಪಡಿಸಿದ್ದು, ಎಚ್.ಆರ್.ಎಂ.ಎಸ್. ತಂತ್ರಾಂಶದಲ್ಲಿರುವ ಅಧಿಕಾರಿ, ಸಿಬ್ಬಂದಿ ಮಾಹಿತಿಯನ್ನು ಪುನರ್ ಪರಿಶೀಲಿಸಿ ಸಿಬ್ಬಂದಿ ಹೆಸರು, ಹುದ್ದೆ, ಕೆಲಸದ ಸ್ಥಳ, ಲಿಂಗ, ವೇತನ ಶ್ರೇಣಿ, ಮತದಾನ ಇರುವ ಕ್ಷೇತ್ರ, ಮತಗಟ್ಟೆ ಸಂಖ್ಯೆ, ಎಪಿಕ್ ಕಾರ್ಡ್ ನಂಬರ್, ಮತದಾರರ ಪಟ್ಟಿಯ ಪಾರ್ಟ್‌ ನಂಬರ್‌, ಕ್ರಮ ಸಂಖ್ಯೆ, ಸಿಬ್ಬಂದಿಯ ಐ.ಎಫ್.ಎಸ್.ಕೋಡ್ ಸಹಿತ ಬ್ಯಾಂಕ್ ಖಾತೆ ವಿವರ ಹಾಗೂ ಕೋವಿಡ್ ಲಸಿಕೆ ಪಡೆದ ಮಾಹಿತಿಯನ್ನು ಇಎಂಎಸ್ ಸಾಫ್ಟವೇರ್‌ನಲ್ಲಿ ಕೇಸ್ವಾನ್ ಅಥವಾ ನೆಕ್‌ನೆಟ್‌ನಲ್ಲಿ ದಾಖಲಿಸಬೇಕು. ಮಾಹಿತಿ ಅತ್ಯಂತ ಗೌಪ್ಯವಾಗಿ ಇರಬೇಕು. ಸೋರಿಕೆಯಾಗಬಾರದು, ಸಿಬ್ಬಂದಿ ವಿವರದ ಷರಾದಲ್ಲಿ ತೀವ್ರತರ ಕಾಯಿಲೆ ಹಾಗೂ ವಿಶೇಷಚೇತನತೆಯನ್ನು ನಮೂದಿಸಬಹುದು. ಕಚೇರಿಯ ಇ.ಎಸ್.ಟಿ. ಸಿಬ್ಬಂದಿಗೆ ಮಾಹಿತಿ ದಾಖಲಿಸುವ ಕುರಿತಂತೆ ಪ್ರತ್ಯೇಕ ತರಬೇತಿ ಆಯೋಜಿಸಲಾಗುವುದು. ಪ್ರತಿ ಇಲಾಖೆಗೆ ಪ್ರತ್ಯೇಕ ಯುಸರ್‌ನೇಮ್ ಹಾಗೂ ಪಾಸವರ್ಡ್ ನೀಡಲಾಗುವುದು ಎಂದು ಮಾಹಿತಿ ನೀಡಿದರು.

ಚುನಾವಣಾ ಶಿರಸ್ತೇದಾರ ಖಾನ್, ವಿವಿಧ ಇಲಾಖೆಗಳ ಮುಖ್ಯಸ್ಥರು ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾವೇರಿ 33 ಹಳ್ಳಿಗಳಲ್ಲಿ ಪ್ರತಿ ದಿನ ಸಂಜೆ 7- 9 ಗಂಟೆವರೆಗೆ ಮೊಬೈಲ್‌, ಟಿವಿ ಬಂದ್‌
ಗೃಹಲಕ್ಷ್ಮೀಯರಿಗೆ ಗುಡ್ ನ್ಯೂಸ್ ಕೊಟ್ರು ಸಚಿವೆ ಲಕ್ಷ್ಮೀ