ಹೂವಿನಹಡಗಲಿ: ಇಲ್ಲಿನ ವಲಯ ಅರಣ್ಯಾಧಿಕಾರಿ ರೇಣುಕಮ್ಮ ಅವರ ಮನೆ ಹಾಗೂ ವಲಯ ಅರಣ್ಯ ಇಲಾಖೆಯ ಕಚೇರಿಯ ಮೇಲೆ ಬುಧವಾರ ಬೆಳಗ್ಗೆ ರಾಯಚೂರು ಲೋಕಾಯುಕ್ತ ಎಸ್ಪಿ ಎಂ.ಎನ್. ಶಶಿಧರ ನೇತೃತ್ವದ ತಂಡ ದಾಳಿ ಮಾಡಿದ್ದಾರೆ.
ತಾಲೂಕಿನ ತಿಪ್ಪಾಪುರ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ಆರ್ಎಫ್ಒ ರೇಣುಕಮ್ಮ ವಾಸವಾಗಿದ್ದರು. ತಿಪ್ಪಾಪುರ ಮನೆಯಲ್ಲಿ 150 ಗ್ರಾಂ ಬಂಗಾರ, ಸ್ಕಾರ್ಪಿಯೋ, ಕಾರು, 2 ಬೈಕ್, ಒಂದು ಲಕ್ಷಕ್ಕೂ ಅಧಿಕ ಹಣ ಸಿಕ್ಕಿದೆ.ಗಂಗಾವತಿ ತಾಲೂಕಿನ ಲಿಂಗದಹಳ್ಳಿಯಲ್ಲಿ 6 ಎಕರೆ ಜಮೀನು ಮತ್ತು ಫಾರ್ಮ್ ಹೌಸ್, ಸಂಗಾಪುರ ರಸ್ತೆ ಬಳಿಯ ವಿನಾಯಕ ಲೇಔಟ್ನಲ್ಲಿ 45 ಲಕ್ಷ ಮೌಲ್ಯದ 1 ಸೈಟ್ ಹಾಗೂ 2 ಮನೆಗಳಿರುವ ಕುರಿತು ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.
ಹೂವಿನಹಡಗಲಿಯ ವಲಯ ಅರಣ್ಯ ಇಲಾಖೆಯ ಕಚೇರಿಯಲ್ಲಿ 6 ಜನರ ಲೋಕಾಯುಕ್ತ ತಂಡವು ಕಚೇರಿಯ ಕಡತಗಳನ್ನು ಪರಿಶೀಲಿಸಿದರು.ದಾಳಿಯಲ್ಲಿ ಲೋಕಾಯುಕ್ತ ಡಿವೈಎಸ್ಪಿ ಹನುಮಂತರಾಯ, ತನಿಖಾಧಿಕಾರಿ ರಾಜೇಶ ಬಟಗುರ್ಕಿ ಸೇರಿದಂತೆ ಹತ್ತಾರು ಸಿಬ್ಬಂದಿ ಭಾಗವಹಿಸಿದ್ದರು. ರೇಣುಕಮ್ಮ ಹೂವಿನಹಡಗಲಿಯಲ್ಲಿ ವಲಯ ಅರಣ್ಯಾಧಿಕಾರಿಯಾಗಿದ್ದರೆ, ಅತ್ತ ಹರಪನಹಳ್ಳಿಯಲ್ಲಿ ಪತಿ ಮಲ್ಲಪ್ಪ ವಲಯ ಅರಣ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕಳೆದ 2022- 23ನೇ ಸಾಲಿನಲ್ಲಿ ಕೂಡ್ಲಿಗಿಯಲ್ಲಿ ಆರ್ಎಫ್ಒ ಆಗಿ ಕೆಲಸ ಮಾಡುತ್ತಿದ್ದರು. ಆಗ ಆ ಭಾಗದಲ್ಲಿನ ಕರಡಿ ದಾಳಿ ಕುರಿತು ರೈತರಲ್ಲಿ ಜಾಗೃತಿ ಮೂಡಿಸುವ ಜತೆಗೆ ಕರಡಿ ದಾಳಿ ನಿಯಂತ್ರಣಕ್ಕೆ ತಂದಿದ್ದಕ್ಕಾಗಿ ಅವರಿಗೆ ಸರ್ಕಾರ ಮುಖ್ಯಮಂತ್ರಿ ಪದಕ ನೀಡಿ ಗೌರವಿಸಿತ್ತು.ಜೆಸ್ಕಾಂ ಎಇಇ ಮನೆ, ಕಚೇರಿ ಮೇಲೆ ಲೋಕಾ ದಾಳಿ
ಹೊಸಪೇಟೆ: ಹಗರಿಬೊಮ್ಮನಹಳ್ಳಿಯ ಜೆಸ್ಕಾಂ ಎಇಇ ಭಾಸ್ಕರ್ ನಿವಾಸ ಹಾಗೂ ಕಚೇರಿ ಮೇಲೆ ಬಳ್ಳಾರಿ ಲೋಕಾಯುಕ್ತ ಎಸ್ಪಿ ಸಿದ್ದರಾಜು ಅವರ ನೇತೃತ್ವದಲ್ಲಿ ಲೋಕಾಯುಕ್ತ ತಂಡ ಬುಧವಾರ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದೆ.ನಗರದ ಜಂಬುನಾಥ ರಸ್ತೆಯಲ್ಲಿರೋ ಜಂಬುಕೇಶ್ವರ ಬಡಾವಣೆಯ ಒಂದು ಮನೆ, ಆಕಾಶವಾಣಿ ಪ್ರದೇಶದಲ್ಲಿರುವ ಎರಡು ಮನೆ ಮತ್ತು ಕೊಪ್ಪಳದ ಗಿಣಗೇರಾದಲ್ಲಿರೋ ಒಂದು ಮನೆಯ ಮೇಲೆ ದಾಳಿ ಮಾಡಿದ ಲೋಕಾಯುಕ್ತ ಅಧಿಕಾರಿಗಳು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಹೊಸಪೇಟೆ, ಹಾವೇರಿ, ದಾವಣಗೆರೆ ಲೋಕಾಯುಕ್ತ ಅಧಿಕಾರಿಗಳು ಹಾಗೂ ಸಿಬ್ಬಂದಿ ದಾಳಿಯಲ್ಲಿ ಪಾಲ್ಗೊಂಡಿದ್ದು, ಕೆಲ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡು ಪರಿಶೀಲಿಸಿದ್ದಾರೆ.