- ಪತ್ರಕರ್ತ ರವೀಂದ್ರ ಭಟ್ಟ ಅಭಿಮತ
ಯಾವುದರಲ್ಲೂ ಅಸಮಾನತೆ ಬೇಡ ಎಂಬುದೇ ಮಹಾತ್ಮ ಗಾಂಧಿಯ ಧರ್ಮ, ಅದುವೇ ಮಾನವೀಯ ದಾರಿ ಎಂದು ಪತ್ರಕರ್ತ ರವೀಂದ್ರ ಭಟ್ಟ ತಿಳಿಸಿದರು.
ಮೈಸೂರು ವಿವಿ ಗಾಂಧಿ ಅಧ್ಯಯನ ಕೇಂದ್ರ ಮತ್ತು ಸಮಾಜಕಾರ್ಯ ಅಧ್ಯಯನ ವಿಭಾಗವು ಮಾನಸಗಂಗೋತ್ರಿಯ ಗಾಂಧಿ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ 76ನೇ ಸರ್ವೋದಯ ದಿನಾಚರಣೆಯನ್ನು ಉದ್ಘಾಟಿಸಿದ ಅವರು, ಧಾರ್ಮಿಕ ಸಹಿಷ್ಣುತೆ: ಗಾಂಧೀಜಿ ಪರಿಕಲ್ಪನೆ ಮತ್ತು ಇಂದಿನ ಅಗತ್ಯ ಕುರಿತು ವಿಶೇಷ ಉಪನ್ಯಾಸ ನೀಡಿದರು.ಗಾಂಧೀಜಿ ಧರ್ಮಗಳನ್ನು ರೈಲು ಗಾಟಿಯ ಡಬ್ಬಗಳಂತೆ ನೋಡುತ್ತಿದ್ದರು. ನೀವು ಯಾವುದೇ ಡಬ್ಬ ಹತ್ತಿದರೂ ತಲುಪುವುದು ಮಾತ್ರ ಒಂದೇ ಗುರಿಯನ್ನು. ಆದರೆ, ಡಬ್ಬದ ಸ್ವಚ್ಛತೆಯನ್ನು ನಾವು ಮರೆಯಬಾರದು ಎನ್ನುತ್ತಿದ್ದರು. ಧರ್ಮವನ್ನು ಮರು ವ್ಯಾಖ್ಯಾನಿಸಲು. ಉತ್ತಮ ಮೌಲ್ಯವನ್ನು ಸ್ಥಾಪಿಸಲು ಸದಾ ಹಾತೊರೆಯುವ ವ್ಯಕ್ತಿ ಗಾಂಧಿ ಎಂದರು.
ಇದೇ ವೇಳೆ ನಗರ ಪಾಲಿಕೆಯ ಪೌರಕಾರ್ಮಿಕರಾದ ನಾಗಮ್ಮ ಅವರನ್ನು ಸನ್ಮಾನಿಸಲಾಯಿತು. ಕುಲಸಚಿವೆ ವಿ.ಆರ್. ಶೈಲಜಾ, ಪರೀಕ್ಷಾಂಗ ಕುಲಸಚಿವ ಪ್ರೊ.ಕೆ. ಮಹದೇವನ್, ಸಮಾಜಕಾರ್ಯ ವಿಭಾಗದ ಅಧ್ಯಕ್ಷ ಡಾ. ಚಂದ್ರಮೌಳಿ, ಗಾಂಧಿ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ.ಎಸ್. ನರೇಂದ್ರಕುಮಾರ್ ಇದ್ದರು.