ಲೋಕಾಯುಕ್ತ ಪೊಲೀಸರು ಆದಾಯಕ್ಕಿಂತ ಹೆಚ್ಚಿನ ಆದಾಯ ಗಳಿಕೆ ಆರೋಪದ ಮೇಲೆ ಎಂಟು ಭ್ರಷ್ಟ ಅಧಿಕಾರಿಗಳಿಗೆ ಸೇರಿದ ಸ್ಥಳಗಳ ಮೇಲೆ ದಾಳಿ ನಡೆಸಿ 64.78 ಲಕ್ಷ ರು. ನಗದು, 3.73 ಕೋಟಿ ರು. ಮೌಲ್ಯದ ಚಿನ್ನಾಭರಣ ಸೇರಿ 36.53 ಕೋಟಿ ರು. ಮೌಲ್ಯದ ಆಸ್ತಿ ಪತ್ತೆ ಹಚ್ಚಿದ್ದಾರೆ.
ಬೆಂಗಳೂರು : ವಿಧಾನಮಂಡಲ ಅಧಿವೇಶನ ನಡೆಯುತ್ತಿರುವ ಹೊತ್ತಿನಲ್ಲೇ ಲೋಕಾಯುಕ್ತ ಪೊಲೀಸರು ಆದಾಯಕ್ಕಿಂತ ಹೆಚ್ಚಿನ ಆದಾಯ ಗಳಿಕೆ ಆರೋಪದ ಮೇಲೆ ಎಂಟು ಭ್ರಷ್ಟ ಅಧಿಕಾರಿಗಳಿಗೆ ಸೇರಿದ ಸ್ಥಳಗಳ ಮೇಲೆ ದಾಳಿ ನಡೆಸಿ 64.78 ಲಕ್ಷ ರು. ನಗದು, 3.73 ಕೋಟಿ ರು. ಮೌಲ್ಯದ ಚಿನ್ನಾಭರಣ ಸೇರಿ 36.53 ಕೋಟಿ ರು. ಮೌಲ್ಯದ ಆಸ್ತಿ ಪತ್ತೆ ಹಚ್ಚಿದ್ದಾರೆ.
ಇದೇ ವೇಳೆ 1.98 ಲಕ್ಷ ರು. ಮೌಲ್ಯದ ನಿರ್ಬಂಧಿತ ನೋಟುಗಳೂ ಸಿಕ್ಕಿವೆ. ಗುರುವಾರ ಬೆಳ್ಳಂಬೆಳ್ಳಗೆ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ ಲೋಕಾಯುಕ್ತ ಪೊಲೀಸರು, ಏಕಕಾಲಕ್ಕೆ ರಾಜ್ಯದ ಏಳು ಜಿಲ್ಲೆಯ 40 ಸ್ಥಳಗಳಲ್ಲಿ ಶೋಧಕಾರ್ಯ ನಡೆಸಲಾಗಿದೆ. ಬೆಂಗಳೂರು, ಕೋಲಾರ, ಕಲಬುರಗಿ, ದಾವಣಗೆರೆ, ತುಮಕೂರು, ಬಾಗಲಕೋಟೆ ಮತ್ತು ವಿಜಯಪುರದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.
ಯಾರ ಬಳಿ ಎಷ್ಟು ಆಸ್ತಿ ಪತ್ತೆ?
1. ಟಿ.ಡಿ.ನಂಜುಂಡಪ್ಪ, ಮುಖ್ಯ ಎಂಜಿನಿಯರ್, ಪಂಚಾಯತ್ ರಾಜ್ ಇಲಾಖೆ
7 ಸ್ಥಳಗಳಲ್ಲಿ ಶೋಧ, 9 ಸೈಟ್, 3 ಮನೆ, 1.2 ಕೋಟಿ ರು. ಮೌಲ್ಯದ ಜಮೀನು ಸೇರಿ ಒಟ್ಟು 7.46 ಕೋಟಿ ರು. ಸ್ಥಿರಾಸ್ತಿ, 99.75 ಲಕ್ಷ ರು.ನ ಚರಾಸ್ತಿ ಸಿಕ್ಕಿದೆ. ಒಟ್ಟು 8.46 ಕೋಟಿ ರು. ಆಸ್ತಿ ಪತ್ತೆ.
2. ಎಚ್.ಬಿ. ಕಲ್ಲೇಶಪ್ಪ, ಕಾರ್ಯಪಾಲಕ ಎಂಜಿನಿಯರ್, ಬಿಬಿಎಂಪಿ 6 ಕಡೆ ಕಾರ್ಯಾಚರಣೆ. 2 ಸೈಟ್, 3 ಮನೆ, 2 ಎಕರೆ ಜಮೀನು ಸೇರಿ ಒಟ್ಟು 4.97 ಕೋಟಿ ರು. ಮೌಲ್ಯದ ಸ್ಥಿರಾಸ್ತಿ, 1.53 ಕೋಟಿ ರು.ನ ಚರಾಸ್ತಿ ಪತ್ತೆ. ಒಟ್ಟು ಆಸ್ತಿ ಮೌಲ್ಯ 6.50 ಕೋಟಿ ರು.
3. ಜಿ.ನಾಗರಾಜ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್, ಬೆಸ್ಕಾಂ3 ಸ್ಥಳದಲ್ಲಿ ಶೋಧ. 2 ಸೈಟ್, 1 ಮನೆ, 10.30 ಎಕರೆ ಜಮೀನು ಸೇರಿ 1.57 ಕೋಟಿ ರು. ಮೌಲ್ಯದ ಸ್ಥಿರಾಸ್ತಿ, 60.98 ಲಕ್ಷ ರು. ಮೌಲ್ಯದ ಚರಾಸ್ತಿ ಸಿಕ್ಕಿದೆ. ಒಟ್ಟು ಆಸ್ತಿ ಮೌಲ್ಯ2.18 ಕೋಟಿ ರು.
4. ಜಗನ್ನಾಥ, ಯೋಜನಾ ಜಾರಿ ಘಟಕ ಅಧಿಕಾರಿ, ಎನ್ಎಚ್ಎಐ
6 ಸ್ಥಳಗಳಲ್ಲಿ ಶೋಧ. 2 ಸೈಟ್, 2 ಮನೆ, 48 ಎಕರೆ ಕೃಷಿ ಜಮೀನು ಸೇರಿ 2.85 ಕೋಟಿ ರು. ಮೌಲ್ಯದ ಸ್ಥಿರಾಸ್ತಿ ಪತ್ತೆ. 79 ಲಕ್ಷ ರು. ಮೌಲ್ಯದ ಚಿನ್ನಾಭರಣ, ಸೇರಿ 1.70 ಕೋಟಿ ರು. ಮೌಲ್ಯದ ಚರಾಸ್ತಿ ಸಿಕ್ಕಿದೆ. ಒಟ್ಟು 4.55 ಕೋಟಿ ರು. ಮೌಲ್ಯದ ಆಸ್ತಿ ಪತ್ತೆ.
5. ಡಾ.ಜೆ.ಎಸ್.ನಾಗರಾಜ್, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಅಧಿಕಾರಿ5 ಕಡೆ ಶೋಧ. 1 ಸೈಟ್, 4 ಮನೆ, 3 ಎಕರೆ ಜಮೀನು ಸೇರಿ 4.49 ಕೋಟಿ ರು.ಮೌಲ್ಯದ ಸ್ಥಿರಾಸ್ತಿ ಪತ್ತೆ. 94 ಲಕ್ಷ ರು. ಮೌಲ್ಯದ ಚಿನ್ನಾಭರಣ ಸೇರಿ 1.65 ಕೋಟಿ ರು. ಚರಾಸ್ತಿ ಸಿಕ್ಕಿದೆ. ಒಟ್ಟು 6.14 ಕೋಟಿ ರು. ಮೌಲ್ಯದ ಆಸ್ತಿ ಪತ್ತೆ.
6. ಡಾ.ಪಿ.ಜಗದೀಶ್, ವೈದ್ಯಕೀಯ ಅಧಿಕಾರಿ, ಪಿಎಚ್ಸಿ, ತಾವರೆಕರೆ, ತುಮಕೂರು-
6 ಕಡೆ ಶೋಧ. 5 ಸೈಟ್, 4 ಮನೆ, 14.30 ಎಕರೆ ಜಮೀನು ಸೇರಿ 1.96 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಸಿಕ್ಕಿದೆ. 87.56 ಲಕ್ಷ ರು. ಮೌಲ್ಯದ ಚಿನ್ನಾಭರಣ ಸೇರಿ 1.14 ಕೋಟಿ ರು. ಮೌಲ್ಯದ ಚರಾಸ್ತಿ ಲಭ್ಯ. ಒಟ್ಟು ಆಸ್ತಿ ಮೌಲ್ಯ 3.11 ಕೋಟಿ ರು.
7. ಮಲ್ಲಪ್ಪ ಸಾಬಣ್ಣ ದುರ್ಗದ್, ಎಫ್ಡಿಎ, ಪಂಚಾಯತ್ ರಾಜ್ , ಬಾಗಲಕೋಟೆ-
3 ಕಡೆ ಶೋಧ. 4 ಸೈಟ್, 3 ಮನೆ, 13 ಎಕರೆ ಕೃಷಿ ಜಮೀನು ಸೇರಿ 94.1 ಲಕ್ಷ ರು. ಮೌಲ್ಯದ ಸ್ಥಿರಾಸ್ತಿ, 98.10 ಲಕ್ಷ ರು. ಮೌಲ್ಯದ ಚರಾಸ್ತಿ ಸಿಕ್ಕಿದೆ. 1.92 ಕೋಟಿ ರು. ಮೌಲ್ಯದ ಆಸ್ತಿ ಸಿಕ್ಕಿದೆ.
8. ಶಿವಾನಂದ ಕೆಂಬಾವಿ, ಎಫ್ಡಿಎ, ಕರ್ನಾಟಕ ಗೃಹ ಮಂಡಳಿ, ವಿಜಯಪುರ-
4 ಕಡೆ ಶೋಧ, 3 ಮನೆ, 4 ಎಕರೆ ಕೃಷಿ ಜಮೀನು ಸೇರಿ 2.21 ಕೋಟಿ ರು. ಮೌಲ್ಯದ ಸ್ಥಿರಾಸ್ತಿ, 1.43 ಕೋಟಿ ರು. ಮೌಲ್ಯದ ಚರಾಸ್ತಿ ಸಿಕ್ಕಿದೆ. ಒಟ್ಟು ಆಸ್ತಿ ಮೌಲ್ಯ 3.64 ಕೋಟಿ ರು.ಲೋಕಾ ದಾಳಿ ವೇಳೆ ಸಿಕ್ತು ಜೀವಂತ ಗುಂಡು, ಪಿಸ್ತೂಲ್:ರಾಜ್ಯದ ವಿವಿಧೆಡೆ 8 ಭ್ರಷ್ಟ ಅಧಿಕಾರಿಗಳ ಮೇಲೆ ಗುರುವಾರ ನಡೆದ ಲೋಕಾಯುಕ್ತ ದಾಳಿ ಮೇಲೆ ಭ್ರಷ್ಟ ಅಧಿಕಾರಿಗಳ ಮುಖವಾಡಕ್ಕೆ ಸಂಬಂಧಿಸಿ ಹಲವು ಸ್ವಾರಸ್ಯಕರ ಸಂಗತಿಗಳು ಹೊರಬಿದ್ದಿವೆ. ಕರ್ನಾಟಕ ಗೃಹ ಮಂಡಳಿ ಪ್ರಥಮ ದರ್ಜೆ ಸಹಾಯಕ ಶಿವಾನಂದ ಕೆಂಬಾವಿ ಅವರ ವಿಜಯಪುರದ ಸುಕೂನ್ ಕಾಲೋನಿಯಲ್ಲಿರುವ ನಿವಾಸ ಹಾಗೂ ತಾಲೂಕಿನ ತಿಡಗುಂಡಿ ಗ್ರಾಮದ ಬಳಿಯ ಫಾರ್ಮ್ ಹೌಸ್ ಮೇಲೆ ದಾಳಿ ನಡೆದಿದ್ದು, ದಾಳಿ ವೇಳೆ ಐದು ಜೀವಂತ ಗುಂಡುಗಳು ಮತ್ತು ಒಂದು ಪಿಸ್ತೂಲ್ ಸಿಕ್ಕಿದೆ.ದಾವಣಗೆರೆಯ ಎಸ್.ನಿಜಲಿಂಗಪ್ಪ ಬಡಾವಣೆಯ ನಿವಾಸಿ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಅಧಿಕಾರಿ ಡಾ.ನಾಗರಾಜ ಅವರು ಜಿಲ್ಲಾಸ್ಪತ್ರೆ ಆವರಣದ ಸರ್ವೇಕ್ಷಣಾ ವಿಭಾಗದ ಕಟ್ಟಡದಲ್ಲಿನ ಸುರಕ್ಷಾ ಶಾಖಾ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ದಾಳಿ ವೇಳೆ, ಕಚೇರಿಯ ರೆಫ್ರಿಜಿರೇಟರ್ನಲ್ಲಿ ಸಂಗ್ರಹಿಸಿದ ಮಾದರಿಗಳು ಕೊಳೆಯುತ್ತಿದ್ದುದು ಪತ್ತೆಯಾಗಿವೆ. ಉಪ್ಪಿಟ್ಟು, ದೋಸೆ, ಪೂರಿ, ಪಲಾವ್ ಸೇರಿದಂತೆ ಹತ್ತಾರು ಆಹಾರ ಪದಾರ್ಥಗಳು ಸ್ಯಾಂಪಲ್ಗೆಂದು ತಂದಿದ್ದು, ಅದಕ್ಕೆ ಯಾವುದೇ ದಾಖಲೆಯನ್ನೂ ನಿರ್ವಹಣೆ ಮಾಡಿರಲಿಲ್ಲ. ಕಸದ ಬುಟ್ಟಿಯಲ್ಲಿ ತುಂಬಿದಂತೆ ಆಹಾರದ ಮಾದರಿಗಳನ್ನು ತುಂಬಿಟ್ಟಿರುವುದು ಪತ್ತೆಯಾಗಿದೆ.
ರಾಜ್ಯ ಹೆದ್ದಾರಿ ಮುಖ್ಯ ಯೋಜನಾಧಿಕಾರಿ ಜಗನ್ನಾಥ ಹಾಲಂಗೆಯ ಕಲಬುರಗಿಯ ಮನೆಯ ಲಾಕರ್ ನಲ್ಲಿ 30 ಚಿನ್ನದ ನಾಣ್ಯಗಳು ಪತ್ತೆಯಾಗಿವೆ.