ಕನ್ನಡಪ್ರಭ ವಾರ್ತೆ ಬೆಂಗಳೂರು
ಖಜಾನೆ-2ರ ತಂತ್ರಾಂಶದಲ್ಲಿ ಫಸ್ಟ್ ಇನ್ ಫಸ್ಟ್ ಔಟ್ ಸಲ್ಲಿಕೆಯಾಗುವ ಬಿಲ್ಗಳನ್ನು ಸಿಬ್ಬಂದಿಗೆ ಸಮಾನವಾಗಿ ಹಂಚಿಕೆ ಮಾಡುವ ರೌಂಡ್ ರಾಬಿನ್ ವಿಧಾನ ಚಾಲ್ತಿಯಲ್ಲಿದೆ. ಆದರೂ ಖಜಾನೆಗಳಲ್ಲಿ ಈ ಪದ್ಧತಿ ಗಾಳಿಗೆ ತೂರಿ ತಮಗೆ ಬೇಕಾದಂತೆ ಮನಬಂದಂತೆ ನಿರ್ವಹಿಸಲಾಗುತ್ತಿದೆ. ಭ್ರಷ್ಟಾಚಾರ, ಡಿಸಿ ಬಿಲ್ಗಳ ಪರಿಶೀಲನೆ ನೆಪದಲ್ಲಿ ಮುಂಗಡ ಕಚೇರಿಯಲ್ಲೇ ತಡೆ ಹಿಡಿಯುತ್ತಿರುವುದು ಹಾಗೂ ದೈನಂದಿನ ಸೇವೆಯಲ್ಲಿ ಅವ್ಯವಹಾರ ನಡೆಯುತ್ತಿರುವ ಸಂಬಂಧ ಲೋಕಾಯುಕ್ತಕ್ಕೆ ಹಲವು ದೂರುಗಳು ಬಂದಿವೆ.
13 ತಂಡಗಳಿಂದ ದಾಳಿ:ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಅವರ ಸೂಚನೆ ಮೇರೆಗೆ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಈ ತನಿಖೆಯ ಭಾಗವಾಗಿ ಖಜಾನೆಗಳ ಕಚೇರಿಗಳ ಮೇಲೆ ದಾಳಿ ನಡೆಸಲಾಗಿದೆ. ಈ ದಾಳಿಯಲ್ಲಿ ಲೋಕಾಯುಕ್ತ ನ್ಯಾಯಾಂಗ ವಿಭಾಗದ 11 ಅಧಿಕಾರಿಗಳು, 39 ಪೊಲೀಸ್ ಅಧಿಕಾರಿಗಳು, ಓರ್ವ ಲೋಕಾಯುಕ್ತರ ಕಾರ್ಯದರ್ಶಿ, ಇಬ್ಬರು ಉಪ ಲೋಕಾಯುಕ್ತರ ಆಪ್ತ ಕಾರ್ಯದರ್ಶಿಗಳು ಒಳಗೊಂಡ 13 ತಂಡಗಳನ್ನು ಈ ದಾಳಿಗೆ ನಿಯೋಜಿಸಲಾಗಿದೆ.
ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಅವರು ಖುದ್ದು ರಾಜ್ಯ ಹುಜೂರ್ ಖಜಾನೆ, ಉಪಲೋಕಾಯುಕ್ತ ಕೆ.ಎನ್.ಫಣೀಂದ್ರ ಅವರು ಕೆಜಿಐಡಿ ಕಚೇರಿ, ವಿ.ವಿ. ಹಾಗೂ ಇತರೆ ಖಜಾನೆಗಳು, ಉಪಲೋಕಾಯುಕ್ತ ಬಿ.ವೀರಪ್ಪ ಅವರು ಬೆಂಗಳೂರು ಉತ್ತರ ಖಜಾನೆ ಹಾಗೂ ಇತರೆ ಖಜಾನೆಗಳು ಮತ್ತು ಲೋಕಾಯುಕ್ತ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಮನೀಷ್ ಕರ್ಬೀಕರ್ ಅವರು ಬೆಂಗಳೂರು ನಗರ ಖಜಾನೆ ಕಚೇರಿಗಳ ಮೇಲೆ ದಾಳಿ ನಡೆಸಿದ್ದಾರೆ.