ಸಾರ್ವಜನಿಕರಿಗಾಗುವ ತೊಂದರೆ ತಪ್ಪಿಸಲು ಲೋಕಾಯುಕ್ತ ಪ್ರಾರಂಭವಾಗಿದೆ

KannadaprabhaNewsNetwork |  
Published : Nov 07, 2023, 01:30 AM IST
ಮುಂಡರಗಿ ಪಟ್ಟಣದ ತೋಂಟದಾರ್ಯ ಸರ್ಕಾರ ಪದವೀ ಕಾಲೇಜಿನಲ್ಲಿ ಭ್ರಷ್ಟಾಚಾರ ವಿರುದ್ದ ಜಾಗೃತಿ ಸಪ್ತಾಹ ಕಾರ್ಯಕ್ರಮದಲ್ಲಿ ಲೋಕಾಯುಕ್ತ ಡಿವೈಎಸ್ಪಿ ಡಾ.ವಿಜಯ್ ಬಿರಾದಾರ ಮಾತನಾಡಿದರು. | Kannada Prabha

ಸಾರಾಂಶ

ಮುಂಡರಗಿ ಪಟ್ಚಣದ ಜಗದ್ಗುರು ತೋಂಟದಾರ್ಯ ಸರ್ಕಾರಿ ಪದವಿ ಕಾಲೇಜಿನಲ್ಲಿ ಕರ್ನಾಟಕ ಲೋಕಾಯುಕ್ತ ಪೊಲೀಸ್ ಠಾಣೆ ಗದಗ, ಜಗದ್ಗುರು ತೋಂಟದಾರ್ಯ ಸರ್ಕಾರಿ ಪದವಿ ಕಾಲೇಜ್ ಮುಂಡರಗಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಭ್ರಷ್ಟಾಚಾರ ವಿರುದ್ಧ ಜಾಗೃತಿ ಸಪ್ತಾಹ 2023 ಕಾರ್ಯಕ್ರಮ ನಡೆಯಿತು.

ಭ್ರಷ್ಟಾಚಾರ ವಿರುದ್ಧ ಜಾಗೃತಿ ಸಪ್ತಾಹ 2023 ಕಾರ್ಯಕ್ರಮಮುಂಡರಗಿ: ಸರ್ಕಾರ ಲೋಕಾಯುಕ್ತ ಸಂಸ್ಥೆಯನ್ನು ಮುಖ್ಯವಾಗಿ ಸರ್ಕಾರಿ ಕಚೇರಿಗಳು ಹಾಗೂ ಸರ್ಕಾರಿ ಅಧಿಕಾರಿಗಳಿಂದ ಸಾರ್ವಜನಿಕರಿಗಾಗುತ್ತಿರುವ ತೊಂದರೆಗಳನ್ನು ತಪ್ಪಿಸಿ ಅವರ ಮೇಲೆ ಒಂದು ಹತೋಟಿಯನ್ನು ಇಡುವುದಕ್ಕಾಗಿ ಲೋಕಾಯುಕ್ತ ಸಂಸ್ಥೆಯನ್ನು ಪ್ರಾರಂಭಿಸಿದೆ ಎಂದು ಗದಗ ಜಿಲ್ಲಾ ಲೋಕಾಯುಕ್ತ ಡಿವೈಎಸ್ಪಿ ಡಾ. ವಿಜಯ್ ಬಿರಾದಾರ ಹೇಳಿದರು. ಅವರು ಸೋಮವಾರ ಪಟ್ಚಣದ ಜಗದ್ಗುರು ತೋಂಟದಾರ್ಯ ಸರ್ಕಾರಿ ಪದವಿ ಕಾಲೇಜಿನಲ್ಲಿ ಕರ್ನಾಟಕ ಲೋಕಾಯುಕ್ತ ಪೊಲೀಸ್ ಠಾಣೆ ಗದಗ, ಜಗದ್ಗುರು ತೋಂಟದಾರ್ಯ ಸರ್ಕಾರಿ ಪದವಿ ಕಾಲೇಜ್ ಮುಂಡರಗಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಭ್ರಷ್ಟಾಚಾರ ವಿರುದ್ಧ ಜಾಗೃತಿ ಸಪ್ತಾಹ 2023 ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಪ್ರಮುಖವಾಗಿ ಭ್ರಷ್ಟಾಚಾರ ತಡೆಗಟ್ಟುವಿಕೆ ಮತ್ತು ಭ್ರಷ್ಟಾಚಾರವನ್ನು ಪತ್ತೆ ಹಚ್ಚಿ ನಿರ್ಮೂಲನೆ ಮಾಡುವುದು ಈ ಸಂಸ್ಥೆಯ ಪ್ರಮುಖ ಉದ್ದೇಶವಾಗಿದೆ.

ಸಾರ್ವಜನಿಕರ ದೈನಂದಿನ ಜೀವನದಲ್ಲಿ ವಿದ್ಯಾರ್ಥಿಗಳ ಸ್ಕಾಲರ್ ಶಿಪ್, ವಸತಿ ನಿಲಯಗಳಿಗೆ ಅರ್ಜಿ ಸಲ್ಲಿಸುವುದು, ಬಸ್ ಪಾಸ್ ಅಥವಾ ಇತರೆ ಯಾವುದೇ ಸರ್ಕಾರಿ ಇಲಾಖೆ ಕಾರ್ಯಗಳಿಗೆ ವಿನಾಕಾರಣ ವಿಳಂಬ ಮಾಡಿದಲ್ಲಿ ಅಥವಾ ಅಕ್ರಮವಾಗಿ ಬೇಡಿಕೆ ಇಟ್ಟಲ್ಲಿ ಲೋಕಾಯುಕ್ತ ಕಚೇರಿಗೆ ಬಂದು ದೂರು ನೀಡಿದರೆ ನಾವು ಅಂತವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತೇವೆ ಎಂದರು. ಗ್ರಾಮೀಣ ಭಾಗವೂ ಸೇರಿದಂತೆ ಎಲ್ಲಿಯಾದರೂ ಸರ್ಕಾರಿ ಜಾಗೆಗಳು ಅತಿಕ್ರಮಣ ಮಾಡಿಕೊಂಡಲ್ಲಿ ಅಥವಾ ಯಾರಾದರೂ ಸರ್ಕಾರಿ ಹುದ್ದೆಯಲ್ಲಿರುವ ನೌಕರರು ಅಕ್ರಮ ಆಸ್ತಿ ಸಂಪಾದನೆ ಮಾಡಿದ್ದು ಕಂಡು ಬಂದಲ್ಲಿ, ಅಂತವರ ವಿರುದ್ಧ ಲಿಖಿತವಾಗಿ ಅಥವಾ ನಮ್ಮ ಕಚೇರಿಗೆ ಬಂದು ದೂರು ನೀಡಿದಲ್ಲಿ ದೂರು ನೀಡಿದವರ ಹೆಸರನ್ನು ಗೌಪ್ಯವಾಗಿಡುವರ ಮೂಲಕ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮ ಜರುಗುವಂತೆ ಮಾಡುತ್ತೇವೆ.

ಸರ್ಕಾರದ ವಿವಿಧ ಇಲಾಖೆಗಳ ಕಾಮಾಗಾರಿಯಲ್ಲಿ ಕಳಪೆ ಕಾಮಗಾರಿ ಅಥವಾ ಅಕ್ರಮ ವ್ಯವಹಾರ ನಡೆದ ಕುರಿತು ದೂರು ನೀಡಿದಲ್ಲಿಯೂ ಸಹ ಅಂತಹ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳಲಾಗುವುದು.

ನಮ್ಮ ಖಾತೆ ಬದಲಾವಣೆ, ಜನನ ಹಾಗೂ ಮರಣ ಉತಾರ ನೀಡುವುದು, ಆಸ್ತಿ ಖರೀದಿ ಸೇರಿದಂತೆ ವಿವಿಧ ಕರ್ತವ್ಯಗಳಲ್ಲಿ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಲಂಚ ತೆಗೆದುಕೊಳ್ಳುವುದು ಕಂಡು ಬಂದಲ್ಲಿ ಸಾಕ್ಷಿ ಸಹಿತವಾಗಿ ದೂರು ನೀಡಿದಲ್ಲಿ ಅಂತವರ ವಿರುದ್ಧವಾಗಿ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಲಾಗುವುದು. ಲಂಚ ಸ್ವೀಕರಿಸುವುದು ಎಷ್ಟು ಅಪರಾಧವೋ, ಕೊಡುವುದು ಸಹ ಅಷ್ಟೇ ಅಪರಾಧವಾಗಿದ್ದು, ಕೊಡುವವರೂ ಸಹ ಈ ಬಗ್ಗೆ ಯೋಚಿಸಬೇಕಿದೆ ಎಂದರು.

ಸಕಾಲದಡಿಯಲ್ಲಿ ಸರ್ಕಾರ ಪ್ರತಿ ಕಾರ್ಯಗಳಿಗೂ ಸಮಯ ನಿಗದಿಪಡಿಸಿದೆ. ಮಾಹಿತಿ ಹಕ್ಕು ಅಧಿನಿಯಮವನ್ನು ದುರುಪಯೋಗ ಮಾಡಿಕೊಳ್ಳದೇ ಸದುಪಯೋಗ ಮಾಡಿಕೊಳ್ಳಬೇಕು. ಯಾವುದೇ ಅರ್ಜಿ ಸಲ್ಲಿಸುವಾಗ ಸ್ವೀಕೃತಿಯ ಪ್ರತಿಯನ್ನು ಪಡೆದುಕೊಳ್ಳುವುದು ಅವಶ್ಯವಾಗಿದೆ. ಇದರಿಂದ ನೈಜವಾಗಿ ತನಿಖೆ ನಡೆಸಲು ಅನುಕೂಲವಾಗುತ್ತದೆ. ವಿದ್ಯಾರ್ಥಿಗಳು ಕಲಂ 14ರಿಂದ 35 ರವರೆಗೆ ಎಲ್ಲ ಕಲಂಗಳನ್ನು ಓದಿ ತಿಳಿದುಕೊಳ್ಳಬೇಕು. ವಿದ್ಯಾರ್ಥಿಗಳು ಮೊಬೈಲ್ ಬಳಕೆ ಬದಲು ಪುಸ್ತಕ ಓದುವ ಹವ್ಯಾಸ ಬೆಳಸಿಕೊಳ್ಳಬೇಕು. ವಿದ್ಯಾರ್ಥಿ ಜೀವನದಲ್ಲಿ ಮೊಬೈಲ್ ಬಳಕೆ ಸರಿಯಲ್ಲ. ಅವಶ್ಯವಿದ್ದಷ್ಟುಮಾತ್ರ ಬಳಸಿಕೊಳ್ಳಬೇಕು ಎಂದರು. ಜಿಲ್ಲೆಯಲ್ಲಿ ಲೋಕಾಯುಕ್ತೆ ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ದೂರುಗಳು ದಾಖಲಾಗುತ್ತಿದ್ದು, ವಿದ್ಯಾರ್ಥಿ, ಯುವಮಿತ್ರರು ಭ್ರಷ್ಟಾಚಾರ ಕಡಿಮೆ ಮಾಡಲು ಶ್ರಮಿಸಬೇಕು. ನಿಮ್ಮ ಕಣ್ಣೆದುರಿನಲ್ಲಿ ನಡೆಯುವ ಭ್ರಷ್ಟಾಚಾರದ ಕುರಿತು ದೂರನ್ನು ದಾಖಲಿಸಬೇಕು ಎಂದರು.

ನ್ಯಾಯವಾದಿ ಮಂಜುನಾಥ ಅರಳಿ ಮಾತನಾಡಿ, ಇಂತಹ ಕಾರ್ಯಕ್ರಮಗಳ ಕುರಿತು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು. ಪ್ರಾ.ಶಂಭುಲಿಂಗ ಚಿಗರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂತಹ ಕಾರ್ಯಕ್ರಮವನ್ನು ನಮ್ಮ ಕಾಲೇಜಿನಲ್ಲಿ ಆಯೋಜಿಸುವ ಮೂಲಕ ಮಕ್ಕಳಿಗೆ ಸೂಕ್ತವಾದ ಮಾಹಿತಿ ನೀಡಿದ್ದಕ್ಕೆ ಅಭಿನಂದಿಸಿದರು. ಈ ಸಂದರ್ಭದಲ್ಲಿ ಮಕ್ಕಳೊಂದಿಗೆ ಲೋಕಾಯುಕ್ತ ಡಿವೈಎಸ್ಪಿ ಸಂವಾದ ನಡೆಸಿದರು. ಈ ಸಂದರ್ಭದಲ್ಲಿ ಅನೇಕ ಮಕ್ಕಳ ಪ್ರಶ್ನೆಗಳನ್ನು ಮಾಡಿ ಉತ್ತರ ಪಡೆದುಕೊಂಡರು. ಕಾಲೇಜು ಮೇಲ್ವಿಚಾರಣಾ ಸಮಿತಿ ಸದಸ್ಯ ಎಸ್.ಎಸ್. ಗಡ್ಡದ, ಅರುಣಾ ಪಾಟೀಲ, ಡಾ. ನಾಗರಾಜ ಹಾವಿನಾಳ, ಜಗದೀಶ ಹುಲ್ಲೂರು, ಪ್ರೊ. ಕಾವೇರಿ ಬೋಲಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಮಂಜುನಾಥ ಗದಗ ಸ್ವಾಗತಿಸಿ, ಅಜೀತ್ ಬನ್ನಿಕೊಪ್ಪ ನಿರೂಪಿಸಿ, ಲೋಕಾಯುಕ್ತ ಪಿಎಸ್ಐ ರವಿ ಪುರುಷೋತ್ತಮ ವಂದಿಸಿದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ