ಹೊಸಪೇಟೆ: ಸಾರಿಗೆ ಇಲಾಖೆಯಲ್ಲಿ ನಕಲಿ ಚಲನ್ ಸೃಷ್ಟಿಸಿ ದಂಡದ ಹಣ ಲೂಟಿ ಮಾಡಿದ ಪ್ರಕರಣವನ್ನು ಲೋಕಾಯುಕ್ತದ ತನಿಖೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿ ಅಖಿಲ ಭಾರತ ರಸ್ತೆ ಸಾರಿಗೆ ಕಾರ್ಮಿಕರ ಒಕ್ಕೂಟ ಒತ್ತಾಯಿಸಿದೆ.
ಆಟೋರಿಕ್ಷಾ ಚಾಲಕರ ಸಂಘ , ಟ್ಯಾಕ್ಸಿ- ಮ್ಯಾಕ್ಸ್ ಕ್ಯಾಬ್, ಲಘು ಗೂಡ್ಸ್ ವಾಹನ, ಮಿನಿ ಲಾರಿ ಚಾಲಕರ ಸಂಘ, ಖಾಸಗಿ ಆ್ಯಂಬುಲೆನ್ಸ್ ಚಾಲಕರ ಸಂಘ ಹಾಗೂ ಮೆಕಾನಿಕ್ಸ್ ಗಳ ಸಂಘವು ಒಂದೇ ಕಂಪನಿಗೆ ಸೇರಿದ್ದ ವಾಹನಗಳಿಗೆ ಸಂಬಂಧಪಟ್ಟಂತೆ ಹೊಸಪೇಟೆಯ ಚೆಕ್ ಪೋಸ್ಟ್ ನಲ್ಲಿ 62 , ಬಾಗೇಪಲ್ಲಿ ಚೆಕ್ ಪೋಸ್ಟ್ ನಲ್ಲಿ 47 , ಮುಳಬಾಗಿಲು ಚೆಕ್ ಪೋಸ್ಟ್ ನಲ್ಲಿ 44, ಅತ್ತಿಬೆಲೆ ಚೆಕ್ ಪೋಸ್ಟ್ ನಲ್ಲಿ 20, ಚಿತ್ರದುರ್ಗ ಚೆಕ್ ಪೋಸ್ಟ್ ನಲ್ಲಿ 14 , ವಿಜಯಪುರದಲ್ಲಿ 04 , ಹಾಗೂ ಕೊಪ್ಪಳ ಚೆಕ್ ಪೋಸ್ಟ್ ನಲ್ಲಿ 3 ನಕಲಿ ಚಲನ್ ಗಳು ಪತ್ತೆಯಾಗಿವೆ. ಒಂದೇ ಕಂಪನಿಯ ವಾಹನಗಳಿಗೆ ಸಂಬಂಧಪಟ್ಟಂತೆ ಇಷ್ಟೊಂದು ನಕಲಿ ಚಲನ್ ಗಳು ಸಿಕ್ಕಿರುವ ಸಂದರ್ಭದಲ್ಲಿ ರಾಜ್ಯದ ಹಲವು ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ರಾಜ್ಯ ಮತ್ತು ಅಂತಾರಾಜ್ಯದ ವಾಹನಗಳು ಸಂಚಾರ ಮಾಡುತ್ತಿದ್ದು, ಇದೇ ರೀತಿಯಾಗಿ ಇನ್ನು ಹಲವಾರು ವಾಹನಗಳಿಗೆ ನಕಲಿ ಚಲನ್ ಬಳಸಿ ಕೋಟ್ಯಂತರ ರು. ಲೂಟಿ ಮಾಡಿರುವ ಶಂಕೆ ಮೇಲ್ನೋಟಕ್ಕೆ ಕಂಡು ಕಂಡುಬರುತ್ತದೆ.
ಚೆಕ್ ಪೋಸ್ಟ್ ಗಳಲ್ಲಿ ಮೋಟರ್ ವಾಹನ ನಿರೀಕ್ಷಕರು ಹಾಕುವಂತಹ ದಂಡವನ್ನು ನಕಲಿ ಚಲನ್ ಸೃಷ್ಟಿಸಿ ದಂಡದ ಕೋಟ್ಯಂತರ ರು. ಲೂಟಿ ಮಾಡಿರುವ ಪ್ರಕರಣವನ್ನು ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸಿ ಸೂಕ್ತ ಕಾನೂನು ರೀತಿಯ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಸಾರಿಗೆ ಇಲಾಖೆ ಲೋಕಾಯುಕ್ತರಲ್ಲಿ ಪ್ರಕರಣ ದಾಖಲಿಸುವಲ್ಲಿ ವಿಳಂಬ ಮಾಡಿದ್ದಲ್ಲಿ ಸಂಘವು ನೇರವಾಗಿ ಮಾನ್ಯ ಲೋಕಾಯುಕ್ತರಿಗೆ ದೂರು ನೀಡಲಾಗುವುದು ಎಂದರು.ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರಿಗೆ ಆರ್ಟಿಒ ಕೆ. ದಾಮೋದರ ಅವರ ಮೂಲಕ ರವಾನಿಸಲಾಯಿತು.