ಗಣೇಶೋತ್ಸವದ ರಜತ ಸಂಭ್ರಮದಲ್ಲಿ ಶ್ರೀ ಗುಣನಾಥ ಸ್ವಾಮೀಜಿ
ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರುಮಾತಾ ಪಿತೃಗಳಿಗೆ ಹೇಗೆ ಗೌರವ ಸಮರ್ಪಿಸಬೇಕು ಎಂಬುದನ್ನು ಜಗತ್ತಿಗೆ ತಿಳಿಸಿಕೊಟ್ಟಿದ್ದು ಮಹಾಗಣಪತಿ ಎಂದು ಶೃಂಗೇರಿ ಆದಿಚುಂಚನಗಿರಿ ಶಾಖಾ ಮಠದ ಪೀಠಾಧಿಪತಿ ಶ್ರೀ ಗುಣನಾಥ ಸ್ವಾಮೀಜಿ ಹೇಳಿದರು.ಹಲಸೂರು ಗ್ರಾಮದಲ್ಲಿ ಶ್ರೀ ವಿದ್ಯಾಗಣಪತಿ ಸೇವಾ ಸಮಿತಿ ಆಯೋಜಿಸಿದ್ದ 25 ನೇ ವರ್ಷದ ಗಣೇಶೋತ್ಸವದ ರಜತ ಸಂಭ್ರಮ ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.ಸನಾತನ ಹಿಂದೂ ಸಂಸ್ಕೃತಿ ಹಾಗೂ ವೇದ ಉಪನಿಷತ್ತುಗಳನ್ನು ಋಷಿ ಮುನಿಗಳು ನೀಡಿದ್ದು, ಅದರ ಸಂರಕ್ಷಣೆ ಹಾಗೂ ಅರಿವು ಮೂಡಿಸುವಲ್ಲಿ ಗಣೇಶೋತ್ಸವ ಪ್ರಮುಖ ಪಾತ್ರವಹಿಸಿದೆ. ಹೆತ್ತ ತಾಯಿಯನ್ನು ಗೌರವದಿಂದ ಕಾಣಬೇಕು ಎಂಬುದನ್ನು ಗಣೇಶನು ತಿಳಿಸಿಕೊಟ್ಟಿದ್ದಾನೆ.ಎಲ್ಲರೂ ಒಗ್ಗಟ್ಟಿನಿಂದ ಹಬ್ಬ ಆಚರಿಸಿದರೆ ಯುವ ಪೀಳಿಗೆಗೆ ಉತ್ತಮ ಮಾರ್ಗದರ್ಶನವಾಗಲಿದೆ. ಪರಿಸರ ಸಂರಕ್ಷಿಸಿ ಪ್ರಕೃತಿಯಲ್ಲಿ ದೇವರೆಂದು ಕಾಣಬೇಕು. ವಿದ್ಯೆಗೆ ಅಧಿಪತಿಯೇ ಗಣಪತಿಯಾಗಿದ್ದು, ಈ ನಿಟ್ಟಿನಲ್ಲಿ ಭೈರವೈಕ್ಯ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ದೂರದೃಷ್ಟಿಯಿಂದ ದೇಶದ ಎಲ್ಲೆಡೆ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ವಿದ್ಯಾದಾನ ಮಾಡಿದ್ದಾರೆ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ಎಲ್ಲಾ ಶಾಖಾ ಮಠಗಳು ವಿದ್ಯಾ ದಾನ ಮಾಡುತ್ತಿವೆ ಎಂದರು. ಬಿಜೆಪಿ ಮುಖಂಡ ಟಿ.ಎಂ.ಉಮೇಶ್ ಕಲ್ಮಕ್ಕಿ ಮಾತನಾಡಿ, ಹಿಂದೂ ಸಂಸ್ಕೃತಿ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದ್ದು, ಕೆಲವು ಕಿಡಿಗೇಡಿಗಳು ಧರ್ಮಸ್ಥಳದ ಹೆಸರಿಗೆ ಕಪ್ಪು ಚುಕ್ಕೆ ತರುವಂತೆ ಮಾಡುತ್ತಿದ್ದಾರೆ. ಇದರ ವಿರುದ್ಧ ಎಲ್ಲರೂ ಸಂಘಟಿತರಾಗಬೇಕು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ರಾಜ್ಯದ ಎಲ್ಲೆಡೆ ಸ್ವಸಹಾಯ ಸಂಘಗಳ ಮೂಲಕ ಅಭಿವೃದ್ಧಿ ಹಾಗೂ ಆರ್ಥಿಕ ಸಬಲೀಕರಣಕ್ಕೆ ಸಹಕಾರ ನೀಡುತ್ತಿದ್ದಾರೆ ಎಂದರು. ಕಾಫಿ ಬೆಳೆಗಾರ ಟಿ.ಎಂ.ನಾಗೇಶ್ ಮಾತನಾಡಿ, ಆಧುನಿಕ ಭರಾಟೆಯಲ್ಲಿಯೂ ಗಣಪತಿ ಸೇವಾ ಸಮಿತಿ ಸದಸ್ಯರು ಶಿಸ್ತಿನಿಂದ ಸಮವಸ್ತ್ರ ಧರಿಸಿ ಅದ್ದೂರಿಯಾಗಿ ಗಣೇಶೋತ್ಸವ ನಡೆಸಿರುವುದು ಇತರರಿಗೆ ಮಾದರಿ ಎಂದರು. ಗಣಪತಿ ಸಮಿತಿ ಅಧ್ಯಕ್ಷ ಕೆ.ವಿ.ಗೋಪಾಲ, ಕಾರ್ಯದರ್ಶಿ ಧರ್ಮಾಧರ, ಪ್ರದೀಪ್, ಮುಖಂಡರಾದ ಕೆ.ಟಿ. ನಾರಾಯಣ, ಶಿವಲಿಂಗೇಗೌಡ, ಪವಿತ್ರ ಸುಂದರೇಶ್, ಕೆ.ಎಂ.ರತೀಶ್. ಮುಖ್ಯಶಿಕ್ಷಕ ರಾಜು, ಕೆ.ಆರ್,ದೀಪಕ್ ಕೊಳಲೆ, ಕೆ.ಎನ್.ರುದ್ರಪ್ಪಗೌಡ, ಜಿ.ಕೆ.ಚಿನ್ನೇಗೌಡ, ಎಚ್.ಟಿ.ಮಂಜಪ್ಪ, ದೇವಯ್ಯ, ನೀಲಮ್ಮ, ಎಚ್.ಎಂ.ರವೀಶ್, ಕಮಲಮ್ಮ, ದೇವರಾಜ್, ನಾಗಯ್ಯ, ಸುಶೀಲ ಮತ್ತಿತರರು ಹಾಜರಿದ್ದರು. ೩೧ಬಿಹೆಚ್ಆರ್ ೬:
ಬಾಳೆಹೊನ್ನೂರು ಸಮೀಪದ ಹಲಸೂರು ಗ್ರಾಮದಲ್ಲಿ ನಡೆದ 25ನೇ ವರ್ಷದ ಗಣೇಶೋತ್ಸವದಲ್ಲಿ ಶ್ರೀ ಆದಿಚುಂಚನಗಿರಿ ಶೃಂಗೇರಿ ಶಾಖಾ ಮಠದ ಶ್ರೀ ಗುಣನಾಥ ಸ್ವಾಮೀಜಿಯನ್ನು ಗೌರವಿಸಲಾಯಿತು. ಕೆ.ವಿ.ಗೋಪಾಲ, ಟಿ.ಎಂ.ಉಮೇಶ್, ಧರ್ಮಾಧರ, ಪ್ರದೀಪ್, ಕೆ.ಟಿ.ನಾರಾಯಣ, ಶಿವಲಿಂಗೇಗೌಡ ಇದ್ದರು.