ಶಾಂತಿಯ ಪರಿಪಾದಕ ಭಗವಾನ್‌ ಮಹಾವೀರ

KannadaprabhaNewsNetwork | Published : Apr 11, 2025 12:32 AM

ಸಾರಾಂಶ

ಭಗವಾನ್ ಮಹಾವೀರ ಜಯಂತಿಯಲ್ಲಿ ಟಿ.ರಘುಮೂರ್ತಿ ಹೇಳಿಕೆ

ಕನ್ನಡಪ್ರಭ ವಾರ್ತೆ ಚಳ್ಳಕೆರೆ

ರಾಷ್ಟ್ರಪಿತ ಮಹಾತ್ಮಗಾಂಧೀಜಿಯವರು ಶಾಂತಿಯ ಪರಿಪಾಲಕರಾಗಿದ್ದರು. ಅದೇ ರೀತಿ ಧಾರ್ಮಿಕ ಜಗತ್ತಿನಲ್ಲಿ ಶಾಂತಿಯನ್ನು ಸಾರಿದ ಮೊದಲ ಧಾರ್ಮಿಕ ಪ್ರವಾದಿ ಎಂದರೆ ಭಗವಾನ್ ಮಹಾವೀರ. ತನ್ನೇಲ್ಲಾ ಭೋಗಗಳನ್ನು ತ್ಯಾಗಮಾಡಿ ಸಮಾಜದ ಎಲ್ಲಾ ವರ್ಗಗಳಲ್ಲಿ ಶಾಂತಿ ನೆಲೆಸುವ ನಿಟ್ಟಿನಲ್ಲಿ ನಿರಂತರ ಹೋರಾಡಿದ ಮಹಾನ್ ಶ್ರೇಷ್ಠಯೋಗಿ ಮಹಾವೀರರು ಎಂದು ಶಾಸಕ ಟಿ.ರಘುಮೂರ್ತಿ ತಿಳಿಸಿದರು.

ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಬಳಿಯ ಜೈನ ಸಮುದಾಯ ಭವನದಲ್ಲಿ ಜೈನ ಸಮುದಾಯ ಹಮ್ಮಿಕೊಂಡಿದ್ದ 2624ನೇ ಮಹಾವೀರ ಜನ್ಮಕಲ್ಯಾಣೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಮಹಾವೀರರ ಜೈನ ಸಂತತಿ ಶಾಂತಿ ಪರಿಪಾಲನೆಯ ಮೂಲಕವೇ ಖ್ಯಾತರಾದವರು. ಇಂದಿಗೂ ಈ ಸಮಾಜದಲ್ಲಿ ಪರಸ್ವರ ಪ್ರೀತಿ, ವಿಶ್ವಾಸ, ನಂಬಿಕೆ ಮನೆ ಮಾಡಿದೆ. ಮಹಾವೀರರ ಆದರ್ಶಗಳನ್ನು ಪಾಲನೆ ಮಾಡುವುದರಲ್ಲಿ ಅವರು ಎಂದೂ ಹಿಂದೆ ಉಳಿದಿಲ್ಲ. ಇಂದಿಗೂ ಮಹಾವೀರರು ಎಲ್ಲರಿಗೂ ಆದರ್ಶರಾಗಿದ್ದಾರೆ ಎಂದು ಹೇಳಿದರು.

ಜೈನಸಮಾಜದ ಗೌರವಾಧ್ಯಕ್ಷ ಡಿ.ಅಂಬಣ್ಣ, ಅಧ್ಯಕ್ಷ ಡಿ.ಭರತರಾಜ್, ಕಾರ್ಯದರ್ಶಿ ಗೌರಿಪುರ ಪಾರ್ಶ್ವನಾಥ, ಡಿ.ವಿಜಯೇಂದ್ರ, ಪ್ರಭಾಕರ, ಎನ್.ಜೆ.ವೆಂಕಟೇಶ್, ಮಿಥನ್, ರತ್ನರಾಜ, ನಾಗರಾಜ, ವಿಮುಕ್ತ, ಕುಂದನ್, ಚೇತನ್, ದರ್ಶನ್, ರಾಜೇಶ್, ಉತ್ತಮ್, ನವೀನ್, ತಹಸೀಲ್ದಾರ್ ರೇಹಾನ್‌ಪಾಷ, ನಗರಸಭೆ ಅಧ್ಯಕ್ಷೆ ಆರ್.ಮಂಜುಳಾ, ಉಪಾಧ್ಯಕ್ಷ ಸುಮ, ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಮಲ್ಲಿಕಾರ್ಜುನ್, ಸದಸ್ಯ ಕೆ.ವೀರಭದ್ರಪ್ಪ, ನಾಮಿನಿ ಸದಸ್ಯರಾದ ಬಡಗಿಪಾಪಣ್ಣ, ಗ್ಯಾರಂಟಿ ಸಮಿತಿ ತಾಲ್ಲೂಕು ಅಧ್ಯಕ್ಷ ಗದ್ದಿಗೆ ತಿಪ್ಪೇಸ್ವಾಮಿ, ತಾಲೂಕು ಕೆಡಿಪಿ ಸದಸ್ಯ ಅಂಗಡಿ ರಮೇಶ್, ಕಾಂಗ್ರೆಸ್ ಮುಖಂಡ ಎಸ್.ಎಚ್.ಸೈಯದ್, ಆರ್.ಪ್ರಸನ್ನಕುಮಾರ್ ಮುಂತಾದವರು ಭಾಗವಹಿಸಿದ್ದರು.

ತಾಲೂಕು ಕಚೇರಿಯಲ್ಲೂ ಮಹಾವೀರ ಜಯಂತಿ

ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ಜೈನ ಸಮುದಾಯದ ಮುಖಂಡರೊಂದಿಗೆ ತಾಲೂಕು ಕಚೇರಿಯಲ್ಲಿ ಮಹಾವೀರ ಜಯಂತಿ ಆಚರಿಸಲಾಯಿತು.

ಪ್ರಾಸ್ತಾವಿಕವಾಗಿ ಮಾತನಾಡಿದ ತಹಸೀಲ್ದಾರ್ ರೇಹಾನ್‌ ಪಾಷ, ಸಮಾಜಕ್ಕೆ ಶಾಂತಿಮಂತ್ರವನ್ನು ಸಾರಿದ ಮಹಾವೀರರ ಆದರ್ಶಗಳು ಎಲ್ಲರಿಗೂ ಪ್ರೇರಣೆ ನೀಡುತ್ತವೆ. ಶಾಂತಿಯಿಂದ ಮಾತ್ರ ಉತ್ತಮ ಬದುಕಿನ ಕಲ್ಪನೆ ಸಾಧ್ಯವೆಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಟಿ.ರಘುಮೂರ್ತಿ ಮಾತನಾಡಿ, ಸರ್ಕಾರ ಇಂತಹ ಮಹಾನೀಯರ ತತ್ವಾದರ್ಶಗಳಿಗೆ ಶಕ್ತಿ ತುಂಬಲು ಜನರಿಗೆ ಸಾಕಷ್ಟು ಧಾರ್ಮಿಕ ಜಾಗೃತಿ ಮೂಡಿಸಲು ಇಂತಹ ಕಾರ್ಯಕ್ರಮಗಳನ್ನು ಸರ್ಕಾರ ನಿರಂತರ ಮಾಡುತ್ತಾ ಬಂದಿದೆ. ಭಗವಾನ್ ಮಹಾವೀರರು ಎಲ್ಲಾವನ್ನು ತ್ಯಾಗಮಾಡಿ ಸಮಾಜಕ್ಕಾಗಿ ಶಾಂತಿಯನ್ನು ಆಹ್ವಾನಿಸಿದವರು. ನಾವೆಲ್ಲರೂ ಅವರ ಆದರ್ಶಗಳ ಮೌಲ್ಯ ಅರಿತು ನಡೆಯೋಣ ಎಂದು ಹೇಳಿದರು.

Share this article