ಉಡುಪಿ: ಮಧ್ಯಪ್ರಾಚ್ಯ ಯುದ್ಧದಿಂದ ಉಂಟಾಗಿರುವ ಅಡುಗೆ ಅನಿಲ ಪೂರೈಕೆಯಿಂದ ಹೊಟೇಲುಗಳಿಗೆ ಆಗುತ್ತಿರುವ ಸಮಸ್ಯೆ ಬಗ್ಗೆ ಜಿಲ್ಲಾಧಿಕಾರಿ ಗಮನಕ್ಕೆ ತಂದು 2 ದಿನಗಳೊಳಗೆ ಸಮಸ್ಯೆ ಪರಿಹರಿಸಲು ಪ್ರಯತ್ನಿಸುವುದಾಗಿ ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೊಟೇಲು ಮಾಲೀಕರಿಗೆ ಭರವಸೆ ನೀಡಿದ್ದಾರೆ.ಅಡುಗೆ ಅನಿಲ ಪೂರೈಕೆ ವ್ಯತ್ಯಯ ಬಗ್ಗೆ ಉಡುಪಿ ಜಿಲ್ಲಾ ಹೊಟೇಲ್ ಮಾಲೀಕರ ಸಂಘದ ವತಿಯಿಂದ ಶುಕ್ರವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ಸಭೆಯಲ್ಲಿ ಉಡುಪಿ ಜಿಲ್ಲಾ ಹೊಟೇಟೆಲ್ ಮಾಲೀಕರ ಸಂಘದ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ, ಪ್ರಮುಖ ಹೊಟೇಲ್ ಮಾಲೀಕರಾದ ಶಿವಪ್ರಸಾದ್ ಶೆಟ್ಟಿ, ನಾಗೇಶ್ ಭಟ್, ಲಕ್ಷ್ಮಣ್ ವಾಗ್ಳೆ, ಅಡುಗೆ ಅನಿಲ ಪೂರೈಕೆದಾರ ದಿನೇಶ್ ಪುತ್ರನ್ ಉಪಸ್ಥಿತರಿದ್ದರು. ಜಿಲ್ಲಾಧಿಕಾರಿಗೆ ತಲ್ಲೂರು ಮನವಿ: ಇದೇ ಸಂದರ್ಭ ಜಿಲ್ಲಾ ಹೊಟೇಲು ಮಾಲೀಕರ ಸಂಘದ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಅವರ ನೇತೃತ್ವದಲ್ಲಿ ಹೊಟೇಲುಗಳಿಗೆ ಅಡುಗೆ ಅನಿಲ ಪೂರೈಕೆ ವ್ಯತ್ಯಯವನ್ನು ಸರಿಪಡಿಸುವಂತೆ ಜಿಲ್ಲಾಧಿಕಾರಿ ಸ್ವರೂಪ ಅವರಿಗೆ ಮನವಿ ಸಲ್ಲಿಸಲಾಯಿತು. ಉಡುಪಿಯಲ್ಲಿ ಸಾವಿರಾರು ಮಂದಿ ವಿದ್ಯಾರ್ಥಿಗಳು, ಕಾರ್ಮಿಕರು, ಉದ್ಯೋಗಿಗಳು, ಆಟೋ - ಬಸ್ ಚಾಲಕರು ಸಿಬ್ಬಂದಿಗಳು ಊಟಕ್ಕೆ ಉಪಾಹಾರಕ್ಕೆ ಹೊಟೇಲ್ಗಳನ್ನೇ ಅವಲಂಭಿಸಿದ್ದಾರೆ. ಆದರೆ ಅನಿಲ ಪೂರೈಕೆ ವ್ಯತ್ಯಯದಿಂದ ಹೊಟೇಲ್ಗಳನ್ನು ಮುಚ್ಚುವುದು ಅನಿವಾರ್ಯವಾಗುತ್ತಿದೆ. ಇದರಿಂದ ಹೊಟೇಲ್ ಮಾಲೀಕರು- ಕಾರ್ಮಿಕರು ಮಾತ್ರವಲ್ಲ, ಹೊಟೇಲ್ಗಳನ್ನು ಅವಲಂಭಿಸಿರುವ ಸಾವಿರಾರು ಮಂದಿಗೆ, ತರಕಾರಿ- ದೀನಸಿ ಅಂಗಡಿದಾರರೂ ಸಂಕಷ್ಟಕ್ಕೊಳಗಾಗಿದ್ದಾರೆ. ಆದ್ದರಿಂದ ವಾಣಿಜ್ಯ ಅನಿಲ ಪೂರೈಕೆ ವ್ಯತ್ಯವನ್ನು ಸರಿಪಡಿಸಬೇಕು ಎಂದು ಮನವಿ ಮಾಡಲಾಯಿತು. ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ, ಈ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ, ಜೊತೆಗೆ ದೀರ್ಘಕಾಲದಲ್ಲಿ ಸಮಸ್ಯೆಯಾಗದಂತೆ ಇಂಡಕ್ಷನ್ ಸ್ವವ್ಗಳ ಪೂರೈಕೆ ಬಗ್ಗೆಯೂ ಯೋಚಿಸಲಾಗುತ್ತಿದೆ ಎಂದರು.