ಎಲ್.ಟಿ.ಎ.ಬಿ. ಕೇಬಲ್ ಮತ್ತು ಎಚ್.ಟಿ.ಪವರ್ಡ್ ಕಂಡಕ್ಟರ್ ಅಳವಡಿಕೆ

KannadaprabhaNewsNetwork | Published : May 16, 2025 1:53 AM
Follow Us

ಸಾರಾಂಶ

ಎಲ್.ಟಿ.ಎ.ಬಿ. ಕೇಬಲ್ ಮತ್ತು ಎಚ್.ಟಿ.ಪವರ್ಡ್ ಕಂಡಕ್ಟರ್ ಅಳವಡಿಕೆಯಿಂದ ವಿದ್ಯುತ್ ಅವಘಡಗಳನ್ನು ತಪ್ಪಿಸಬಹುದು. ರಾಜ್ಯದಲ್ಲಿ ಪ್ರಥಮ ಬಾರಿಗೆ ಬೆಂಗಳೂರು ನಗರ ಹೊರತುಪಡಿಸಿ ತಾಲೂಕು ಕೇಂದ್ರವಾದ ಶಿರಾದಲ್ಲಿ ಎಲ್.ಟಿ.ಎ.ಬಿ. ಕೇಬಲ್ ಅಳವಡಿಸಲಾಗುತ್ತಿದೆ ಎಂದು ಶಾಸಕ ಟಿ ಬಿ ಜಯಚಂದ್ರ ತಿಳಿಸಿದರು.

ಕನ್ನಡಪ್ರಭ ವಾರ್ತೆ ಶಿರಾ ಎಲ್.ಟಿ.ಎ.ಬಿ. ಕೇಬಲ್ ಮತ್ತು ಎಚ್.ಟಿ.ಪವರ್ಡ್ ಕಂಡಕ್ಟರ್ ಅಳವಡಿಕೆಯಿಂದ ವಿದ್ಯುತ್ ಅವಘಡಗಳನ್ನು ತಪ್ಪಿಸಬಹುದು. ರಾಜ್ಯದಲ್ಲಿ ಪ್ರಥಮ ಬಾರಿಗೆ ಬೆಂಗಳೂರು ನಗರ ಹೊರತುಪಡಿಸಿ ತಾಲೂಕು ಕೇಂದ್ರವಾದ ಶಿರಾದಲ್ಲಿ ಎಲ್.ಟಿ.ಎ.ಬಿ. ಕೇಬಲ್ ಅಳವಡಿಸಲಾಗುತ್ತಿದೆ ಎಂದು ಶಾಸಕ ಟಿ ಸಬಿ ಜಯಚಂದ್ರ ತಿಳಿಸಿದರು. ಅವರು ಜ್ಯೋತಿನಗರ ವಾರ್ಡ್ ನಂ. ೨ರಲ್ಲಿ ಬೆಸ್ಕಾಂ ವತಿಯಿಂದ ಎಲ್.ಟಿ.ಎ.ಬಿ. ಕೇಬಲ್ ಮತ್ತು ಎಚ್.ಟಿ.ಪವರ್ಡ್ ಕಂಡಕ್ಟರ್ ಅಳವಡಿಕೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಮನೆಯ ಅಕ್ಕಪಕ್ಕದಲ್ಲಿ ಹಾದು ಹೋಗಿರುವ ವಿದ್ಯುತ್ ಕಂಬಗಳ ಲೈನ್‌ಗಳಿಂದ ಸಂಭವಿಸುವ ಅವಘಡಗಳಿಂದ ಈಗಾಗಲೇ ಸಾಕಷ್ಟುಸಾವು ನೋವು ಸಂಭವಿಸಿವೆ. ಇದನ್ನು ತಪ್ಪಿಸುವ ಸಲುವಾಗಿ ಎಲ್ ಟಿ ಎ ಬಿ ಕೇಬಲ್ ಅಳವಡಿಸಬೇಕೆಂಬ ನನ್ನ ಕನಸು ಇಂದು ನನಸಾಗುತ್ತಿದೆ. ಕರ್ನಾಟಕದಲ್ಲೇ ಮೊದಲು ಶಿರಾದಲ್ಲಿ ಈ ಕಾಮಗಾರಿ ಪ್ರಾರಂಭಿಸುವುದು ಸಂತಸ ತಂದಿದೆ. ಶಿರಾ ತಾಲೂಕಿನಾದ್ಯಂತ ಎಲ್.ಟಿ.ಎ.ಬಿ. ಕೇಬಲ್ ಅಳವಡಿಸಲು ಅಂದಾಜು ೮೫ ಕೋಟಿ ರು. ವೆಚ್ಚವಾಗಲಿದೆ, ಪ್ರಾರಂಭಿಕ ಹಂತ ದಲ್ಲಿ ನಗರ ಪ್ರದೇಶಕ್ಕೆ ೧೭ ಕೋಟಿ ರುಗಳ ಕಾಮಗಾರಿಗೆ ಇಂದು ಚಾಲನೆ ನೀಡಲಾಗುತ್ತಿದೆ, ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ತಾಲೂಕಿನಾದ್ಯಂತ ಅಳವಡಿಸುತ್ತೇವೆ ಎಂದು ಭರವಸೆ ನೀಡಿದರು.ಬೆಸ್ಕಾಂ ವೃತ್ತ ಅಧೀಕ್ಷಕ ಇಂಜಿನಿಯರ್ ನರಸಿಂಹಮೂರ್ತಿ ಮಾತನಾಡಿ, ಈಗ ಅಳವಡಿಸಿರುವ ವೈರ್‌ಗಳು ಕಟ್ ಆಗಿ ಬಿದ್ದರೆ ಅದನ್ನು ತುಳಿದು ಅಪಘಾತಗಳು ಸಂಭವಿಸುತ್ತಿದ್ದವು. ಎಲ್.ಟಿ.ಎ.ಬಿ. ಕೇಬಲ್ ಅಳವಡಿಕೆಯಿಂದ ಅಂತಹ ಅವಘಡಗಳನ್ನು ತಪ್ಪಿಸಬಹುದು ಹಾಗೂ ಮಳೆ ಗಾಳಿಯ ಸಂದರ್ಭದಲ್ಲಿ ವಿದ್ಯುತ್ ಸಂಪರ್ಕ ಕಡಿತವಾಗುವುದಿಲ್ಲ. ಇದು ರಾಜ್ಯಾದ್ಯಂತ ಅಳವಡಿಕೆಯಾದರೆ ಸಾರ್ವಜನಿಕರಿಗೆ ತುಂಬ ಅನುಕೂಲವಾಗುತ್ತದೆ ಎಂದರು. ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಶಾಂತರಾಜು ಮಾತನಾಡಿ ಎಲ್.ಟಿ.ಎ.ಬಿ. ಕೇಬಲ್ ಮತ್ತು ಎಚ್.ಟಿ.ಪವರ್ಡ್ ಕಂಡಕ್ಟರ್ ಅಳವಡಿಕೆಯು ಶಿರಾ ನಗರದಲ್ಲಿ ಪ್ರಾರಂಭಿಕ ಹಂತದಲ್ಲಿ ಕಾಮಗಾರಿ ಚಾಲನೆಗೊಂಡಿದ್ದು, ಇದನ್ನು ತಾಲೂಕಿನಾದ್ಯಂತ ಅಳವಡಿಸಿದರೆ ಮಳೆ ಗಾಳಿ ಸಂದರ್ಭದಲ್ಲಿ ಯಾವುದೇ ವಿದ್ಯುತ್ ಅವಘಡವಾಗುವುದಿಲ್ಲ ಎಂದರು. ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಜಿಷಾನ್ ಮೊಹಮದ್, ಉಪಾಧ್ಯಕ್ಷ ಲಕ್ಷ್ಮೀಕಾಂತ್, ಸ್ಥಾಯಿ ಸಮಿತಿಯ ಅಧ್ಯಕ್ಷ ಅಜಯ್ ಕುಮಾರ್, ಪೌರಾಯುಕ್ತ ರುದ್ರೇಶ್, ಕಾರ್ಯನಿರ್ವಾಹಕ ಇಂಜಿನಿಯರ್ ಜಗದೀಶ್, ಸಹಾಯಕ ಇಂಜಿನಿಯರ್ ಪ್ರದೀಪ್ ಕುಮಾರ್, ನಗರಸಭೆ ಸದಸ್ಯರಾದ ತೇಜು ಬಾನು ಪ್ರಕಾಶ್, ಬಿ.ಎಂ.ರಾಧಾಕೃಷ್ಣ, ಮಹೇಶ್, ನಗರಸಭೆಸಭೆ ಆಶ್ರಯ ಸದಸ್ಯರಾದ ನೂರುದ್ದೀನ್, ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಮಣಿಕಂಠ, ನಗರ ಅಧ್ಯಕ್ಷ ಅಂಜನ್‌ಕುಮಾರ್, ಮುಖಂಡರುಗಳಾದ ರೂಪೇಶ್ ಎಸ್‌ಎನ್ ಕೃಷ್ಣಯ್ಯ, ಭಾನುಪ್ರಕಾಶ್ ಸೇರಿದಂತೆ ಹಲವರು ಹಾಜರಿದ್ದರು.