ಕನ್ನಡಪ್ರಭ ವಾರ್ತೆ ಮಂಡ್ಯ
ಸಾವಿರಾರು ವರ್ಷಗಳಿಂದ ಕೃಷಿಯನ್ನೇ ಬದುಕಾಗಿಸಿಕೊಂಡ ರೈತರ ಹಕ್ಕು ರಕ್ಷಿಸಬೇಕು. ಹೀಗಾಗಿ ರೈತರು, ಜೆಡಿಎಸ್ ಪಾದಯಾತ್ರೆ ಬೆಂಬಲ ವ್ಯಕ್ತಪಡಿಸಿ ಎರಡನೇ ದಿನದ ಪಾದಯಾತ್ರೆಯಲ್ಲಿ ಫೌಂಡೇಶನ ಅಧ್ಯಕ್ಷ ಮಹಾಲಿಂಗೇಗೌಡ ಮುದ್ದನಘಟ್ಟ ಹಾಗೂ ಪದಾಧಿಕಾರಿಗಳು, ಕಾರ್ಯಕರ್ತರು ಭಾಗವಹಿಸಿದ್ದರು.
ಸಾವಿರಾರು ವರ್ಷಗಳಿಂದ ಭೂಮಿ ನಂಬಿ ಕೃಷಿ ಮಾಡಿಕೊಂಡು ಬಂದಿರುವ ರೈತರು ಕೇವಲ ಭೂಮಿ ಮಾಲೀಕರಲ್ಲ. ನಮ್ಮ ಅನ್ನದಾತರು. ದೇಶದ ಆಹಾರ ಭದ್ರತೆಯ ಬೆನ್ನೆಲುಬು. ರೈತರ ಕೃಷಿಭೂಮಿ ಹಾಗೂ ಬದುಕಿನ ಮೇಲೆ ಪರಿಣಾಮ ಬೀರುವ ಯಾವುದೇ ಅಭಿವೃದ್ಧಿ ಯೋಜನೆಯನ್ನು ಜಾರಿಗೆ ತರುವ ಮುನ್ನ ಅವರ ಹಿತಾಸಕ್ತಿಯನ್ನು ಮೊದಲ ಆದ್ಯತೆಯಾಗಿ ಪರಿಗಣಿಸಬೇಕು ಎಂದು ಎಂ.ಎಂ.ಫೌಂಡೇಶನ್ ಒತ್ತಾಯಿಸಿತು.ಬಿಡದಿ ಟೌನ್ಶಿಪ್ ಯೋಜನೆಗೆ ರೈತರು, ಸ್ಥಳೀಯರ ಸಮಸ್ಯೆಯನ್ನು ಸರ್ಕಾರ ಮುಕ್ತ ಮನಸ್ಸಿನಿಂದ ಆಲಿಸಬೇಕು. ರೈತರ ಒಪ್ಪಿಗೆ, ನ್ಯಾಯಸಮ್ಮತ ಪರಿಹಾರ, ಪುನರ್ವಸತಿ ಮತ್ತು ಅವರ ಭವಿಷ್ಯದ ಜೀವನೋಪಾಯಕ್ಕೆ ಭದ್ರತೆ ಕಲ್ಪಿಸದೆ ಯಾವುದೇ ನಿರ್ಧಾರ ಕೈಗೊಳ್ಳಬಾರದು ಎಂದು ಆಗ್ರಹಿಸಿತು.
ರೈತ ಉಳಿದರೆ ಕೃಷಿ ಉಳಿಯುತ್ತದೆ, ಕೃಷಿ ಉಳಿದರೆ ಅನ್ನ ಉಳಿಯುತ್ತದೆ, ಅನ್ನ ಉಳಿದರೆ ದೇಶ ಉಳಿಯುತ್ತದೆ. ರೈತರ ಕಣ್ಣೀರು ಸುರಿಯುವ ಅಭಿವೃದ್ಧಿ ನಮಗೆ ಬೇಡ, ರೈತರ ಬದುಕು ಉಳಿಸುವ, ಭವಿಷ್ಯದ ಪೀಳಿಗೆಗೆ ಆಹಾರ ಭದ್ರತೆ ನೀಡುವ ಅಭಿವೃದ್ಧಿ ಬೇಕು ಎಂದು ಒತ್ತಾಯಿಸಿದರು.