ಮಾದಾಪುರ ಗ್ರೇಡ್1 ಗ್ರಾಮ ಪಂಚಾಯಿತಿ ಗ್ರಾಮ ಸಭೆ

KannadaprabhaNewsNetwork |  
Published : Mar 18, 2025, 12:36 AM IST
ಚಿತ್ರ.1: ಶ್ರೀಸಿದ್ಧಿಬುದ್ಧಿ ವಿನಾಯಕ ದೇವಾಲಯದ ಸಮೀಪದ ಸಮುದಾಯ ಭವನದಲ್ಲಿ  ಗ್ರಾಮಸಭೆಯನ್ನು ಉದ್ದೇಶಿಸಿ ಗ್ರಾ.ಪಂ.ಅಧ್ಯಕ್ಷರಾದ ಮರುವಂಡ ಜಾಲಿ ಸೋಮಣ್ಣ ಮಾತನಾಡುತ್ತಿರುವುದು. | Kannada Prabha

ಸಾರಾಂಶ

ಮಾದಾಪುರ ಗ್ರೇಡ್‌ 1 ಗ್ರಾಮ ಪಂಚಾಯಿತಿ ಗ್ರಾಮಸಭೆಯಲ್ಲಿ ಕುಡಿಯುವ ನೀರು, ವಸತಿ ಕಾರ್ಯಪ್ಪ ಬಡಾವಣೆಗೆ ಹೆಚ್ಚಿನ ಅನುದಾನ ನೀಡುತ್ತಿರುವ ಬಗ್ಗೆ ಗ್ರಾಮಸ್ಥರು ಚರ್ಚೆಗೆ ಗ್ರಾಸ ನೀಡಿದರು.

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ಮಾದಾಪುರ ಗ್ರೇಡ್1 ಗ್ರಾಮ ಪಂಚಾಯಿತಿ ಗ್ರಾಮ ಸಭೆಯಲ್ಲಿ ಕುಡಿಯುವ ನೀರು, ವಸತಿ ಕಾರ್ಯಪ್ಪ ಬಡಾವಣೆಗೆ ಹೆಚ್ಚಿನ ಅನುದಾನ ನೀಡುತ್ತಿರುವ ಬಗ್ಗೆ ಗ್ರಾಮಸ್ಥರು ಚರ್ಚೆಗೆ ಗ್ರಾಸ ನೀಡಿದರು.

ಮಾದಾಪುರ ಗ್ರಾಮ ಪಂಚಾಯಿತಿಯ 2024-25ನೇ ಸಾಲಿನ ಗ್ರಾಮ ಸಭೆಯು ಶ್ರೀಸಿದ್ಧಿಬುದ್ಧಿ ವಿನಾಯಕ ದೇವಾಲಯದ ಸಮೀಪದ ಸಮುದಾಯ ಭವನದಲ್ಲಿ ಗ್ರಾ.ಪಂ.ಅಧ್ಯಕ್ಷರಾದ ಮರುವಂಡ ಜಾಲಿ ಸೋಮಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಕಳೆದ ಫೆ. 18 ರಂದು ಕರೆದ ಗ್ರಾಮಸಭೆಯನ್ನು ಅಧಿಕಾರಿಗಳು ಕೆಲವರ ಗೈರು ಹಾಜರಿಯಿಂದ ಸಭೆಯನ್ನು ಮುಂದೂಡಿದ್ದು, 12 ರಂದು ಕರೆದ ಗ್ರಾಮಸಭೆಯಲ್ಲಿ ಗ್ರಾಮಸ್ಥರು ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಚರ್ಚಿಸಿದರು. ಜಲಜೀವನ್ ಯೋಜನೆಯಡಿ ಕಾಮಗಾರಿ ಅಪೂರ್ಣವಾಗಿದೆ. ಮಾದಾಪುರ ಗ್ರಾಮಸ್ಥರು ಕುಡಿಯುವ ನೀರು ಸಿಗುತ್ತಿಲ್ಲ ಎಂದು ಕೊಪ್ಪತ್ತಂಡ ಗಣೇಶ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಈ ಬಗ್ಗೆ ಮಧ್ಯಪ್ರವೇಶಿಸಿ ಮಾತನಾಡಿದ ಗ್ರಾ.ಪಂ. ಅಧ್ಯಕ್ಷ ಸೋಮಣ್ಣ ಅವರು ಮಾದಾಪುರ ಗ್ರಾಮ ಪಂಚಾಯಿತಿಯ ಕುಡಿಯುವ ನೀರಿನ ಸಮಸ್ಯೆಗೆ ಪೂರ್ಣ ವಿರಾಮ ಹಾಕಬೇಕು. ಏಪ್ರಿಲ್ 15 ರ ಒಳಗೆ ಈ ಕಾಮಗಾರಿ ಪೂರ್ಣಗೊಳ್ಳಬೇಕೆಂದು ಅಭಿಯಂತರರಾದ ವೀರೇಂದ್ರ ಅವರಿಗೆ ತಾಕೀತು ಮಾಡಿದರು.

ಮಾದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಂಬೂರು ಗ್ರಾಮದಲ್ಲಿ 2018 ರಲ್ಲಿ ಕೊಡಗಿನಲ್ಲಿ ಘಟಿಸಿದ ಜಲಪ್ರಳಯದಿಂದ ಮನೆ ಕಳಕೊಂಡವರಿಗೆ 394 ಮನೆಗಳನ್ನು ವಿತರಿಸಲಾಗಿತ್ತು. ಆದರೆ ಅವೈಜ್ಞಾನಿಕವಾಗಿ ನಿರ್ಮಿಸಿದ ಮನೆಯಿಂದ ತಾಜ್ಯ ವಸ್ತುಗಳು ಚರಂಡಿ ಮನೆ ಸಮೀಪ ಕಟ್ಟಿ ನಿಲ್ಲುತ್ತಿದ್ದು, ದುರ್ವಾಸನೆ ಬರುತ್ತಿದೆ.

ಈ ವಿಭಾಗಕ್ಕೆಅನುದಾನ ಗ್ರಾಮ ಪಂಚಾಯಿತಿಯಿಂದ ನೀಡಲಾಗುತ್ತಿದೆ ಎಂದು ಮಜೀದ್, ಸೋಮಪ್ಪ, ಕೊಪ್ಪತ್ತಂಡ ಗಣೇಶ ಪ್ರಸ್ತಾಪಿಸಿದರು. ಅಧ್ಯಕ್ಷರು ಉತ್ತರಿಸಿ ಇದರಿಂದ ಇತರೆ ವಾರ್ಡಿನ ಸಮಸ್ಯೆಗೆ ಅನುದಾನ ಕೊರತೆಯಾಗಿದೆ. ಈ ಬಗ್ಗೆ ಜಿ.ಪಂ.ಇಲಾಖೆಗೆ ಲಿಖಿತ ಮಾಹಿತಿ ನೀಡಲಾಗಿದೆ ಎಂದರು.

ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಬಡಾವಣೆಯಲ್ಲಿ ಕೆಲ ನಿವಾಸಿಗಳು ಸ್ಥಳಾಂತರವಾಗಿದ್ದು, ಮನೆ ಬಾಗಿಲು ಹಾಕಿದೆ ಅಲ್ಲಿನ ನಲ್ಲಿ ನೀರಿನ ಟ್ಯಾಪ್ ತೆರದು ಬಿಟ್ಟಿರುವುದರಿಂದ ಇತರೆ ನಿವಾಸಿಗಳಿಗೆ ನೀರಿಗೆ ತೊಂದರೆಯಾಗಿದೆ ಎಂದು ನೀರುಗಂಟಿ ಇ ಕಂಠಿ ಸಭೆಗೆ ಮಾಹಿತಿ ನೀಡಿದರು.

ಕೃಷಿ ಇಲಾಖೆ ಅಡಿಕೆ ಗಿಡ ರೈತರಿಗೆ ನೀಡಬೇಕು ಎಂದು ಮಂಡೆಯಂಡ ಗಣೇಶ, ಮಜೀದ್ ಅಧಿಕಾರಿಗಳಿಗೆ ಸಲಹೆಯಿತ್ತರು.

ಫೀಲ್ಡ್‌ ಮಾರ್ಷಲ್ ಕಾರ್ಯಪ್ಪ ಬಡಾವಣೆಯಲ್ಲಿ ಇತ್ತೀಚೆಗೆ ಮನೆ ವಿತರಿಸಲಾಗಿದ್ದು, ಲೈನ್ ಮನೆಯಲ್ಲಿ ಮನೆ ಇಲ್ಲದವರಿಗೆ ನೀಡಲಾಗಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗಿದೆ ಎಂದು ಅಧ್ಯಕ್ಷರು ತಿಳಿಸಿದರು.

ಮಾದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 400 ಕ್ಕೂ ಅಧಿಕ ಮಂದಿ ಕೂಲಿ ಕಾರ್ಮಿಕರು ನಿವೇಶನ ರಹಿತರಾಗಿದ್ದಾರೆ. ಅವರಿಗೆ ವಸತಿ ಕಲ್ಪಿಸಲು ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಸದಸ್ಯ ಸೋಮಪ್ಪ ಆಗ್ರಹಿಸಿದರು.

ಸಭೆಗೆ ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿ ಮಾಹಿತಿ ನೀಡಿದರು. ಅಧ್ಯಕ್ಷರ ಕಾರ್ಯಕ್ರಮ ಬಗ್ಗೆ ಗ್ರಾಮಸ್ಥರು ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಭೆಯಲ್ಲಿ ಪಿಡಿಓ ಗೂಳಪ್ಪ ಕೂತಿನ ಗ್ರಾ.ಪಂ.ಉಪಾಧ್ಯಕ್ಷ ಸುರೇಶ ಬಾವೆ, ಸದಸ್ಯರಾದ ಕೆ.ಸಿ.ಶೀಲಾ, ನಿರೂಪ, ಮಾನಸ, ಕೆ.ಎ.ಲತೀಫ್, ಪಿ.ಡಿ.ಅಂತೋಣಿ (ತಂಗಚ್ಚ), ಮನುಬಿದ್ದಪ್ಪ, ದಮಯಂತಿ, ಗೋಪಿ ಭಾಗೀರಥಿ, ಜ್ಯೋತಿ, ಲೆಕ್ಕಾಧಿಕಾರಿ ಅನಿತಾ, ಸಿಬ್ಬಂದಿ ಸಿ.ಸಿ.ರವೀಂದ್ರ ಹಾಗೂ ಪ್ರೀತಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

''ದ್ವೇಷ ಮಸೂದೆಯಿಂದ ಭಿನ್ನ ದನಿ ದಮನ ಆಗಲ್ಲ ''
3 ವರ್ಷ ಮೊಮ್ಮಗನಿಗೆ ಬಾರಲ್ಲಿ ಹೆಂಡ ಕುಡಿಸಿದ ಅಜ್ಜ: ಆಕ್ರೋಶ