ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪಮಾದಾಪುರ ಗ್ರಾಮ ಪಂಚಾಯಿತಿ ವತಿಯಿಂದ ಮಹಿಳಾ ಗ್ರಾಮ ಸಭೆ ಹಾಗೂ ಸಂಜೀವಿನಿ ಮಹಿಳಾ ಒಕ್ಕೂಟ ವತಿಯಿಂದ ಸಂತೆ ಮೇಳ ಏರ್ಪಡಿಸಲಾಯಿತು. ಮಾದಾಪುರ ಗ್ರಾಮ ಆಡಳಿತ ಅಧಿಕಾರಿ ಹೇಮಂತ್ಕುಮಾರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಂಜೀವಿನಿ ಮಹಿಳಾ ಒಕ್ಕೂಟದಿಂದ ಸರ್ಕಾರದ ಕಾರ್ಯಸೂಚಿಯಂತೆ ಮಹಿಳೆಯರ ಸ್ವಾವಲಂಬಿ ಬದುಕಿಗೆ ಆನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.ಮಹಿಳೆಯರು ಅರ್ಥಿಕವಾಗಿ ಸಬಲೀಕರಣಗೊಂಡು ಸ್ವಾವಲಂಬಿ ಜೀವನ ಕಟ್ಟಿಕೊಂಡರೆ ದೇಶ ಸದೃಢಗೊಳ್ಳಲಿದೆ. ಈ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರ ಮಹಿಳೆಯರ ಅಭಿವೃದ್ಧಿಗಾಗಿ ವಿವಿಧ ಯೋಜನೆಗಳನ್ನು ಜಾರಿಗೆ ತಂದು ಸಹಾಯಧನ ಸಹ ನೀಡುತ್ತಿದೆ. ಪುರುಷರ ಸಹ ಮಹಿಳೆಯ ಸ್ವಾವಲಂಬಿ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಪೂರಕ ವಾಕಾನಪಣ ನಿರ್ಮಿಸಿಕೊಡಬೇಕೆಂದು ಅವರು ಸಲಹೆ ನೀಡಿದರು. ಮಾದಾಪುರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೆ. ರವಿ ನಾಯರ್ ಮಾತನಾಡಿ, ಮಾದಾಪುರ ಆರೋಗ್ಯ ಕೇಂದ್ರಕ್ಕೆ ಕ್ಷಯರೋಗ ಮುಕ್ತ ಪಂಚಾಯಿತಿ ಎಂದು ಕಂಚಿನ ಪದಕ ಲಭಿಸಿದೆ. ಮುಂದೆ ಕ್ಷಯರೋಗ ಮುಕ್ತ ಗ್ರಾಮ ಪಂಚಾಯಿತಿ ಎಂದು ಆಗಲು ಗ್ರಾಮಸ್ಥರು ಸಹಕಾರ ನೀಡಬೇಕೆಂದು ಸಲಹೆ ನೀಡಿದರು. ಮೇಳದಲ್ಲಿ ವಿವಿಧ ರೀತಿಯ ತರಕಾರಿಗಳು, ಹೋಂ ಮೇಡ್ ವೈನ್, ತಿಂಡಿ ತಿನಿಸುಗಳು, ಸೋಪ್ಪುಗಳನ್ನು ಮಾರಾಟ ನಡೆಸಿದರು. ಕಣ್ಣಿನ ಉಚಿತ ತಪಾಸಣೆ ಶಿಬಿರ ನಡೆಸಲಾಯಿತು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಸಾವಿತ್ರಿ, ವಲಯ ಮೇಲ್ವಿಚಾರಕಿ ಪದ್ಮಶ್ರೀ, ತಾಲೂಕು ವ್ಯವಸ್ಥಾಪಕ ಜಯಚಂದ್ರ, ಗ್ರಾ.ಪಂ.ಕಾರ್ಯದರ್ಶಿ ಅನಿತಾ, ಸಿಬ್ಬಂದಿ ರವೀಂದ್ರ ಮತ್ತಿತರರು ಇದ್ದರು.