ಕನ್ನಡಪ್ರಭ ವಾರ್ತೆ ಶಿವಮೊಗ್ಗ ಸಚಿವರಿದ್ದ ಕಾರನ್ನು ಸಚಿವ ಮಧು ಬಂಗಾರಪ್ಪ ಅವರು ಸ್ವತಃ ಚಾಲನೆ ಮಾಡಿಕೊಂಡು ಜಿಲ್ಲಾಧಿಕಾರಿ ಕಚೇರಿ ಸಭೆಗೆ ಆಗಮಿಸಿ ಎಲ್ಲರ ಗಮನ ಸೆಳೆದರು.
ಜ.12ರಂದು ಯುವನಿಧಿ ಯೋಜನೆಗೆ ಅಧಿಕೃತ ಚಾಲನೆ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಆಗಮಿಸಲಿದ್ದಾರೆ. ಈ ಹಿನ್ನೆಲೆ ಫ್ರೀಡಂ ಪಾರ್ಕ್ನಲ್ಲಿ ಸಿದ್ಧತೆ ಪರಿಶೀಲನೆಗೆ ಸಚಿವ ಮಧು ಬಂಗಾರಪ್ಪ ಅವರು ಸಹೋದ್ಯೋಗಿ ಸಚಿವರಾದ ಡಾ. ಶರಣ ಪ್ರಕಾಶ್ ಪಾಟೀಲ್, ಎಂ.ಸಿ. ಸುಧಾಕರ್ ಹಾಗೂ ಶಾಸಕ ಬೇಳೂರು ಗೋಪಾಲಕೃಷ್ಣ ಜೊತೆ ತೆರಳಿದ್ದರು. ವೀಕ್ಷಣೆ ಬಳಿಕ ಅಲ್ಲಿಂದ ಜಿಲ್ಲಾಧಿಕಾರಿ ಕಚೇರಿಗೆ ಬರುವಾಗ ತಮ್ಮ ಖಾಸಗಿ ಕಾರನ್ನು ಏರಿದ ಮಧು ಬಂಗಾರಪ್ಪ ಅವರು, ಉಳಿದ ಸಚಿವರು ಹಾಗೂ ತಮ್ಮ ವಿರುದ್ಧ ಸದಾ ಹೇಳಿಕೆ ನೀಡುತ್ತಿದ್ದ ಬೇಳೂರು ಗೋಪಾಲಕೃಷ್ಣ ಅವರನ್ನು ಕಾರಿನಲ್ಲಿ ಕೂರಿಸಿಕೊಂಡರು. ತಾವು ಬೆಲ್ಟ್ ಧರಿಸಿದ್ದಲ್ಲದೆ, ಉಳಿದ ಸಚಿವರಿಗೂ ಸೀಟ್ ಬೆಲ್ಟ್ ಧರಿಸುವಂತೆ ತಿಳಿಸಿ ಕಾರನ್ನು ಚಾಲನೆ ಮಾಡಿಕೊಂಡು ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದರು.
- - - -ಫೋಟೋ:ಸಹೋದ್ಯೋಗಿ ಸಚಿವರನ್ನು ತಮ್ಮ ಖಾಸಗಿ ಕಾರಿನಲ್ಲಿ ಕೂರಿಸಿಕೊಂಡು ಸ್ವತಃ ತಾವೇ ಚಾಲನೆ ಮಾಡುತ್ತಿರುವ ಸಚಿವ ಮಧು ಬಂಗಾರಪ್ಪ.