ಕನ್ನಡಪ್ರಭ ವಾರ್ತೆ ಮಡಿಕೇರಿ ಮಡಿಕೇರಿ ದಸರಾ ಹಿನ್ನೆಲೆಯಲ್ಲಿ ನಗರದ ಗಾಂಧಿ ಮೈದಾನದಲ್ಲಿ ಕಾಂತಾರ ದೈವದ ಕಲಾಕೃತಿ ಆಕರ್ಷಿಸುತ್ತಿದೆ. ಮೈಸೂರಿನ ಮರಳು ಶಿಲ್ಪಿ ಎಂ.ಎನ್.ಗೌರಿ, ಗಾಂಧಿ ಮೈದಾನದ ಕಲಾ ಸಂಭ್ರಮ ವೇದಿಕೆಯ ಮುಂಭಾಗದಲ್ಲಿ ಕಳೆದ ಮೂರು ದಿನಗಳ ಸತತ ಪರಿಶ್ರಮದ ಮೂಲಕ ದೈವದ ಮರಳಿನ ಕಲಾಕೃತಿಯನ್ನು ಸುಂದರವಾಗಿ ರೂಪಿಸಿದ್ದಾರೆ. ‘ಕಾಂತಾರ’ ಚಲನಚಿತ್ರದಲ್ಲಿ ಬರುವ ದೈವ ಪ್ರಕೃತಿಯ ರಕ್ಷಣೆಯ ದ್ಯೋತಕವಾಗಿ ಕಂಡು ಬರುತ್ತದೆ. ಈ ಹಿನ್ನೆಲೆ ಕೊಡಗಿನ ಸುಂದರ ಪರಿಸರ ರಕ್ಷಣೆಯಾಗಲಿ ಎನ್ನುವ ಸಂದೇಶವನ್ನು ನೀಡುವ ಮೂಲ ಚಿಂತನೆಯಡಿ ಕಾಂತಾರದ ದೈವವನ್ನು ಮರಳು ಶಿಲ್ಪವಾಗಿಸಿದ್ದೇನೆ ಎಂದು ಗೌರಿ ಹೇಳಿದರು. ಮರಳು ಕಲಾಕೃತಿ ಬಳಿ ಸಾರ್ವಜನಿಕರು ಫೋಟೋ ತೆಗೆಸಿಕೊಂಡರು.