2025ಕ್ಕೆ ನವ ತೀರ್ಥಂಕರರ ಮಹಾ ಮಸ್ತಕಾಭಿಷೇಕ

KannadaprabhaNewsNetwork |  
Published : Jul 14, 2024, 01:41 AM ISTUpdated : Jul 14, 2024, 12:02 PM IST
ಧರ್ಮಸ್ಥಳದಲ್ಲಿ ಮಹಾಮಸ್ತಕಾಭಿಷೇಕ

ಸಾರಾಂಶ

11 ದಿನ ನಡೆಯುವ ಈ ಕಾರ್ಯಕ್ರಮಕ್ಕೆ ರಾಷ್ಟ್ರಪತಿ, ಪ್ರಧಾನಮಂತ್ರಿ ಸೇರಿದಂತೆ ರಾಷ್ಟ್ರದ ವಿವಿಧ ರಾಜ್ಯದ 27 ನೇತಾರರನ್ನು ಆಹ್ವಾನಿಸಲಾಗಿದೆ. 14 ಭಟ್ಟಾರಕರು ಮಹಾ ಮಸ್ತಾಭಿಷೇಕ ಸಮಿತಿಯ ಗೌರವಾಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ.

ಹುಬ್ಬಳ್ಳಿ:  ಶ್ರೀ ನವಗ್ರಹ ತೀರ್ಥದ ನವ ತೀರ್ಥಂಕರ ಮಹಾ ಮಸ್ತಕಾಭಿಷೇಕವನ್ನು 2025ರ ಜನವರಿ ತಿಂಗಳಲ್ಲಿ ವರೂರು ಬಳಿಯ ಶ್ರೀ ನವಗ್ರಹ ತೀರ್ಥ ಕ್ಷೇತ್ರದಲ್ಲಿ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ ಎಂದು ಆಚಾರ್ಯ ಶ್ರೀ ಗುಣಧರನಂದಿ ಮಹಾರಾಜರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಈ ವಿವರ ನೀಡಿದ ಅವರು, 24 ತೀರ್ಥಂಕರಿಗೆ ಅಭಿಷೇಕ ಮಾಡಿಸಲಾಗುವುದು. ಈ ಕಾರ್ಯಕ್ರಮಕ್ಕೆ ವಿವಿಧ 120ಕ್ಕೂ ಹೆಚ್ಚು ದೇಶಗಳಿಂದ ಸಾವಿರಾರು ಭಕ್ತರು ಆಗಮಿಸಲಿದ್ದು, ಅಮೆರಿಕಾದ ಜಿತೇಂದ್ರ ಜೈನ್ ನೇತೃತ್ವ ವಹಿಸುವರು. ಕಾರ್ಯಕ್ರಮದ ಯಶಸ್ಸಿಗಾಗಿ ದೇಶದ ವಿವಿಧ ರಾಜ್ಯಗಳಿಂದ 16 ಯಜಮಾನರನ್ನು ನಿಯೋಜಿಸಲಾಗಿದೆ. ಮಹಾ ಮಸ್ತಾಭಿಷೇಕದ ಅಧ್ಯಕ್ಷರಾಗಿ ಡಾ. ವೀರೇಂದ್ರ ಹೆಗ್ಗಡೆ ಹಾಗೂ ಸ್ವಾಗತ ಸಮಿತಿ ಅಧ್ಯಕ್ಷರಾಗಿ ಸಚಿವ ಡಿ. ಸುಧಾಕರ ಕಾರ್ಯನಿರ್ವಹಿಸಲಿದ್ದಾರೆ ಎಂದರು.

ವಿಶ್ವ ಶಾಂತಿಗಾಗಿ 9999 ಹೋಮ-ಹವನದೊಂದಿಗೆ ಪೂರ್ಣಾಹುತಿ ನಡೆಯಲಿದೆ. 5500 ದಂಪತಿಗಳಿಂದ ಮಹಾ ಮಸ್ತಾಭಿಷೇಕ ನಿಮಿತ್ತ ನವ ತೀರ್ಥಂಕರರಿಗೆ ಪೂಜೆ ಸಲ್ಲಿಸಲಿದ್ದಾರೆ.124 ಮಹಾರಥಗಳು ಮೆರವಣಿಗೆಯಲ್ಲಿ ಭಾಗವಹಿಸಲಿವೆ. 200 ದಿಗಂಬರ ಸ್ವಾಮೀಜಿಗಳು, 405 ಸರ್ವಧರ್ಮ ಸ್ವಾಮೀಜಿಗಳಿಗೆ ಆಹ್ವಾನಿಸಲಾಗಿದೆ. ಒಟ್ಟು 11 ದಿನ ನಡೆಯುವ ಈ ಕಾರ್ಯಕ್ರಮಕ್ಕೆ ರಾಷ್ಟ್ರಪತಿ, ಪ್ರಧಾನಮಂತ್ರಿ ಸೇರಿದಂತೆ ರಾಷ್ಟ್ರದ ವಿವಿಧ ರಾಜ್ಯದ 27 ನೇತಾರರನ್ನು ಆಹ್ವಾನಿಸಲಾಗಿದೆ. 14 ಭಟ್ಟಾರಕರು ಮಹಾ ಮಸ್ತಾಭಿಷೇಕ ಸಮಿತಿಯ ಗೌರವಾಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಮಹಾರಾಜರು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಶ್ರವಣಬೆಳಗೊಳದ ಚಾರು ಕೀರ್ತಿ ಭಟ್ಟಾರಕ ಸ್ವಾಮೀಜಿ, ಕನಕಗಿರಿಯ ಭುವನ ಕೀರ್ತಿ ಭಟ್ಟಾರಕ ಸ್ವಾಮೀಜಿ ಇದ್ದರು.

ಇಂದು ಪೂರ್ವಭಾವಿ ಸಭೆ

ಜು. 14ರಂದು ಬೆಳಗ್ಗೆ 10ಕ್ಕೆ ಶ್ರೀನವಗ್ರಹ ತೀರ್ಥದ ನವತೀರ್ಥಂಕರರ ದ್ವಿತೀಯ ಮಹಾಮಸ್ತಕಾಭಿಷೇಕ-2025 ಹಾಗೂ ನವನಿರ್ಮಿತ ಸುಮೇರು ಪರ್ವತ ಲೋಕಾರ್ಪಣೆ- ಜಿನಬಿಂಬ ಪಂಚಕಲ್ಯಾಣ ಪ್ರತಿಷ್ಠಾ ಮಹೋತ್ಸವ ಕುರಿತು ಪೂರ್ವಭಾವಿ ಸಭೆ ಹಮ್ಮಿಕೊಳ್ಳಲಾಗಿದೆ. ಅಲ್ಪಸಂಖ್ಯಾತ ಇಲಾಖೆಯ ಕಾರ್ಯದರ್ಶಿ ಮನೋಜ ಜೈನ್‌ ಉದ್ಘಾಟಿಸುವರು. ಅತಿಥಿಗಳಾಗಿ ಸಚಿವ ಡಿ. ಸುಧಾಕರ, ಶಾಸಕ ಅಭಯ ಪಾಟೀಲ, ಮಾಜಿ ಸಚಿವರಾದ ವೀರಕುಮಾರ ಪಾಟೀಲ, ಅಭಯಚಂದ್ರ ಜೈನ್, ಧಾರವಾಡ ಎಸ್‌ಡಿಎಂ ಉಪಕುಲಪತಿ ಡಾ. ನಿರಂಜನಕುಮಾರ, ಮಾಜಿ ಶಾಸಕ ಸಂಜಯ ಪಾಟೀಲ, ಕಲ್ಲಪ್ಪ ಮಗೆಣ್ಣವರ, ಮೋಹನ ಶಾಹ ಸೇರಿದಂತೆ 16 ಭಟ್ಟಾರಕರು ಹಾಗೂ ವಿವಿಧ ರಾಜ್ಯಗಳಿಂದ ಸಾವಿರಾರು ಸಮಾಜ ಬಾಂಧವರೊಂದಿಗೆ ಪಾಲ್ಗೊಳ್ಳುವರು ಎಂದು ಆಚಾರ್ಯ ಶ್ರೀ ಗುಣಧರನಂದಿ ಮಹಾರಾಜರು ಹೇಳಿದರು.

ಜೈನ ನಿಗಮ, ಮಂಡಳಿ ಸ್ಥಾಪಿಸಿ:

ಪ್ರಮುಖವಾಗಿ ಜೈನ ಸಮುದಾಯದವರ ವಿವಿಧ ಬೇಡಿಕೆಗಳನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಈಡೇರಿಸಬೇಕು. ಈ ನಿಟ್ಟಿನಲ್ಲಿ ಭಟ್ಟಾರಕರು ಸೇರಿಕೊಂಡು ಜು. 14ರಂದು ನಡೆಯುವ ಸಭೆಯಲ್ಲಿ 11 ವಿಷಯದ ಬಗ್ಗೆ ಚರ್ಚಿಸಲಿದ್ದೇವೆ‌. ಈ ಹಿಂದೆ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದ ವೇಳೆ ಆಚಾರ್ಯರಿಗೆ ಭದ್ರತೆ ಹಾಗೂ ಉಳಿದುಕೊಳ್ಳಲು ವಸತಿ ಕಲ್ಪಿಸಿದೆ. ಆದರೆ, ಪ್ರಮುಖ ಬೇಡಿಯಾಗಿರುವ ಜೈನರ ನಿಗಮ, ಮಂಡಳಿ ಸ್ಥಾಪನೆ ಮಾಡಿಲ್ಲ. ಈ ನಿಟ್ಟಿನಲ್ಲಿ ಸರ್ಕಾರ ಪ್ರಯತ್ನಿಸಬೇಕು ಎಂದು ಗುಣಧರನಂದಿ ಮಹಾರಾಜರು ಒತ್ತಾಯಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

5 ಪಾಲಿಕೆಗಳಲ್ಲಿ ಜಯಭೇರಿ ಬಾರಿಸಲು ಬಿಜೆಪಿಗೆ ಒಳ್ಳೆ ಅವಕಾಶ
ಸಿಎಂ ಗಾದಿ ಸಂಚಲನ : ನಾನು ಸಿಎಂ ಆಗಲಿ ಎಂಬುದು ಜನರ ಬಯಕೆ ಎಂದರು ಡಿಕೆಶಿ