ಮಹದಾಯಿ ಜಾರಿಗೆ ಆಗ್ರಹಿಸಿ 2016ರಲ್ಲಿ ನಡೆದ ರೈಲ್ ತಡೆ ಹೋರಾಟದಲ್ಲಿ ಪಾಲ್ಗೊಂಡಿದ್ದ ಬಾಗಲಕೋಟೆಯ ರೈತ ಕುತುಬುದ್ದೀನ್ ಖಾಜಿ ಬಂಧನ ಖಂಡನೀಯ.
ನವಲಗುಂದ:
ಮಹದಾಯಿ ಜಾರಿಗೆ ಆಗ್ರಹಿಸಿ 2016ರಲ್ಲಿ ನಡೆದ ರೈಲ್ ತಡೆ ಹೋರಾಟದಲ್ಲಿ ಪಾಲ್ಗೊಂಡಿದ್ದ ಬಾಗಲಕೋಟೆಯ ರೈತ ಕುತುಬುದ್ದೀನ್ ಖಾಜಿ ಬಂಧನ ಖಂಡನೀಯ ಎಂದು ರೈತ ಹೋರಾಟಗಾರ ಲೋಕನಾಥ ಹೆಬಸೂರ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹದಾಯಿ ಯೋಜನೆ ಜಾರಿಗಾಗಿ 2016ರಲ್ಲಿ ಹುಬ್ಬಳ್ಳಿಯಲ್ಲಿ ರೈಲ್ ತಡೆ ಮಾಡಲಾಗಿತ್ತು. ಅನೇಕ ರೈತರ ಮೇಲೆ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿ ಹಲವು ಬಾರಿ ವಾರೆಂಟ್ ನೀಡಿದ್ದರು. 2020-21ರಲ್ಲಿ ವಾರೆಂಟ್ ಮಾಡಿ ನಮ್ಮನ್ನು ಬಂಧಿಸಲು ಮುಂದಾಗಿದ್ದರು. ಆಗ ನಾವು ನಮ್ಮನ್ನು ಬಂಧಿಸುವುದಾದರೆ ನಡು ರಸ್ತೆಯಲ್ಲಿ ಬೇಡಿ ಹಾಕಿ ಕರೆದುಕೊಂಡು ಹೋಗಿ ಎಂದು ಪಟ್ಟು ಹಿಡಿದಾಗ ನವಲಗುಂದ ಪೊಲೀಸರ ಮಧ್ಯಸ್ಥಿಕೆ ವಹಿಸಿದ್ದರಿಂದ ನಮ್ಮನ್ನು ಬಿಟ್ಟು ಹೋದರು. ಹೋರಾಟದಲ್ಲಿ ಖಾಜಿ ಕೂಡಾ ನಮ್ಮೊಂದಿಗೆ ಭಾಗಿಯಾಗಿದ್ದರು. ಇದೀಗ ಅವರನ್ನು ಬಂಧಿಸಿದ್ದು ಅವರ ಮೇಲೆ ಏನಾದರೂ ಕ್ರಮಕೈಗೊಂಡರೆ ರೈಲ್ವೆ ಪೊಲೀಸರೇ ನೇರ ಹೊಣೆಗಾರರು. ನಾವು ಹೋರಾಟ ಮಾಡಿದ್ದು ನೀರಿಗಾಗಿ. ನೀವು ನಮ್ಮನ್ನು ಜೈಲಿಗೆ ಕಳುಹಿಸುತ್ತಿದ್ದೀರಿ. ಇದು ಯಾವ ನ್ಯಾಯ, ಕೂಡಲೇ ಅವರನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು.ರೈಲ್ವೆ ಪೊಲೀಸರು ಬಂಧಿಸಿಕೊಂಡು ಹೋದ ರೈತ ಹೋರಾಟಗಾರನನ್ನು ಈ ತಕ್ಷಣ ಬಿಡುಗಡೆ ಮಾಡಬೇಕು. ಇಲ್ಲದೆ ಹೋದರೆ ರೈಲ್ವೆ ಪೊಲೀಸ್ ಠಾಣೆ ಎದುರು ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.ಈ ವೇಳೆ ಅಸಂಘಟಿತ ರೈತ ಹೋರಾಟ ಸಮಿತಿ ಅಧ್ಯಕ್ಷ ರಘುನಾಥ ನಡುವಿನಮನಿ, ವಿಠ್ಠಲ್ ಗೊನ್ನಾಗರ, ರಮೇಶ ನಾಗಣ್ಣವರ, ಭರಮಪ್ಪ ಕಾತರಕಿ, ವೆಂಕಣ್ಣ ಮೇಟಿ, ಸೋಮರಡ್ಡಿ ದೇವರಡ್ಡಿ ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.