
ಕನ್ನಡಪ್ರಭ ವಾರ್ತೆ ಗುಡ್ಡೆಹೊಸೂರು
ಮಂಗಳವಾರ ಬೆಳಗ್ಗೆ ಮಿಥುನ ಲಗ್ನದಲ್ಲಿ ಚೌಡೇಶ್ವರಿ ದೇವರ ಶಿಖರ ಪ್ರತಿಷ್ಠೆ ಹಾಗೂ ಮಹಾ ಕುಂಭಾಭಿಷೇಕ, ಕರ್ಕಾಟಕ ಲಗ್ನದಲ್ಲಿ ಶ್ರೀ ಬಸವೇಶ್ವರ ಹಾಗೂ ಗುಳಿಗ ದೇವರ ಪುನರ್ ಪ್ರತಿಷ್ಠೆ ಮಹಾಪೂಜೆ ನೆರವೇರಿತು.
ಧಾರ್ಮಿಕ ಮಹೋತ್ಸವದಲ್ಲಿ ವಿರಾಜಪೇಟೆ ಅರಮೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಪಾಲ್ಗೊಂಡು ಭಕ್ತ ಜನರಿಗೆ ಆಶೀರ್ವಚನ ನೀಡಿದರು. ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಮಾತನಾಡಿ, ವೈಜ್ಞಾನಿಕವಾಗಿ ನಾವು ಎಷ್ಟೇ ಮುಂದುವರಿದರೂ ಕೂಡ ಅಂತರಂಗದ ನೆಮ್ಮದಿಗೆ ದೇವತಾ ಪೂಜೋತ್ಸವಗಳು ಮುಖ್ಯ ಪಾತ್ರವಹಿಸುತ್ತವೆ ಎಂದರು.ಮುಂದುವರೆದ ವಿಜ್ಞಾನ ಅನೇಕ ಅನುಕೂಲಗಳನ್ನು ನೀಡಿದರೂ ಕೂಡ ಮನುಷ್ಯನ ಮಾನಸಿಕ ನೆಮ್ಮದಿಗೆ ಭಜನೆ, ಸತ್ಸಂಗ, ದೇವಾಲಯಗಳಿಂದ ಮಾತ್ರ ಸಾಧ್ಯ. ಹಾಗಾಗಿ ಭಾರತೀಯ ಪೂರ್ವಜರು ದೇಶವನ್ನೇ ದೇವಾಲಯವಾಗಿಸಿ ಕೊಂಡು ಧಾರ್ಮಿಕ ಆಚರಣೆಗಳಿಗೆ ಹೆಚ್ಚು ಒತ್ತು ಕೊಟ್ಟಿದ್ದರು ಎಂದರು. ವಿರಾಜಪೇಟೆಯ ಅರಮೇರಿ ಮಠದ ಶ್ರೀ ಶಾಂತಮಲ್ಲಿ ಕಾರ್ಜುನ ಸ್ವಾಮೀಜಿ ಮಾತನಾಡಿ, ಜಗತ್ತಿಗೆ ದೇವಾಲಯವಾದ ಭಾರತದಲ್ಲಿ ವಿಜ್ಞಾನ ತಂತ್ರಜ್ಞಾನ ಸಾಕಷ್ಟು ಬೆಳೆದಿದ್ದರೂ ಕೂಡ ಮನುಷ್ಯನ ಅಂತರಂಗದ ಸಂತಸವನ್ನು ದೈವಿಕ ಆಚರಣೆಗಳು ಹೆಚ್ಚಿಸುತ್ತವೆ ಎಂದರು. ಕಾಫಿ ಉದ್ಯಮಿ ಎಸ್ ಎಲ್ ಎನ್ ವಿಶ್ವನಾಥನ್, ವೆಂಕಿ ವಿಶ್ವನಾಥ್, ಕೊಡಗು ವೀರಶೈವ ಮಹಾಸಭಾ ಅಧ್ಯಕ್ಷ ಹೆಚ್.ವಿ.ಶಿವಪ್ಪ, ಕಾರ್ಯದರ್ಶಿ ಶಾಂಭಶಿವಯ್ಯ, ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್.ಮೂರ್ತಿ, ದೇವಾಲಯ ಸಮಿತಿ ಅಧ್ಯಕ್ಷ ಬಿ.ಟಿ.ಮಲ್ಲಿಕಾರ್ಜುನ, ಕಾರ್ಯದರ್ಶಿ ಸಂತೋಷ, ಉಪಾಧ್ಯಕ್ಷ ದಾದಪ್ಪ, ಬಸವೇಶ್ವರ ದೇವಾಲಯದ ಅರ್ಚಕ ಶಿವಕುಮಾರ್, ಚೌಡೇಶ್ವರಿ ದೇವಾಲಯದ ಅರ್ಚಕ ಅಣ್ಣು ಪೂಜಾರಿ, ನಟರಾಜು, ಮೋಹನ್ ಇದ್ದರು.