ಉಪ್ಪಿನಂಗಡಿ: ಮಹಾಲಯ ಅಮವಾಸ್ಯೆಯ ಬುಧವಾರದಂದು ಗತಿಸಿದ ಪಿತೃಗಳ ಮೋಕ್ಷ ಪ್ರಾಪ್ತಿಗಾಗಿ ಸಾವಿರಾರು ಭಕ್ತಾದಿಗಳು ಉಪ್ಪಿನಂಗಡಿಯ ನೇತ್ರಾವತಿ ಕುಮಾರಧಾರಾ ನದಿ ಸಂಗಮ ತಟದ ಶ್ರೀ ಸಹಸ್ರಲಿಂಗೇಶ್ವರ ದೇವಾಲಯದಲ್ಲಿ ಪಿಂಡ ಪ್ರದಾನ, ತಿಲಹೋಮಾದಿ ಕಾರ್ಯಗಳನ್ನು ನೆರವೇರಿಸಿದರು. ಗತಿಸಿದ ಪಿತೃಗಳಿಗೆ ಸದ್ಗತಿ ಬಯಸಿ ಮಹಾಲಯ ಅಮವಾಸ್ಯೆಯ ದಿನದಂದು ಪಿಂಡ ಪ್ರದಾನಾದಿ ಕಾರ್ಯಗಳನ್ನು ನೆರವೇರಿಸಿದರೆ, ಮೋಕ್ಷ ಪ್ರಾಪ್ತಿಯಾಗುತ್ತದೆ ಎನ್ನುವುದು ಸನಾತನ ನಂಬಿಕೆ. ಈ ನಿಟ್ಟಿನಲ್ಲಿ ಬುಧವಾರದಂದು ನಸುಕಿನಿಂದಲೇ ದೇವಾಲಯಕ್ಕೆ ಆಗಮಿಸಿದ ಭಕ್ತಾದಿಗಳು ತಮ್ಮ ತಮ್ಮ ಪಿತೃಗಳಿಗಾಗಿ ಅರ್ಚಕರ ಮೂಲಕ ತಿಲಹೋಮಾದಿ ಕಾರ್ಯಗಳನ್ನು ನೆರವೇರಿಸಿ ಪಿಂಡ ಪ್ರದಾನ ಮಾಡಿದರು. ನೇತ್ರಾವತಿ ಕುಮಾರಧಾರಾ ನದಿ ಸಂಗಮ ಸ್ಥಳದಲ್ಲಿ ಪವಿತ್ರ ತೀರ್ಥ ಸ್ನಾನವನ್ನು ಮಾಡಿ ಶ್ರೀ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.
ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೆ ರಾಧಾಕೃಷ್ಣ ನಾಯಕ್ ನೇತೃತ್ವದ ಸಮಿತಿ ಸದಸ್ಯರು , ದೇವಳದ ಸಿಬ್ಬಂದಿ ವರ್ಗ ಸಹಕರಿಸಿದರು.