ಶಿವಾನಂದ ಗೊಂಬಿ
ಹುಬ್ಬಳ್ಳಿ:ಜೈನ ಸಮುದಾಯ ಶ್ರದ್ಧಾ ಕೇಂದ್ರವಾಗಿರುವ ತಾಲೂಕಿನ ವರೂರಲ್ಲಿರುವ ನವಗೃಹ ತೀರ್ಥದಲ್ಲಿ ನಡೆಯಲಿರುವ ಮಹಾಮಸ್ತಕಾಭಿಷೇಕ ಹಾಗೂ ಸುಮೇರು ಪರ್ವತ ಜಿನಬಿಂಬ ಪ್ರತಿಷ್ಠಾ ಪಂಚಕಲ್ಯಾಣ ಮಹೋತ್ಸವಕ್ಕೆ ಸಕಲ ಸಿದ್ಧತೆ ಪೂರ್ಣಗೊಂಡಿದೆ.
ಜ.15ರಿಂದ 26ರ ವರೆಗೆ ವರೂರಿನ ದಿಗಂಬರ ಜೈನ ನವಗ್ರಹ ತೀರ್ಥ ಕ್ಷೇತ್ರದಲ್ಲಿ 61 ಅಡಿ ಎತ್ತರದ ಪಾರ್ಶ್ವನಾಥ ಭಗವಾನ್ರ ಮಹಾಮಸ್ತಕಾಭಿಷೇಕ ನಡೆಯಲಿದೆ. ಹತ್ತು ಹಲವು ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ವರೂರ ಕ್ಷೇತ್ರ ವೇದಿಕೆಯಾಗಿದೆ. ದೇಶ-ವಿದೇಶಗಳಿಂದ ಗಣ್ಯಾತಿಗಣ್ಯರು ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ. ಮಸ್ತಕಾಭಿಷೇಕಕ್ಕೆ ಬರುವವರ ಅನುಕೂಲಕ್ಕಾಗಿ ವೆಬ್ಸೈಟ್ ಸಿದ್ಧಪಡಿಸಲಾಗಿದೆ.2007ರಲ್ಲಿ ಈ ಕ್ಷೇತ್ರ ಲೋಕಾರ್ಪಣೆಗೊಂಡಿತು. 12 ವರ್ಷದ ಹಿಂದೆ ಮಹಾಮಸ್ತಕಾಭಿಷೇಕ ಮಾಡಲಾಗಿತ್ತು. ಇದೀಗ ನಡೆಯುತ್ತಿರುವುದು ದ್ವಿತೀಯ ಮಹಾಮಸ್ತಕಾಭಿಷೇಕ. ಆಚಾರ್ಯ ಶ್ರೀಗಳಾದ ಕುಂತುಸಾಗರ, ಶ್ರೀಪದ್ಮನಂದಿ, ಶ್ರೀದೇವನಂದಿ, ಶ್ರೀಸೂರ್ಯಸಾಗರ, ಶ್ರೀ ಗುಪ್ತಿನಂದಿ ಸೇರಿದಂತೆ ಇತರ ಮಹಾರಾಜರು, ಪೇಜಾವರ ಶ್ರೀಗಳು, ಆದಿಚುಂಚನಗಿರಿ ಮಠದ ಸ್ವಾಮೀಜಿ, ಕಾಗಿನೆಲೆ ನಿರಂಜನಾನಂದಪುರಿ ಶ್ರೀಗಳು ಸೇರಿದಂತೆ ನಾಡಿನ ವಿವಿಧ ಮಠಾಧೀಶರು, ಸಾಧುಸಂತರು ಸೇರಿದಂತೆ ಗಣ್ಯಾತಿಗಣ್ಯರು ಸಾಕ್ಷಿಯಾಗಲಿದ್ದಾರೆ.
ಇಂದು ಚಾಲನೆ:ಜ. 15ರಂದು ಮಧ್ಯಾಹ್ನ 3.30ಕ್ಕೆ ರಾಜ್ಯಪಾಲ ಥಾವರಚಂದ ಗೆಹಲೋತ್ ಚಾಲನೆ ನೀಡಲಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಶಾಸಕ ಎಂ.ಆರ್. ಪಾಟೀಲ, ಕುಂತುಸಾಗರ ಮಹಾರಾಜ ಸೇರಿದಂತೆ ಹಲವರು ಪಾಲ್ಗೊಳ್ಳಲಿದ್ದಾರೆ. ‘ನವಗ್ರಹ ತೀರ್ಥ ಕ್ಷೇತ್ರ’ ಎಂದೇ ಖ್ಯಾತಿ ಪಡೆದಿರುವ ಸುಕ್ಷೇತ್ರ ವರೂರಿನಲ್ಲಿ ಹನ್ನೆರಡು ವರ್ಷಗಳ ಬಳಿಕ ಮಹಾಮಸ್ತಕಾಭಿಷೇಕ ಕಾರ್ಯಕ್ರಮ ನಡೆಸಲು ನಿರ್ಧರಿಸಲಾಗಿದೆ. ಗುಣಧರನಂದಿ ಮುನಿ ಮಹಾರಾಜರ ನೇತೃತ್ವದಲ್ಲಿ ಜೈನ ತೀರ್ಥಂಕರರ ಸಮಾಗಮದಲ್ಲಿ ಮಹಾಮಸ್ತಕಾಭಿಷೇಕ ನಡೆಯಲಿದೆ.ಮಹಾಮಸ್ತಕಾಭಿಷೇಕ ಹಲವು ವಿಶೇಷತೆಗಳಿಂದ ಕೂಡಿರಲಿದೆ. 27 ಪದಾರ್ಥಗಳು, 18 ದಿಗಂಬರ ಆಚಾರ್ಯರು, ಶ್ವೇತಾಂಬರ, ದಿಗಂಬರ ಹಾಗೂ ಮೂರ್ತಿಪೂಜಕರು ಆಗಮಿಸಲಿದ್ದಾರೆ. 9 ದೇಶಗಳ 9 ವಿಶೇಷ ಹೂವುಗಳಿಂದ ಪುಷ್ಪವೃಷ್ಟಿ ಮಾಡಲಾಗುತ್ತದೆ. ಸರ್ವಧರ್ಮ ಸಮ್ಮೇಳನದ ಜೊತೆಗೆ ಜೈನ ಸಾಹಿತ್ಯ ಸಮ್ಮೇಳನ ನಡೆಯಲಿದೆ. 24 ಆನೆ, ಕುದುರೆ ಹಾಗೂ 108 ರಥದಿಂದ ಮಹಾಮೆರವಣಿಗೆ ನಡೆಯುತ್ತಿರುವುದು ವಿಶೇಷ. ಅಮೆರಿಕ, ಫ್ರಾನ್ಸ್, ಜರ್ಮನ್ ಹಾಗೂ ಇನ್ನಿತರ ದೇಶಗಳಿಂದಲೂ ಭಕ್ತರು ಆಗಮಿಸುತ್ತಿದ್ದಾರೆ. ಹತ್ತು ದಿನಗಳ ಕಾಲ ರಾಜ್ಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾದ ಕಲಾವಿದರು ಭಾಗಿಯಾಗಲಿದ್ದಾರೆ. ರಾಷ್ಟ್ರಪತಿ ಸೇರಿದಂತೆ ನಾನಾ ರಾಜ್ಯಗಳ ಮುಖ್ಯಮಂತ್ರಿಗಳು, ರಾಜ್ಯಪಾಲರು, ಕೇಂದ್ರ ಸಚಿವರು ಭಾಗಿಯಾಗಲಿದ್ದಾರೆ.
ಯಾವಾಗ ಏನೇನು?:ಜ.15ರಿಂದ 20ರ ವರೆಗೆ ಪಂಚಕಲ್ಯಾಣ ಪ್ರತಿಷ್ಠಾ ಮಹೋತ್ಸವ ನಡೆಯಲಿದೆ. ಜ. 15 ಹಾಗೂ 16ರಂದು ಭಗವಾನ ಪಾರ್ಶ್ವನಾಥ ತೀರ್ಥಂಕರ ಗರ್ಭಕಲ್ಯಾಣ ಮಹೋತ್ಸವ, 17ರಂದು ಭಗವಾನ ಪಾರ್ಶ್ವನಾಥರ ರಾಜ್ಯಾಭಿಷೇಕ, 19ರಂದು ಕೇವಲ ಜ್ಞಾನ, 20ರಂದು ಮೋಕ್ಷ ಕಲ್ಯಾಣ ಮಹೋತ್ಸವ ನಡೆಯಲಿದೆ. ಜ. 20ರ ನಂತರ ನವಗ್ರಹದ ತೀರ್ಥಂಕರ ಮೂರ್ತಿಗಳಿಗೆ ನಿತ್ಯ ಅಭಿಷೇಕ ನಡೆಯಲಿದೆ. 21ರಂದು ನವಗ್ರಹ ಕ್ಷೇತ್ರದಲ್ಲಿನ 9 ತೀರ್ಥಂಕರರ ಮೂರ್ತಿಗಳಿಗೆ ಜನಸಾಮಾನ್ಯರಿಂದ ಜಲಾಭಿಷೇಕ ನಡೆಯಲಿದೆ. 22ರಂದು ಮೂರ್ತಿಗಳ ದಾನಿಗಳಿಂದ ಅಭಿಷೇಕ, 25ರಂದು ಇಂದ್ರ-ಇಂದ್ರಾಣಿಯರಿಂದ ಮಹಾಮಸ್ತಕಾಭಿಷೇಕ ಜರುಗಲಿದೆ. 22, 23 ಹಾಗೂ 24ರಂದು ಹೆಲಿಕಾಪ್ಟರ್ನಿಂದ ನವಗ್ರಹ ತೀರ್ಥಂಕರರ ಮೇಲೆ ಪುಷ್ಪವೃಷ್ಟಿ ನೆರವೇರಲಿದೆ. 23ರಂದು ಮುಂಜಿ ಬಂಧನ, ಮಂತ್ರ ಸಂಸ್ಕಾರ ಹಾಗೂ ವೃತ ಸಂಸ್ಕಾರ ಆಯೋಜಿಸಲಾಗಿದೆ. ಜ. 15ರಿಂದ 26ರ ವರೆಗೆ ಲಕ್ಷಾಂತರ ಜನ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಯಾರಿಗೂ ತೊಂದರೆಯಾಗದಂತೆ ಅಚ್ಚುಕಟ್ಟಿನಿಂದ ವ್ಯವಸ್ಥೆ ಮಾಡಲಾಗಿದೆ ಎಂದು ಶ್ರೀ ಗುಣಧರ ನಂದಿ ಮಹಾರಾಜರು ತಿಳಿಸುತ್ತಾರೆ.ವೆಬ್ಸೈಟ್ ಸಿದ್ಧ
ಕಾರ್ಯಕ್ರಮಕ್ಕೆ ಬರುವ ಭಕ್ತರು, ಸ್ವಾಮೀಜಿಗಳು, ಸಂತರ ಅನುಕೂಲಕ್ಕಾಗಿ ಮಾಡಲಾಗುವ ಊಟ, ವಸತಿ ಸೇರಿದಂತೆ ಎಲ್ಲ ವ್ಯವಸ್ಥೆ ಕುರಿತು https://mahamasthakabhisheka2025.agmrcet.ac.in ವೆಬ್ಸೈಟ್ನಲ್ಲಿ ಮಾಹಿತಿ ನೀಡಲಾಗುತ್ತದೆ. ಭಕ್ತರು ವೆಬ್ಸೈಟ್ (Website) ಮೂಲಕನೇ ಎಲ್ಲ ರೀತಿಯ ಮಾಹಿತಿ ಪಡೆಯಬಹುದಾಗಿದೆ.ಸಾಂಸ್ಕೃತಿಕ ಕಾರ್ಯಕ್ರಮ11 ದಿನ ಬೆಳಗ್ಗೆಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ಸಂಜೆ ವೇಳೆಗೆ ಪ್ರತಿದಿನ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಜ.17ಕ್ಕೆ ವಿಜಯಪ್ರಕಾಶ, ಅನುರಾಧಾ ಭಟ್, 20ಕ್ಕೆ ಅರ್ಜುನ ಜನ್ಯ, ಅನುಶ್ರೀ, 22ರಂದು ರಾಜೇಶ ಕೃಷ್ಣನ್, 23ಕ್ಕೆ ಸಾಧುಕೋಕಿಲ, ರಘು ದೀಕ್ಷಿತ, 24ಕ್ಕೆ ತರುಣ, ರವಿಚಂದ್ರನ್ ಹಾಗೂ ಮತ್ತಿತರ ಕಲಾವಿದರು ಭಾಗವಹಿಸಿ ಕಾರ್ಯಕ್ರಮ ನೀಡುತ್ತಿರುವುದು ವಿಶೇಷ. ಸುಮೇರು ಪರ್ವತ
ಜೈನ ಸಮುದಾಯದಲ್ಲಿ ಸುಮೇರು ಪರ್ವತಕ್ಕೆ ಭಾರೀ ಮಹತ್ವ. ತೀರ್ಥಂಕರರು ಸುಮೇರು ಪರ್ವತದಲ್ಲಿ ಮೋಕ್ಷ ಕಾಣುತ್ತಾರೆ. ಇಲ್ಲಿಗೆ ಮಾನವರು ತೆರಳಿದರೆ ದೇವರನ್ನು ಕಂಡಂತೆ ಎಂಬ ನಂಬಿಕೆ ಇದೆ. ಅದರ ಮಾದರಿಯಂತೆ ಇಲ್ಲಿ 405 ಅಡಿ ಎತ್ತರದ ಸುಮೇರು ಪರ್ವತ ನಿರ್ಮಿಸಲಾಗಿದೆ. ದೇಶದ ವಿವಿಧೆಡೆ ಸುಮೇರು ಪರ್ವತದ ಮಾದರಿಗಳಿವೆ. ಆದರೆ ಇಷ್ಟೊಂದು ಎತ್ತರದ ಸುಮೇರು ಪರ್ವತ ಎಲ್ಲೂ ನಿರ್ಮಿಸಿಲ್ಲ. ದೇಶದ ಅತಿ ಎತ್ತರದ್ದು ಎಂಬುದು ಇಲ್ಲಿನ ಹೆಮ್ಮೆ. 72 ತೀರ್ಥಂಕರ ಮೂರ್ತಿಗಳು ಇಲ್ಲಿವೆ. ಇದು ಈ ಕ್ಷೇತ್ರದ ವಿಶೇಷ. ಜೈನ ಸಮುದಾಯದವರು ಅಷ್ಟೇ ಅಲ್ಲ ಎಲ್ಲರ ಆಕರ್ಷಣೀಯ ಆಧ್ಯಾತ್ಮಿಕ ಕೇಂದ್ರವೂ ಇದಾಗಿದೆ.