ಭಾರತಪ್ರಪಂಚವಿಶೇಷರಾಜಕೀಯಮನರಂಜನೆಅಪರಾಧಕ್ರೀಡೆಕರ್ನಾಟಕಇ- ಪೇಪರ್

ಭವಾನಿಶಂಕರ ದೇವರ ಮಹಾರಥೋತ್ಸವ ಸಂಪನ್ನ

KannadaprabhaNewsNetwork | Published : Apr 24, 2024 2:16 AM

ಈ ಸಲ ಹರಿದ್ವಾರದ ಬ್ರಹ್ಮಾನಂದ ತೀರ್ಥಂಗ ಸ್ವಾಮೀಜಿ ರಥೋತ್ಸವದಲ್ಲಿ ಪಾಲ್ಗೊಂಡಿದ್ದು ವಿಶೇಷ.

ಭಟ್ಕಳ: ತಾಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಹಾಗೂ ಸಾರಸ್ವತ ಸಮಾಜದವರ ಗುರು ಮಠ ಚಿತ್ರಾಪುರ ಮಠದ ಭವಾನಿಶಂಕರ ದೇವರ 163ನೇ ಮಹಾರಥೋತ್ಸವ ಮಂಗಳವಾರ ಸಂಜೆ ಅದ್ಧೂರಿಯಾಗಿ ಸಂಪನ್ನಗೊಂಡಿತು. ರಥೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಏ. 18ರಂದು ಬೆಳಗ್ಗೆ ಸಾಮೂಹಿಕ ಪ್ರಾರ್ಥನೆ, ಧ್ವಜಾರೋಹಣದೊಂದಿಗೆ ಆರಂಭಗೊಂಡಿತ್ತು. ನಂತರ ದಿನಾಲೂ ಉತ್ಸವಾದಿಗಳು ನಡೆದು ಮಂಗಳವಾರ ಮಧ್ಯಾಹ್ನ 12 ಗಂಟೆಗೆ ರಥಾರೋಹಣ ಕಾರ್ಯಕ್ರಮ ನಡೆದು ಸಂಜೆ 5.30 ಗಂಟೆಗೆ ಸದ್ಯೋಜಾತ ಶಂಕರಾಶ್ರಮ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಮಹಾರಥೋತ್ಸವ ಜರುಗಿತು.

ಈ ಸಲ ಹರಿದ್ವಾರದ ಬ್ರಹ್ಮಾನಂದ ತೀರ್ಥಂಗ ಸ್ವಾಮೀಜಿ ರಥೋತ್ಸವದಲ್ಲಿ ಪಾಲ್ಗೊಂಡಿದ್ದು ವಿಶೇಷ. ರಥೋತ್ಸವದ ನಿಮಿತ್ತ ಭಕ್ತರು ಬೆಳಗ್ಗೆಯಿಂದಲೇ ಶ್ರೀಮಠಕ್ಕೆ ಆಗಮಿಸಿ ದೇವರ ಹಾಗೂ ಶ್ರೀಗಳ ದರ್ಶನವನ್ನು ಪಡೆದು ನಂತರ ರಥ ಕಾಣಿಕೆ ಸಲ್ಲಿಸಿದರು.

ರಥೋತ್ಸವದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯ ಪದಾಧಿಕಾರಿಗಳು, ಪ್ರಧಾನ ವ್ಯವಸ್ಥಾಪಕ ನಾರಾಯಣ ಮಲ್ಲಾಪುರ ಸೇರಿದಂತೆ ಶ್ರೀಮಠದ ವಿವಿಧ ರಾಜ್ಯಗಳಿಂದ ಆಗಮಿಸಿದ್ದ ಭಕ್ತರು, ಊರಿನ ಗಣ್ಯರು ಸೇರಿದಂತೆ ಸಾವಿರಾರು ಜನರು ಪಾಲ್ಗೊಂಡಿದ್ದರು. ಮುಂಜಾಗ್ರತಾ ಕ್ರಮವಾಗಿ ಬಿಗು ಪೊಲೀಸ್ ಬಂದೋಬಸ್ತ್‌ ಏರ್ಪಡಿಸಲಾಗಿತ್ತು.

ರಥೋತ್ಸವದ ನಂತರದಲ್ಲಿ ನಡೆದ ಧರ್ಮಸಭೆಯಲ್ಲಿ ಸದ್ಯೋಜಾತ ಶಂಕರಾಶ್ರಮ ಸ್ವಾಮೀಜಿಯರು ಆಶೀರ್ವಚನ ನೀಡಿದರು. ಏ. 24ರಂದು ಮಧ್ಯಾಹ್ನ ಮಹಾ ಅನ್ನಸಂತರ್ಪಣೆ, ಸಂಜೆ 7 ಗಂಟೆಗೆ ದೀಪ ನಮಸ್ಕಾರ, ಪಂಚವಟಿಯಲ್ಲಿ ಮೃಗಬೇಟೆ ಉತ್ಸವ ನಡೆಯಲಿದೆ. ಏ. 25ರಂದು ಬೆಳಗ್ಗೆ ಅವಭೃತ ಸ್ನಾನ(ಓಕುಳಿ), ಧ್ವಜಾವರೋಹಣದೊಂದಿಗೆ ರಥೋತ್ಸವದ ಧಾರ್ಮಿಕ ಕಾರ್ಯಕ್ರಮಗಳು ಸಂಪನ್ನಗೊಳ್ಳಲಿದೆ.ವಿಜೃಂಭಣೆಯ ಬೇಳೂರು ಭಂಡಾರದೇವರ ಜಾತ್ರೆ

ಕಾರವಾರ: ತಾಲೂಕಿನ ಬೇಳೂರು ಗ್ರಾಮದಲ್ಲಿರುವ ಹಾಲಕ್ಕಿ ಸಮಾಜದ ಕುಲದೇವರಾದ ಭಂಡಾರ ದೇವರ ಜಾತ್ರಾ ಮಹೋತ್ಸವ ಸೋಮವಾರ ವಿಜೃಂಭಣೆಯಿಂದ ನೆರವೇರಿತು.ಬೆಳಗ್ಗೆಯಿಂದಲೇ ದೇವಸ್ಥಾನದಲ್ಲಿ ಹೋಮ ಮೊದಲಾದ ಧಾರ್ಮಿಕ ಕೈಂಕರ್ಯಗಳು ಆರಂಭಗೊಂಡವು. ಶ್ರೀದೇವರ ಮೂಲಸ್ಥಾನವಾದ ಗುಡ್ಡದ ಮೇಲೆ ಇರುವ ಹೆಮಜಣಿ ಎಂಬ ಪ್ರದೇಶಕ್ಕೆ ಪೂಜಾರಿಗಳು ಹಾಗೂ ಭಕ್ತರು ತೆರಳಿ ಪೂಜೆ ಸಲ್ಲಿಸಿ ಬಳಿಕ ಈ ದೇವಸ್ಥಾನಕ್ಕೆ ಆಗಮಿಸಿದರು. ಮಧ್ಯಾಹ್ನ ೩ ಗಂಟೆ ವೇಳೆಗೆ ಭಂಡಾರ ದೇವರು ಹಾಗೂ ಪರಿವಾರ ದೇವರಿಗೆ ವಿಶೇಷ ಪೂಜೆ, ಮಂಗಳಾರತಿ ನೆರವೇರಿತು.ಕಾರವಾರ ಹಾಗೂ ಅಂಕೋಲಾ ತಾಲೂಕಿಗಳಿಂದ ನೂರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ತಮ್ಮ ಹಣ್ಣು ಕಾಯಿ ಸೇವೆ, ಹರಕೆಗಳನ್ನು ಸಲ್ಲಿಸಿದರು. ಆಗಮಿಸಿದ ಎಲ್ಲ ಭಕ್ತರಿಗೆ ಪ್ರಸಾದ ವ್ಯವಸ್ಥೆಯನ್ನು ಮಾಡಲಾಗಿತ್ತು.