- ಅಂಬೇಡ್ಕರ್ ಭವನದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ
ಮಹರ್ಷಿ ವಾಲ್ಮೀಕಿಯವರು ರಾಮಾಯಣದ ರಚನೆ ಜೊತೆಗೆ ರಾಮಾಯಣದ ಪಾತ್ರದಾರಿಯೂ ಆಗಿದ್ದಾರೆ ಎಂದು ಬಾಳೆಹೊನ್ನೂರಿನ ಎಸ್.ಜೆ.ಆರ್.ಪದವಿ ಪೂರ್ವ ಕಾಲೇಜಿನ ಇತಿಹಾಸ ಉಪನ್ಯಾಸಕ ಕೆ.ಎಂ.ರಾಕೇಶ್ ತಿಳಿಸಿದರು.
ಮಂಗಳವಾರ ಪಟ್ಟಣದ ಅಂಬೇಡ್ಕರ್ ನಗರದ ಅಂಬೇಡ್ಕರ್ ಭವನದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಆಶ್ರಯದಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು. ಭಾರತ ಋಷಿಮುನಿಗಳ ನಾಡಾಗಿದ್ದು ಇಲ್ಲಿ ಶ್ರೇಷ್ಠ ಕವಿಗಳೂ ಜನ್ಮ ತಾಳಿದ್ದಾರೆ. ಋಷಿಯೊಬ್ಬ ಕವಿಯಾಗಿದ್ದು ಕವಿಯೊಬ್ಬ ಋಷಿಯಾಗಿರುವುದು ವಾಲ್ಮೀಕಿ ಮಾತ್ರ. ವಾಲ್ಮೀಕಿಯವರು ರಾಮಾಯಣದಲ್ಲಿ ರಾಮನ ವ್ಯಕ್ತಿತ್ವವನ್ನು ಪರಿಚಯ ಮಾಡುತ್ತಾ ಹೋಗುತ್ತಾರೆ. ರಾಮಾಯಣದಲ್ಲಿ 7 ಖಾಂಡಗಳಿವೆ. ಕೊನೆ ಉತ್ತರ ಖಾಂಡದಲ್ಲಿ ವಾಲ್ಮೀಕಿ ತಂದೆ ಯಾರು ಎಂಬುದಕ್ಕೆ ಉತ್ತರ ಸಿಗುತ್ತದೆ. ವಾಲ್ಮೀಕಿಯ ಮೂಲ ಹೆಸರು ರತ್ನಾಕರ. ಸಹವಾಸ ದೋಷದಿಂದ ರತ್ನಾಕರ ಬೀರ್ ಎಂಬ ಸಮಾಜಕ್ಕೆ ಸೇರಿ ದರೋಡೆ ಕಾರರಾಗಿದ್ದ. ನಂತರ ಬದಲಾಗಿ ಭವಿಷ್ಯದಲ್ಲಿ ಮಹಾತ್ಮರಾಗಿ ಬದಲಾಗಿದ್ದು ಇತಿಹಾಸ ಎಂದರು.ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ ಶೆಟ್ಟಿ ಉದ್ಘಾಟಿಸಿ ಮಾತನಾಡಿ, ವಾಲ್ಮೀಕಿ ಬರೆದ ರಾಮಾಯಣದಿಂದ ವಿಶ್ವವೇ ಭಾರತದತ್ತ ನೋಡುವಂತಾಗಿದೆ. ರಾಮನ ಆದರ್ಶವನ್ನು ಸಮಾಜಕ್ಕೆ ಪರಿಚಯಿಸಿದರು. ಸಿದ್ದರಾಮಯ್ಯ ಸರ್ಕಾರ ವಾಲ್ಮೀಕಿ ನಿಗಮ ಸ್ಥಾಪನೆ ಮಾಡಿ ಬುಡಕಟ್ಟು ಜನಾಂಗದವರು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂಬ ಆಶಯ ಹೊಂದಿದ್ದಾರೆ. ಬೆಂಗಳೂರಿನಲ್ಲಿ ಶಾಸಕರ ಭವನದ ಎದುರು ವಾಲ್ಮೀಕಿ ಪ್ರತಿಮೆ ಸ್ಥಾಪನೆ ಮಾಡಿದ್ದಾರೆ ಎಂದರು.
ಡಿ.ಎಸ್.ಎಸ್.ಮುಖಂಡರಾದ ವಾಲ್ಮೀಕಿ ಶ್ರೀನಿವಾಸ್, ಎಚ್.ಎಂ.ಶಿವಣ್ಣ,ಡಿ.ರಾಮು, ಮಂಜುನಾಥ್,ಶೆಟ್ಟಿಕೊಪ್ಪ ಮಹೇಶ್ ಅವರು ಮಹರ್ಷಿ ವಾಲ್ಮೀಕಿ ಬಗ್ಗೆ ಮಾತನಾಡಿದರು. ಇದೇ ಸಂದರ್ಭದಲ್ಲಿ ರಾಷ್ಠ ಮಟ್ಟ ಥ್ರೋಬಾಲ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ತಂಡದ ನಾಯಕಿ ಗುಡ್ಡೇಹಳ್ಳ ಕುಸಮ ಹಾಗೂ ಎಸ್.ಎಸ್.ಎಲ್.ಸಿ.ಯಲ್ಲಿ ಪ್ರಥಮ ಸ್ಥಾನ ಪಡೆದ ಅಮೂಲ್ಯ ಅವರನ್ನು ಸನ್ಮಾನಿಸಲಾಯಿತು. ಅತಿಥಿಗಳು,ಡಿ.ಎಸ್.ಎಸ್.ಮುಖಂಡರು ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಇದೇ ಸಂದರ್ಭದಲ್ಲಿ ಡಿ.ಎಸ್.ಎಸ್.ಮುಖಂಡರು ಉಪನ್ಯಾಸಕ ಕೆ.ಎಂ.ರಾಕೇಶ್ ಅವರನ್ನು ಸನ್ಮಾನಿಸಿದರು.ನಿರಂಜನ್ ಮೂರ್ತಿ ಸ್ವಾಗತಿಸಿದರು.