ಮಹಾಶಿವರಾತ್ರಿ: ವಿಜೃಂಭಣೆಯಿಂದ ನಡೆದ ಶ್ರೀಜಡೆಮುನೇಶ್ವರ ಉತ್ಸವ

KannadaprabhaNewsNetwork | Published : Feb 28, 2025 12:51 AM

ಶ್ರೀಜಡೇಮುನೇಶ್ವರ ಸ್ವಾಮಿ ಕರಗ ಸಹಿತ ಕಂಡಾಯ ಕಗ್ಗಲಿ ಉತ್ಸವದಲ್ಲಿ ಮಹದೇಶ್ವರ, ಕಾಲಭೈರವೇಶ್ವರ, ಚೌಡೇಶ್ವರಿ, ಸಿದ್ದಪ್ಪಾಜಿ, ದೊಡ್ಡಮ್ಮ ತಾಯಿ, ಶನೇಶ್ವರ, ಜಡ ಮುನೇಶ್ವರ ಕರಗಗಳೊಂದಿಗೆ ನೂರಾರು ಭಕ್ತರು ಬಾಯಿಬೀಗ ಹಾಕಿಸಿಕೊಂಡು ಮೆರವಣಿಗೆಯಲ್ಲಿ ಸಾಗಿದರು.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಮಹಾಶಿವರಾತ್ರಿ ಹಬ್ಬದ ಅಂಗವಾಗಿ ತಾಲೂಕಿನ ಮಹದೇವಪುರ ಗ್ರಾಮದಲ್ಲಿ ಶ್ರೀಜಡೆ ಮುನೇಶ್ವರ ಉತ್ಸವವು ವಿಜೃಂಭಣೆಯಿಂದ ನೆರವೇರಿತು.

ಶ್ರೀಜಡೇಮುನೇಶ್ವರ ಸ್ವಾಮಿ ಕರಗ ಸಹಿತ ಕಂಡಾಯ ಕಗ್ಗಲಿ ಉತ್ಸವದಲ್ಲಿ ಮಹದೇಶ್ವರ, ಕಾಲಭೈರವೇಶ್ವರ, ಚೌಡೇಶ್ವರಿ, ಸಿದ್ದಪ್ಪಾಜಿ, ದೊಡ್ಡಮ್ಮ ತಾಯಿ, ಶನೇಶ್ವರ, ಜಡ ಮುನೇಶ್ವರ ಕರಗಗಳೊಂದಿಗೆ ನೂರಾರು ಭಕ್ತರು ಬಾಯಿಬೀಗ ಹಾಕಿಸಿಕೊಂಡು ಮೆರವಣಿಗೆಯಲ್ಲಿ ಸಾಗಿದರು.

ಬಾಯಿಬೀಗ ಹಾಕಿಸಿಕೊಂಡು ಹರಕೆ ತೀರಿಸಿದರೆ ಇಷ್ಟಾರ್ಥ ಸಿದ್ದಿಸುವ ನಂಬಿಕೆಯಿದ್ದು, ಉತ್ಸವ ಮೆರವಣಿಗೆ ನೂರಾರು ಭಕ್ತರು ಸಣ್ಣ ಹಾಗೂ ದೊಡ್ಡ ಸರಳಿನ ಬಾಯಿ ಬೀಗ ಹಾಕಿಸಿಕೊಳ್ಳುವ ಮೂಲಕ ಇಷ್ಟಾರ್ಥ ಸಿದ್ಧಿಗೆ ದೇವರಲ್ಲಿ ಮೊರೆಯಿಟ್ಟರು.

ದೊಡ್ಡ ತ್ರಿಶೂಲದ ಬಾಯಿ ಬೀಗ ಹಾಕಿ ನೃತ್ಯ ಮಾಡಿದ ಕೆಲ ಭಕ್ತರು ಭಕ್ತಿ ಪರಾಕಾಷ್ಟೆ ಮೆರೆದರಲ್ಲದೆ ಕೆಲ ಭಕ್ತರು ದೇಹಕ್ಕೆ ಕಬ್ಬಿಣದ ಕೊಂಡಿ ಹಾಕಿಸಿಕೊಂಡು ಭಕ್ತಿಭಾವ ಪ್ರದರ್ಶಿಸಿದರು.

ಇದೇ ವೇಳೆ ದೇವಾಲಯದ ಆವರಣದಲ್ಲಿ ಹರಕೆ ಹೊತ್ತು ಮಲಗಿದ್ದ ಭಕ್ತರನ್ನು ದಾಟುವ ಮೂಲಕ ದೇವಾಲಯದ ಬಸವ ಆಶೀರ್ವಧಿಸಿತು. ದೇಗುಲದ ಗುಡ್ಡಮ್ಮ ಮಂಗಳಮ್ಮ ಹಾಗೂ ಗುಡ್ಡಪ್ಪ ಚಿನ್ನಸ್ವಾಮಿ ನೇತೃತ್ವದಲ್ಲಿ ಬುಧವಾರ ರಾತ್ರಿ ಗುರುವಾರ ಬೆಳಗ್ಗೆಯಿಂದಲೇ ವಿವಿಧ ಪೂಜಾ ಕೈಂಕರ್ಯಗಳು ದೇವರಿಗೆ ಜರುಗಿದವು.

ಶ್ರೀಮಹದೇಶ್ವರ ಮಠ ಮತ್ತು ಓಂ ಶ್ರೀ ಜಡೆ ಮುನೇಶ್ವರ ದೇವಸ್ಥಾನದ ಟ್ರಸ್ಟ್ ನ ಸದಸ್ಯರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು. ಆಗಮಿಸಿದ್ದ ಸಾವಿರಾರು ಭಕ್ತರಿಗೆ ಅನ್ನಸಂತರ್ಪಣೆ ನೆರವೇರಿತು.

ಮಾ.1ರಂದು ಶ್ರೀಶನೇಶ್ವರ ಜಯಂತ್ಯೋತ್ಸವ

ಹಲಗೂರು:

ಗುಂಡಾಪುರ ಗೇಟ್ ಬಳಿಯ ಶ್ರೀಶನೇಶ್ವರಸ್ವಾಮಿ ದೇವಾಲಯದಲ್ಲಿ ಮಾ.1ರಂದು ಶನೇಶ್ವರಸ್ವಾಮಿ ಜಯಂತಿ ನಡೆಯಲಿದೆ. ಮಾ.1ರ ಬೆಳಗ್ಗೆ 11 ಗಂಟೆಗೆ ನೂತನ ದೇವಾಲಯದ ಕಲ್ಲಿನ ಏಳು ದ್ವಾರಗಳ ಸ್ಥಾಪನೆ ಪೂಜಾ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ 1 ಗಂಟೆಗೆ ಸ್ವಾಮಿ ಜಯಂತ್ಯುತ್ಸವ, ಶ್ರೀಬಸಪ್ಪನವರ ಪಾದಪೂಜೆ, ಮಹಾ ಮಂಗಳಾರತಿ ನಡೆಯಲಿದೆ. ಕಾರ್ಯಕ್ರಮಕ್ಕೆ ಆಗಮಿಸುವ ಸಕಲ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ ಎಂದು ದೇವಾಲಯ ವ್ಯವಸ್ಥಾಪಕ ರಾಜು ತಿಳಿಸಿದ್ದಾರೆ.