ಮಹಾತ್ಮ ಗಾಂಧಿ ಮತ್ತು ಶಾಸ್ತ್ರಿ ಜಯಂತಿ ಆಚರಣೆ

KannadaprabhaNewsNetwork | Published : Oct 4, 2024 1:02 AM

ಸಾರಾಂಶ

ಜಿಲ್ಲಾ ಲಯನ್ಸ್ ಸೇವಾ ಸಂಸ್ಥೆ ಸಭಾಂಗಣದಲ್ಲಿ ಬುಧವಾರ ಸಂಸ್ಥೆ ಅಧ್ಯಕ್ಷರು ಹಾಗೂ ಸದಸ್ಯರು ಎಲ್ಲಾ ಸೇರಿ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಜಯಂತಿ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮದ ಪೂರಕವಾಗಿ ಸ್ವಚ್ಛತಾ ಕಾರ್ಯಕ್ರಮ, ರೋಗಿಗಳಿಗೆ ಹಣ್ಣು ವಿತರಣೆ, ಆರೋಗ್ಯ ತಪಾಸಣೆ ಮತ್ತು ಮಕ್ಕಳಿಗೆ ಸಿಹಿ ವಿತರಣೆ ಕಾರ್ಯಕ್ರಮವನ್ನು ಪೂರಕವಾಗಿ ರೂಪಿಸಿಕೊಂಡು ಈ ವಾರದಲ್ಲಿ ಕಾರ್ಯ ಮಾಡಲಾಗುವುದು ಎಂದು ತಿಳಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ನಗರದ ಕುವೆಂಪು ರಸ್ತೆಯಲ್ಲಿರುವ ಜಿಲ್ಲಾ ಲಯನ್ಸ್ ಸೇವಾ ಸಂಸ್ಥೆ ಸಭಾಂಗಣದಲ್ಲಿ ಬುಧವಾರ ಸಂಸ್ಥೆ ಅಧ್ಯಕ್ಷರು ಹಾಗೂ ಸದಸ್ಯರು ಎಲ್ಲಾ ಸೇರಿ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಜಯಂತಿ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಇದೇ ವೇಳೆ ಲಯನ್ಸ್ ಕ್ಲಬ್ ಅಧ್ಯಕ್ಷ ಐ.ಜಿ. ರಮೇಶ್ ಮಾತನಾಡಿ, ಪ್ರತಿ ವರ್ಷವೂ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮ ದಿನಾಚರಣೆಯನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಈ ಶುಭ ಸಂದರ್ಭದಲ್ಲಿ ಮಹಾತ್ಮ ಗಾಂಧಿಯವರು ಸತ್ಯ, ಅಹಿಂಸೆ ಪ್ರತಿಪಾದಕರಾಗಿ ಸ್ವಾತಂತ್ರ್ಯ ಹೋರಾಟದ ಮುಂಚೂಣಿ ನಾಯಕರಾಗಿ ಮಹಾತ್ಮ ಅನಿಸಿಕೊಂಡಿದ್ದರು. ಅದೇ ರೀತಿ ಲಾಲ್ ಬಹದ್ದೂರ್ ಶಾಸ್ತ್ರಿಯವರು ಕೂಡ "ಜೈ ಜವಾನ್ ಜೈ ಕಿಸಾನ್ " ಘೋಷಣೆಯನ್ನು ಮಾಡಿ ಸ್ವಾತಂತ್ರ್ಯ ಚಳವಳಿಯಲ್ಲಿ ಅವರು ಕೂಡ ಹೋರಾಟಗಾರರಾಗಿದ್ದರು ಎಂದರು. ಈ ದಿನ ಜಯಂತಿಯನ್ನು ನಮ್ಮ ಲಯನ್ಸ್ ಕ್ಲಬ್ ವತಿಯಿಂದ ಅದ್ಧೂರಿಯಾಗಿ ಆಚರಿಸುತ್ತಿದ್ದೇವೆ. ಈ ಜಯಂತಿ ಕಾರ್ಯಕ್ರಮದ ಪೂರಕವಾಗಿ ಸ್ವಚ್ಛತಾ ಕಾರ್ಯಕ್ರಮ, ರೋಗಿಗಳಿಗೆ ಹಣ್ಣು ವಿತರಣೆ, ಆರೋಗ್ಯ ತಪಾಸಣೆ ಮತ್ತು ಮಕ್ಕಳಿಗೆ ಸಿಹಿ ವಿತರಣೆ ಕಾರ್ಯಕ್ರಮವನ್ನು ಪೂರಕವಾಗಿ ರೂಪಿಸಿಕೊಂಡು ಈ ವಾರದಲ್ಲಿ ಕಾರ್ಯ ಮಾಡಲಾಗುವುದು. ಮಹಾತ್ಮ ಗಾಂಧೀಜಿಯವರು ಹಾಕಿಕೊಟ್ಟಂತಹ ಹೆಜ್ಜೆಯಲ್ಲಿ ನಡೆದು ನಮ್ಮ ದೇಶದ ರಕ್ಷಣೆ ಮಾಡಿ ಅದಕ್ಕೆ ಪೂರಕವಾದ ಕೆಲಸ ಮಾಡಿಕೊಂಡು ನಮ್ಮ ದೇಶದ ಪ್ರಗತಿಗಾಗಿ ದುಡಿದು ದೇಶವನ್ನು ಅಭಿವೃದ್ಧಿಯತ್ತ ಮತ್ತು ವಿಶ್ವದಲ್ಲಿ ಭಾರತವನ್ನು ಮೊದಲ ಸ್ಥಾನಕ್ಕೆ ಕೊಂಡೊಯ್ಯುವುದು ನಮ್ಮ ದೇಶದ ಪ್ರಜೆಗಳ ಉದ್ದೇಶವಾಗಲಿ ಎಂದು ಕಿವಿಮಾತು ಹೇಳಿದರು. ಪ್ರತಿ ವ್ಯಕ್ತಿಗೂ ಶಿಕ್ಷಣ ಎಂಬುದು ಸಿಗಲಿ. ವಿದ್ಯೆ ಮತ್ತು ಉದ್ಯೋಗಕ್ಕೆ ನಮ್ಮ ದೇಶ ಪ್ರಾಧಾನ್ಯತೆ ಕೊಡುತ್ತಿದೆ ಎಂದು ಹೇಳಿದರು. ಇದೇ ವೇಳೆ ಶಾಲೆಯ ಮಕ್ಕಳಾದ ದಿವ್ಯ ಲಿಖಿತ, ಕೌಸ್ತುಭ ಮಾತನಾಡುತ್ತಾ, ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರು ನಡೆದು ಬಂದ ದಾರಿ, ಸ್ವಾತಂತ್ರ್ಯಕ್ಕಾಗಿ ಹಾಕಿಕೊಟ್ಟ ಮಾರ್ಗ ಸೇರಿದಂತೆ ಅವರ ಉದ್ದೇಶದ ಕುರಿತು ಸವಿಸ್ತಾರವಾಗಿ ತಿಳಿಸುವ ಮೂಲಕ ಹಿಂದಿನ ನೆನಪನ್ನು ಮೆಲುಕು ಹಾಕಿದರು. ಕಾರ್ಯಕ್ರಮದಲ್ಲಿ ಹಾಸನ ಲಯನ್ಸ್ ಕ್ಲಬ್ ಕಾರ್ಯದರ್ಶಿ ರವಿಕುಮಾರ್‌ ಬಲ್ಲೇನಹಳ್ಳಿ, ಖಜಾಂಚಿ ಸಿ.ಬಿ. ನಾಗರಾಜು, ಮಾಜಿ ಅಧ್ಯಕ್ಷ ನಾಗೇಶ್, ಅಂಬಾಸಿಡರ್ ಅಶೋಕ್ ಕುಮಾರ್, ಜರ್ಸಿ ಎಚ್.ಆರ್‌. ಚಂದ್ರೇಗೌಡ, ಅನಂತಕುಮಾರ್, ಮಲ್ಲೇಶ್ ಗೌಡ, ಸತ್ಯನಾರಾಯಣ್, ನಾಗರಾಜು, ಬಿ.ಎಸ್. ಸೋಮಶೇಖರ್, ಪುಷ್ಪ ಅನಂತ್, ಪ್ರೇಮಸತ್ಯನಾರಾಯಣ್, ಸೇರಿದಂತೆ ಇತರರು ಉಪಸ್ಥಿತರಿದ್ದರು.

Share this article