ಗದಗ: ಜಗತ್ತು ಕಂಡ ಮಹಾನ್ ನಾಯಕರಾದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ ಶಾಸ್ತ್ರೀಜಿ ಅವರು ದೇಶಕ್ಕೆ ನೀಡಿದ ಕೊಡುಗೆ ಅವಿಸ್ಮರಣೀಯವಾಗಿದೆ ಎಂದು ವಿಪ ಸದಸ್ಯ ಎಸ್.ವಿ. ಸಂಕನೂರ ಹೇಳಿದರು.
ಸಮಾಜದಲ್ಲಿ ಇರುವ ಅಸಮಾನತೆ ಹೋಗಲಾಡಿಸುವುದು, ಸ್ತ್ರೀ ಸ್ವಾತಂತ್ರ್ಯ, ಸ್ವದೇಶಿ ವಸ್ತುಗಳ ಬಳಕೆ, ದಲಿತರ ಅಭಿವೃದ್ಧಿ, ಮದ್ಯಪಾನ ನಿಷೇಧ, ಗೋಹತ್ಯೆ ನಿಷೇಧ, ಅಸ್ಪೃಶ್ಯತೆ ನಿಷೇಧ ಇವುಗಳಿಗೋಸ್ಕರ ಹೋರಾಡಿದವರು. ಗಾಂಧೀಜಿ ಸ್ವಾತಂತ್ರ್ಯಾನಂತರ ರಾಮರಾಜ್ಯದ ಕನಸು ಕಂಡವರು. ಅಸ್ಪೃಶ್ಯತೆ ಹೋಗಲಾಡಿಸುವುದು, ಭ್ರಷ್ಟಾಚಾರ ನಿರ್ಮೂಲನೆ ಇವೆಲ್ಲವು ಗಾಂಧೀಜಿ ರಾಮರಾಜ್ಯದ ಪರಿಕಲ್ಪನೆಯಾಗಿದ್ದು, ಅವರ ಸಂದೇಶಗಳನ್ನು ಜೀವನದಲ್ಲಿ ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು ಎಂದರು.
ಮಾಜಿ ಪ್ರಧಾನಿ ಲಾಲ್ ಬಹದ್ದೂರ ಶಾಸ್ತ್ರಿ ಸರಳ ಜೀವಿಗಳು. ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವನವನ್ನು ಸಮರ್ಪಿಸಿಕೊಂಡವರು. ಜೈ ಜವಾನ್ ಜೈ ಕಿಸಾನ್ ಎನ್ನುವ ಸಂದೇಶದಿಂದ ದೇಶಕ್ಕೆ ಸೈನಿಕರ ಮತ್ತು ರೈತರ ಮಹತ್ವ ಬಹಳಷ್ಟಿದೆ. ವಿದ್ಯಾರ್ಥಿಗಳು ಮಹಾತ್ಮ ಗಾಂಧಿ ಮತ್ತು ಲಾಲ್ ಬಹದ್ದೂರ ಶಾಸ್ತ್ರೀಜಿ ಕುರಿತು ಅಧ್ಯಯನ ಮಾಡಬೇಕು ಎಂದು ತಿಳಿಸಿದರು.ಸಾಹಿತಿ ಐ.ಕೆ. ಕಮ್ಮಾರ ಮಾತನಾಡಿ, ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ ಶಾಸ್ತ್ರೀ ಅವರ ಜೀವನಕ್ಕೂ ಹಾಗೂ ಜನಸಾಮಾನ್ಯರ ವಾಸ್ತವ ಜೀವನಕ್ಕೂ ಅವಲೋಕನ ಮಾಡಬೇಕಾದ ಅಗತ್ಯತೆ ಇದೆ. ಮನುಷ್ಯನ ವಿಚಾರಧಾರೆಗೂ ನಿಲುಕಲಾರದ ಅನೇಕ ಸಾಧನೆಗಳನ್ನು ಈ ಮಹಾನ್ ವ್ಯಕ್ತಿಗಳು ಮಾಡಿದ್ದಾರೆ. ಬ್ರಿಟಿಷರ ಸಂಕೋಲೆಯಿಂದ ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಟ್ಟರು. ಅನೇಕರ ತ್ಯಾಗ, ಬಲಿದಾನದಿಂದ ದೊರಕಿದ ಸ್ವಾತಂತ್ರ್ಯದ ಸದುಪಯೋಗಪಡಿಸಿಕೊಳ್ಳುವುದು ಹಾಗೂ ಈಗಿನ ಯುವಕರು ಅರ್ಥಪೂರ್ಣ ಜೀವನಶೈಲಿ ಅಳವಡಿಸಕೊಳ್ಳಬೇಕು ಎಂದು ವಿವರಿಸಿದರು.
ಅಪರ ಜಿಲ್ಲಾಧಿಕಾರಿ ಅನ್ನಪೂರ್ಣಾ ಎಂ. ಅವರು ಸ್ವಚ್ಛತೆಯ ಪ್ರತಿಜ್ಞಾವಿಧಿ ಬೋಧಿಸಿದರು. ಸುಮನ್ ಕುಲಕರ್ಣಿ ಭಗವದ್ಗೀತೆ, ವೈನಾ ಮಕಾನದಾರ ಕುರಾನ್, ಅಲ್ವಿದಾ ದಲಭಂಜನ ಬೈಬಲ್ ಪಠಿಸುವ ಮೂಲಕ ಸರ್ವಧರ್ಮ ಪ್ರಾರ್ಥನೆ ಪ್ರಸ್ತುತಪಡಿಸಿದರು.ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಜಿಪಂ ಸಿಇಒ ಭರತ್ ಎಸ್., ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಬಿ. ಸಂಕದ, ಉಪವಿಭಾಗಾಧಿಕಾರಿ ಗಂಗಪ್ಪ ಎಂ., ನಗರಸಭೆ ಪೌರಾಯುಕ್ತ ಮಹೇಶ ಪೋತದಾರ, ತಹಸೀಲ್ದಾರ್ ಶ್ರೀನಿವಾಸ ಕುಲಕರ್ಣಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ರವಿ ಗುಂಜೀಕರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ವೀರಯ್ಯಸ್ವಾಮಿ ಬಿ., ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ವಸಂತ ಮಡ್ಲೂರ, ಡಿಎಚ್ಒ ಡಾ. ಎಸ್.ಎಸ್. ನೀಲಗುಂದ ಇದ್ದರು. ವೆಂಕಟೇಶ ಅಲ್ಕೋಡ ಅವರು ಗಾಂಧೀಜಿಯ ಪ್ರಿಯ ಭಜನೆಗಳನ್ನು ಪ್ರಸ್ತುತಪಡಿಸಿದರು. ಬಾಹುಬಲಿ ಜೈನರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.