ಬಂಟ್ವಾಳ: ವರ್ಧಮಾನ ಮಹಾವೀರ ಸಂದೇಶದಲ್ಲಿ ಸತ್ಯ, ಅಹಿಂಸೆ ಅಡಗಿದೆ. ಯಾರೂ ಕೀಳಲ್ಲ, ಮೇಲಲ್ಲ ಎಂಬ ಮಾತನ್ನು ಸಾರಿ ಹೇಳಿದ್ದಾರೆ. ಅವರ ಸಂದೇಶ ಇಂದಿನ ದಿನಗಳಲ್ಲಿ ಪ್ರಸ್ತುತವಾಗಿದೆ ಎಂದು ಬಂಟ್ವಾಳದ ನ್ಯಾಯವಾದಿ ಶಿವಪ್ರಕಾಶ್ ಹೆಗ್ಡೆ ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಬಂಟ್ವಾಳ ತಹಸೀಲ್ದಾರ್ ಮಂಜುನಾಥ್ ಮಾತನಾಡಿ, ಎರಡು ಸಾವಿರ ವರ್ಷಗಳ ನಂತರವೂ ಮಹಾವೀರರನ್ನು ಸ್ಮರಿಸಬೇಕೆಂದರೆ ಅವರ ತತ್ವಾದರ್ಶಗಳೇ ಕಾರಣ ಎಂದರು.ಜೈನ್ ಮಿಲನ್ ಬಂಟ್ವಾಳ ಅಧ್ಯಕ್ಷ ರಾಜೇಂದ್ರ ಜೈನ್ ಮಾತನಾಡಿ, ಸರಕಾರಿ ವ್ಯವಸ್ಥೆಯಡಿ ಕಾರ್ಯಕ್ರಮಗಳು ನಡೆಯುತ್ತಿರುವುದು ಶ್ಲಾಘನೀಯ. ಇದನ್ನು ಇನ್ನಷ್ಟು ವಿಜೃಂಭಣೆಯಿಂದ ಆಚರಿಸುವಂತಾಗಲಿ ಎಂದರು.ಜೈನ್ ಮಿಲನ್ ವಲಯ ಉಪಾಧ್ಯಕ್ಷ ಸುದರ್ಶನ ಜೈನ್ ಮಾತನಾಡಿ, ಭಗವಾನ್ ಮಹಾವೀರರ ಸಂದೇಶವಾದ ಅಹಿಂಸೆಯ ತತ್ವಗಳೇ ಸ್ವಾತಂತ್ರ್ಯ ಹೋರಾಟಕ್ಕೆ ಸ್ಫೂರ್ತಿಯಾಗಿದ್ದನ್ನು ಸ್ಮರಿಸಿದರು.
ಈ ಸಂದರ್ಭ ಜೈನ್ ಮಿಲನ್ ಬಂಟ್ವಾಳ ಕಾರ್ಯದರ್ಶಿ ಜಯಕೀರ್ತಿ ಜೈನ್, ವಿಭಾಗ ಕಾರ್ಯದರ್ಶಿ ಸುಭಾಶ್ಚಂದ್ರ ಜೈನ್, ಪ್ರಮುಖರಾದ ಮಾಣಿಕ್ಯರಾಜ್ ಜೈನ್, ವಿಜಯ ಕುಮಾರಿ ಇಂದ್ರ, ದೀಪಕ್ ಕುಮಾರ್ ಜೈನ್, ಸನ್ಮತಿ ಜಯಕೀರ್ತಿ, ಮಮತಾ ಸುಭಾಶ್ಚಂದ್ರ ಜೈನ್, ದೀಪಕ್ ಇಂದ್ರ ಪಾಣೆಮಂಗಳೂರು, ಉಪ ತಹಸೀಲ್ದಾರ್ ನರೇಂದ್ರನಾಥ ಮಿತ್ತೂರು, ನಾನಾ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು. ಬಂಟ್ವಾಳ ಉಪ ತಹಸೀಲ್ದಾರ್ ನವೀನ್ ಬೆಂಜನಪದವು ನಿರ್ವಹಿಸಿದರು.