ಪ್ರಥಮ ಬಾರಿಗೆ ಟಿ20 ವಿಶ್ವಕಪ್ ಗೆಲ್ಲುವ ಮೂಲಕ ಅಮೋಘ ಸಾಧನೆ ಮಾಡಿದ ಭಾರತದ ಅಂಧ ಮಹಿಳಾ ತಂಡವನ್ನು ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ (ಮಾಹೆ) ವತಿಯಿಂದ ಮಣಿಪಾಲದಲ್ಲಿ ಸನ್ಮಾನಿಸಲಾಯಿತು.
ಮಣಿಪಾಲ: ಪ್ರಥಮ ಬಾರಿಗೆ ಟಿ20 ವಿಶ್ವಕಪ್ ಗೆಲ್ಲುವ ಮೂಲಕ ಅಮೋಘ ಸಾಧನೆ ಮಾಡಿದ ಭಾರತದ ಅಂಧ ಮಹಿಳಾ ತಂಡವನ್ನು ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ (ಮಾಹೆ) ವತಿಯಿಂದ ಮಣಿಪಾಲದಲ್ಲಿ ಸನ್ಮಾನಿಸಲಾಯಿತು.
ಮಾಹೆಯ ಕುಲಪತಿ ಲೆಫ್ಟಿನೆಂಟ್ ಜನರಲ್ (ಡಾ.) ಎಂ.ಡಿ. ವೆಂಕಟೇಶ್ ಮಾತನಾಡಿ, ‘ಅಂಧ ಮಹಿಳಾ ಕ್ರಿಕೆಟ್ ತಂಡದ ಅದ್ಭುತ ಕ್ರೀಡಾ ಮನೋಭಾವ ಮತ್ತು ದೃಢ ಸಂಕಲ್ಪಕ್ಕೆ ಸಂದ ಗೌರವವಿದು. ಕ್ರೀಡಾ ಸಾಧನೆಯು ದೈಹಿಕ ಮಿತಿಗಳಿಗೆ ಸೀಮಿತವಾಗಿಲ್ಲ, ಬದಲಾಗಿ ಅದು ಅವಕಾಶ ಮತ್ತು ಅಂತರ್ಗತವಾದ ದೃಢಸಂಕಲ್ಪವನ್ನು ಅವಲಂಬಿಸಿದೆ ಎಂಬುದನ್ನು ಈ ಆಟಗಾರರು ಸಾಬೀತುಪಡಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಸಹ ಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್ ಮಾತನಾಡಿ, ವ್ಯವಸ್ಥಿತ ತರಬೇತಿಯಿಂದಾಗಿ ಇಂದು ಅಂಧ ಕ್ರೀಡಾಪಟುಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿದ್ದಾರೆ. ಇವರು ಸಮಾಜದ ಸಾಂಪ್ರದಾಯಿಕ ಗ್ರಹಿಕೆಗಳನ್ನು ಮೆಟ್ಟಿ ನಿಂತು ಸಾಧನೆ ಮಾಡಿದ್ದಾರೆ ಎಂದು ಶ್ಲಾಘಿಸಿದರು. ಮಾಹೆಯ ಟ್ರಸ್ಟಿ ವಸಂತಿ ರಾಮದಾಸ್ ಪೈ, ಟ್ರಸ್ಟಿ, ಸಹ ಉಪಕುಲಪತಿಗಳಾದ ಡಾ. ನಾರಾಯಣ ಸಭಾಹಿತ್, ಡಾ. ಶರತ್ ಕೆ. ರಾವ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್ ವೇಣುಗೋಪಾಲ್ ಮತ್ತು ಅಂಗ ಸಂಸ್ಥೆಗಳ ಮುಖ್ಯಸ್ಥರು ತಂಡವನ್ನು ಗೌರವಿಸಿದರು.
ಅಂಧರ ಆರ್ಥಿಕ ಸಬಲೀಕರಣದ ಉದ್ದೇಶವಾಗಿ ಬ್ಯಾಂಕ್ ಆಫ್ ಬರೋಡಾದ ‘ಬ್ರೈಲ್ ಲಿಪಿ ಆಧರಿತ ಕ್ರೆಡಿಟ್ ಕಾರ್ಡ್’ ಅನ್ನು ಅಧಿಕೃತವಾಗಿ ಬಿಡುಗಡೆ ಮಾಡಲಾಯಿತು. ಬಾಬ್ಕಾರ್ಡ್ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ರವೀಂದ್ರ ರೈ ಎಂ. ಹಾಗೂ ಮಾಹೆಯ ಸಹ ಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್ ಅವರು ಜಂಟಿಯಾಗಿ ಈ ಕಾರ್ಡ್ ಬಿಡುಗಡೆ ಮಾಡಿದರು. ಸಮಾರಂಭದಲ್ಲಿ ಸಮರ್ಥನಂ ಸಂಸ್ಥೆಯ ಸಂಸ್ಥಾಪಕ ಮಹಾಂತೇಶ್ ಜಿ. ಕಿವಡಸಣ್ಣವರ್ ಹಾಗೂ ಖ್ಯಾತ ಸಮಾಜ ಸೇವಕ ಶ್ರೀ ರಾಯನ್ ಉಪಸ್ಥಿತರಿದ್ದರು. ಎಂಸಿಎಚ್ಪಿ ಡೀನ್ ಡಾ. ಜಿ. ಅರುಣ್ ಮಯ್ಯ ಅವರು ಸ್ವಾಗತಿಸಿದರು, ಮಾಹೆ ಕುಲಸಚಿವ ಡಾ. ಪಿ. ಗಿರಿಧರ್ ಕಿಣಿ ವಂದಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.