ಇಂದು ಸುರ್ಜೇವಾಲ, ಡಿಕೆಶಿ ನೇತೃತ್ವದ ಮುಖ್ಯ ಸಭೆ: ಸಲೀಂ ಅಹಮ್ಮದ್

KannadaprabhaNewsNetwork |  
Published : Mar 31, 2026, 01:30 AM IST
(ಸಾಂದರ್ಭಿಕ ಚಿತ್ರ) | Kannada Prabha

ಸಾರಾಂಶ

ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ಕ್ಷೇತ್ರಗಳ ಉಪ ಚುನಾವಣೆ ಹಿನ್ನೆಲೆಯಲ್ಲಿ ಮಾ.31ರ ಮಧ್ಯಾಹ್ನ 12 ಗಂಟೆಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲಾ, ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ ಉನ್ನತ ಮಟ್ಟದ ಸಭೆ ನಡೆಸಲಿದ್ದಾರೆ ಎಂದು ಪಕ್ಷದ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್ ಹೇಳಿದ್ದಾರೆ.

- ಏ.1ರಿಂದ 2 ದಿನ ಸಿಎಂ ಸಿದ್ದರಾಮಯ್ಯ ದಕ್ಷಿಣ ಕ್ಷೇತ್ರದಲ್ಲಿ ಪ್ರಚಾರ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ಕ್ಷೇತ್ರಗಳ ಉಪ ಚುನಾವಣೆ ಹಿನ್ನೆಲೆಯಲ್ಲಿ ಮಾ.31ರ ಮಧ್ಯಾಹ್ನ 12 ಗಂಟೆಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲಾ, ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ ಉನ್ನತ ಮಟ್ಟದ ಸಭೆ ನಡೆಸಲಿದ್ದಾರೆ ಎಂದು ಪಕ್ಷದ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಪ ಚುನಾವಣೆ ಎದುರಿಸಲು ಬೇಕಾದ ಅಂತಿಮ ರೂಪುರೇಷೆಗಳನ್ನು ಸಭೆಯಲ್ಲಿ ಸಿದ್ಧಪಡಿಸಲಿದ್ದು, ಶಾಸಕರು, ಪಕ್ಷದ ಎಲ್ಲ ಹಂತದ ಮುಖಂಡರ ಜೊತೆಗೆ ಚರ್ಚೆ ನಡೆಯಲಿದೆ ಎಂದರು.

ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಗೆಲುವು ನಿಶ್ಚಿತವಾಗಿದೆ. ಇದಕ್ಕಾಗಿ ಬೂತ್ ಮಟ್ಟದಿಂದಲೇ ಪಕ್ಷ ಬಲಪಡಿಸುವ ಕೆಲಸವಾಗುತ್ತಿದೆ. ಏ.1 ಮತ್ತು 2ರಂದು ಸಿಎಂ ಸಿದ್ದರಾಮಯ್ಯ ದಕ್ಷಿಣ ಕ್ಷೇತ್ರದ ವಿವಿಧೆಡೆ ರೋಡ್ ಶೋ, ಬಹಿರಂಗ ಸಭೆ ಮೂಲಕ ಪ್ರಚಾರ ಕೈಗೊಳ್ಳುವರು. ಸಿಎಂ ಪ್ರವಾಸ ಅಭ್ಯರ್ಥಿ ಪರ ದೊಡ್ಡಮಟ್ಟದ ಜನಾಭಿಪ್ರಾಯ ಮೂಡಿಸಲಿದೆ ಎಂದು ಅವರು ಹೇಳಿದರು.

ಕಳೆದ 12 ವರ್ಷದಿಂದ ಕೇಂದ್ರದ ಚುಕ್ಕಾಣಿ ಹಿಡಿದ ಬಿಜೆಪಿ ನೀಡಿದ್ದ ಭರವಸೆ ಎಲ್ಲಿ ಹೋದವು? ಮುಂದಿನ 10 ದಿನಗಳಲ್ಲಿ ಬಿಜೆಪಿ ವೈಫಲ್ಯವನ್ನು ಜನರ ಮುಂದೆ ಬಿಚ್ಚಿಡುವ ಕೆಲಸ ಮಾಡುತ್ತೇವೆ. ಅಧಿಕಾರಕ್ಕಾಗಿ ಬಿಜೆಪಿ ಜನರನ್ನು ಮರಳು ಮಾಡುತ್ತಿದೆ. ₹15 ಲಕ್ಷ, 2 ಕೋಟಿ ಉದ್ಯೋಗ ಸೃಷ್ಟಿ, ರೈತರ ಆದಾಯ ದ್ವಿಗುಣದಂತಹ ಭರವಸೆ ಕೇವಲ ಭರವಸೆಯಾಗಿವೆ. ಬೆಲೆ ಏರಿಕೆಯಿಂದ ಜನ ತತ್ತರಿಸಿದ್ದಾರೆ. ಸಿಲಿಂಡರ್ ಬೆಲೆ ಗಗನಕ್ಕೇರಿದೆ. ಇಡೀ ವಿಶ್ವದಲ್ಲೇ ಸುಳ್ಳು ಹೇಳುವ, ಆಸ್ಕರ್ ಪ್ರಶಸ್ತಿ ನೀಡಬೇಕೆಂದರೆ, ಅದು ಪ್ರಧಾನಿ ನರೇಂದ್ರ ಮೋದಿಗೆ ಸಲ್ಲಬೇಕು ಎಂದು ಅ‍ವರು ಕುಟುಕಿದರು.

ನಮ್ಮದು ಸಿದ್ಧಾಂತದ ರಾಜಕಾರಣ. 5 ಗ್ಯಾರಂಟಿ ಯೋಜನೆಗಳು, ಅಭಿವೃದ್ಧಿ ಆಧಾರದಲ್ಲಿ ಓಟು ಕೇಳುತ್ತಿದ್ದೇವೆ. ಹಿರಿಯರಾದ ಶಾಮನೂರು ಶಿವಶಂಕರಪ್ಪ ಸುದೀರ್ಘ ಸೇವೆ, ಜಿಲ್ಲೆಯ ಅಭಿವೃದ್ಧಿ ಮುಂದಿಟ್ಟುಕೊಂಡು, ಸಮರ್ಥಗೆ ಎಐಸಿಸಿ ಟಿಕೆಟ್ ನೀಡಿದೆ. ಶಾಮನೂರು ಕುಟುಂಬದ ಪ್ರಾಮಾಣಿಕ ದುಡಿಮೆಗೆ ದಾವಣಗೆರೆ ಮತದಾರರು ಖಂಡಿತವಾಗಿ ಮನ್ನಣೆ ನೀಡುತ್ತಾರೆ. ಅತ್ಯಂತ ಹೆಚ್ಚಿನ ಮತಗಳ ಅಂತರದಿಂದ ಸಮರ್ಥ ಗೆಲ್ಲಲಿದ್ದಾರೆ ಎಂದು ಅವರು ತಿಳಿಸಿದರು.

ಪಕ್ಷದ ಜಿಲ್ಲಾಧ್ಯಕ್ಷ ಎಚ್.ಬಿ.ಮಂಜಪ್ಪ, ಬಿಬಿಎಂಸಿ ಮಾಜಿ ಮೇಯರ್ ರಾಮಚಂದ್ರಪ್ಪ, ಬಿಎಂಟಿಸಿ ಅದ್ಯಕ್ಷ ಆರಾಧ್ಯ, ಕೆಪಿಸಿಸಿ ವಕ್ತಾರ ಡಿ.ಬಸವರಾಜ, ಸೈಯದ್ ಖಾಲಿದ್ ಅಹಮ್ಮದ್, ಎಚ್.ಜೆ.ಮೈನುದ್ದೀನ್ ಇತರರು ಇದ್ದರು.

- - -

(ಬಾಕ್ಸ್‌) * ಪ್ರಚಾರಕ್ಕೆ ಬರುವುದು ಪ್ರತಿಯೊಬ್ಬರ ಕರ್ತವ್ಯ

ಕಾಂಗ್ರೆಸ್ ಸಿದ್ಧಾಂತ ಒಪ್ಪಿ ಶಾಸಕ, ಮಂತ್ರಿ ಅಥವಾ ಪದಾಧಿಕಾರಿಯಾದವರು ಚುನಾವಣೆ ವೇಳೆ ಒಟ್ಟಾಗಿ ಕೆಲಸ ಮಾಡಲೇಬೇಕು. ಕಾಂಗ್ರೆಸ್ಸನ್ನು ಅಧಿಕಾರಕ್ಕೆ ತರುವುದು ನಮ್ಮೆಲ್ಲರ ಸಾಮೂಹಿಕ ಜವಾಬ್ದಾರಿ. ಬ್ಲಾಕ್‌ಮಟ್ಟದ ಪ್ರತಿ ಕಾರ್ಯಕರ್ತನೂ ಚುನಾವಣೆ ವೇಳೆ ಮುಂಚೂಣಿಯಲ್ಲಿರುತ್ತಾರೆ. ಜವಾಬ್ಧಾರಿ ಸಿಕ್ಕ ಮೇಲೆ ಕೆಲಸ ಮಾಡುವುದು ನಮ್ಮ ಕರ್ತವ್ಯ. ನಾನಷ್ಟೇ ಅಲ್ಲ, ಪಕ್ಷದ ಪ್ರತಿಯೊಬ್ಬರೂ ಈ ಮತಯುದ್ಧದಲ್ಲಿ ಪಾಲ್ಗೊಳ್ಳುತ್ತಾರೆ. ಅದು ನಮ್ಮ ಕರ್ತವ್ಯ ಮತ್ತು ಧರ್ಮವಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್‌ ದಕ್ಷಿಣದ ಪ್ರಚಾರಕ್ಕೆ ಸಚಿವ ಜಮೀರ್ ಅಹಮ್ಮದ್, ಎಂಎಲ್ಸಿ ಅಬ್ದುಲ್ ಜಬ್ಬಾರ್ ಬರುತ್ತಿಲ್ಲವೇಕೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

- - -

-30ಕೆಡಿವಿಜಿ7: ದಾವಣಗೆರೆಯಲ್ಲಿ ಸೋಮವಾರ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೃಹಬಳಕೆ ಅಡುಗೆ ಅನಿಲಕ್ಕೆ ಭಾರೀ ಡಿಮ್ಯಾಂಡ್...!
ಡಾ.ಜೆ.ಪಾಪೇಗೌಡರಿಗೆ ಎಂ.ಶಿವಲಿಂಗಯ್ಯ ಸಮಾಜಸೇವಾ ಪ್ರಶಸ್ತಿ