ಪೊಲೀಸ್ ಹುದ್ದೆಗೆ ನೇಮಕವಾದಾಗ ಎಲ್ಲ ಸಿಬ್ಬಂದಿಗೂ ದೈಹಿಕ ಸದೃಢತೆ ತರಬೇತಿ ನೀಡಲಾಗಿದ್ದರೂ, ಕೆಲಸದ ಒತ್ತಡ, ಸಮಯವಿಲ್ಲವೆಂಬ ಕಾರಣಗಳನ್ನೊಡ್ಡಿ ಪೊಲೀಸರು ದೈಹಿಕ ವ್ಯಾಪಾಮದಿಂದ ದೂರ ಉಳಿಯುತ್ತಿರುವುದು ಸರಿಯಲ್ಲ ಎಂದು ಬೆಂಗಳೂರಿನ ಕೆಎಸ್ಆರ್ಪಿ ಮಹಾ ನಿರೀಕ್ಷಕ ಸಂದೀಪ್ ಪಾಟೀಲ್ ಸೂಚ್ಯವಾಗಿ ಎಚ್ಚರಿಸಿದ್ದಾರೆ.
- ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟಕ್ಕೆ ಸಂದೀಪ್ ಪಾಟೀಲ್ ಚಾಲನೆ - - -
ಕನ್ನಡಪ್ರಭ ವಾರ್ತೆ ದಾವಣಗೆರೆ
ಪೊಲೀಸ್ ಹುದ್ದೆಗೆ ನೇಮಕವಾದಾಗ ಎಲ್ಲ ಸಿಬ್ಬಂದಿಗೂ ದೈಹಿಕ ಸದೃಢತೆ ತರಬೇತಿ ನೀಡಲಾಗಿದ್ದರೂ, ಕೆಲಸದ ಒತ್ತಡ, ಸಮಯವಿಲ್ಲವೆಂಬ ಕಾರಣಗಳನ್ನೊಡ್ಡಿ ಪೊಲೀಸರು ದೈಹಿಕ ವ್ಯಾಪಾಮದಿಂದ ದೂರ ಉಳಿಯುತ್ತಿರುವುದು ಸರಿಯಲ್ಲ ಎಂದು ಬೆಂಗಳೂರಿನ ಕೆಎಸ್ಆರ್ಪಿ ಮಹಾ ನಿರೀಕ್ಷಕ ಸಂದೀಪ್ ಪಾಟೀಲ್ ಸೂಚ್ಯವಾಗಿ ಎಚ್ಚರಿಸಿದರು.
ನಗರದ ಜಿಲ್ಲಾ ಪೊಲೀಸ್ ಕವಾಯಿತು ಮೈದಾನದಲ್ಲಿ ಸೋಮವಾರ ಜಿಲ್ಲಾ ಪೊಲೀಸ್ ಇಲಾಖೆ ಹಮ್ಮಿಕೊಂಡಿದ್ದ ವಾರ್ಷಿಕ ಪೊಲೀಸ್ ಕ್ರೀಡಾಕೂಟ-2025 ಉದ್ಘಾಟಿಸಿ ಅವರು ಮಾತನಾಡಿದರು. ನಮ್ಮ ಪೊಲೀಸ್ ಇಲಾಖೆಯಲ್ಲಿ ಅಧಿಕಾರಿ, ಸಿಬ್ಬಂದಿಗೆ ವಾರ್ಷಿಕ ಕ್ರೀಡಾಕೂಟ ನಡೆಸುವಂತೆ ಬೇರಾವುದೇ ಇಲಾಖೆಯಲ್ಲೂ ಕ್ರೀಡಾಕೂಟ ಆಯೋಜಿಸುವುದಿಲ್ಲ. ನಮ್ಮ ಅಧಿಕಾರಿ, ಸಿಬ್ಬಂದಿ ದೈಹಿಕವಾಗಿ ಸದೃಢವಾಗಿ ಇರಬೇಕೆಂಬ ಸದುದ್ದೇಶ ಕ್ರೀಡಾಕೂಟ ಆಯೋಜನೆ ಹಿಂದಿದೆ. ನಮ್ಮೆಲ್ಲಾ ಸಿಬ್ಬಂದಿ ಇಂತಹ ಕ್ರೀಡಾಕೂಟದ ಸದುಪಯೋಗ ಪಡೆಯಬೇಕು. ನಿರಂತರ ವ್ಯಾಯಾಮ ರೂಢಿಸಿಕೊಳ್ಳಬೇಕು ಎಂದು ತಿಳಿಸಿದರು.
ರಾಜ್ಯಮಟ್ಟದ ಪೊಲೀಸ್ ಕ್ರೀಡಾಕೂಟದಲ್ಲಿ ಬೆಂಗಳೂರು ನಗರ ಮತ್ತು ಕೆಎಸ್ಆರ್ಪಿ ತಂಡಗಳೇ ಪ್ರತಿ ವರ್ಷ ಹೆಚ್ಚು ಪ್ರಶಸ್ತಿ, ಪದಕ ಗೆದ್ದು ಚಾಂಪಿಯನ್ ಆಗತ್ತಿವೆ. ಇಂತಹ ನಿರಂತರ ಗೆಲುವಿಗೆ ತಡೆಯೊಡಿ, ನೀವು ಸಹ ಹೊಸ ಚಾಂಪಿಯನ್ಗಳಾಗಿ ಹೊರಹೊಮ್ಮಬೇಕು. ಈ ನಿಟ್ಟಿನಲ್ಲಿ ದಾವಣಗೆರೆ ಜಿಲ್ಲಾ ಪೊಲೀಸ್ ಕ್ರೀಡಾಪಟುಗಳೂ ಸಹ ನಿರಂತರ ಪ್ರಯತ್ನಶೀಲರಾಗಬೇಕು. ರಾಷ್ಟ್ರಮಟ್ಟದ ಅಥ್ಲೆಟಿಕ್ಸ್ನಲ್ಲಿ ಮಾತ್ರ ಕರ್ನಾಟಕ ಪದಕ ಗೆಲ್ಲುತ್ತಿದೆ. ಗುಂಪು ಕ್ರೀಡೆಯಲ್ಲೂ ಪದಕ, ಪ್ರಶಸ್ತಿ ಗೆಲ್ಲಲು ಪ್ರಯತ್ನಿಸಿ. ಆಸಕ್ತ ಕ್ರೀಡಾಪಟುಗಳಿಗೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಇಲಾಖೆಯಿಂದ ತರಬೇತಿ ನೀಡುತ್ತಿದ್ದು, ಅದನ್ನು ಸದ್ಭಳಕೆ ಮಾಡಿಕೊಳ್ಳಿ ಎಂದು ಸಂದೀಪ ಪಾಟೀಲ್ ಸಲಹೆ ನೀಡಿದರು.
ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ, ಜಿಪಂ ಸಿಇಒ ಗಿತ್ತೆ ಮಾಧವ ವಿಠಲ ರಾವ್, ಎಎಸ್ಪಿ ಪರಮೇಶ್ವರ ಹೆಗಡೆ ಸೇರಿದಂತೆ ಡಿವೈಎಸ್ಪಿ, ಸಿಪಿಐ, ಎಸ್ಐ, ಎಎಸ್ಐ, ಹೆಡ್ ಕಾನ್ಸ್ಟೇಬಲ್, ಕಾನ್ಸ್ಟೇಬಲ್, ಕುಟುಂಬ ವರ್ಗದವರು ಇದ್ದರು.
ಇದೇ ವೇಳೆ ಜಿಲ್ಲಾ ಪೊಲೀಸ್ ಕವಾಯಿತು ಮೈದಾನ ಆವರಣದ ಪೊಲೀಸ್ ಸಾಂಸ್ಕೃತಿಕ ಭವನದಲ್ಲಿ ಇಲಾಖೆ ಅಧಿಕಾರಿ, ಸಿಬ್ಬಂದಿ, ಮಕ್ಕಳಿಗೆ ನೂತನ ಟೆನಿಸ್ ಕೋರ್ಟ್, ಚೆಸ್, ನವೀಕರಿಸಲಾದ ಜಿಮ್ ಗಳನ್ನು ಕೆಎಸ್ಆರ್ಪಿ ಐಜಿಪಿ ಸಂದೀಪ್ ಪಾಟೀಲ್ ಉದ್ಘಾಟಿಸಿದರು. ಅನಂತರ ಟೇಬಲ್ ಟೆನ್ನಿಸ್, ಕೇರಂ ಆಟಗಳನ್ನು ಸಿಇಒ, ಎಸ್ಪಿ, ಪೊಲೀಸ್ ಸಿಬ್ಬಂದಿ ಮಕ್ಕಳ ಜೊತೆಗೆ ಸಂದೀಪ್ ಪಾಟೀಲ್ ಆಟವಾಡಿದರು.
ಇದೇ ವೇಳೆ ಕ್ರೀಡೆ ಮತ್ತಿತರೆ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಪೊಲೀಸ್ ಅಧಿಕಾರಿ, ಸಿಬ್ಬಂದಿ ಮಕ್ಕಳಾದ ಎಸ್.ಎಸ್. ಧೀರಜ್, ಅಭಿಷೇಕ್ ಎಂ.ಕಲ್ಲೇದೇವರು, ಎ.ಎಸ್.ಮಣಿಕಂಠ, ಎ.ಯು. ಶ್ರೀಧರ್, ಟಿ,ಅತಿಥಿ, ಕೆ.ಆರ್. ದೇವನಾಂಪ್ರಿಯ, ವಿ.ಧನಲಕ್ಷ್ಮೀ, ಪವಿತ್ರಾ ಹೆಬ್ಬಳ್ಳಿ, ವರಣ್ ಆರ್.ನಾಯ್ಕ ಅವರನ್ನು ಸನ್ಮನಿಸಲಾಯಿತು.
- - -
(ಟಾಪ್ ಕೋಟ್)ಪೊಲೀಸರ ಮಕ್ಕಳ ಸಾಧನೆ ನಿಜಕ್ಕೂ ಸಂತೋಷ ತಂತಿದೆ. ಕೇವಲ ಕ್ರಿಕೆಟ್ಗೆ ಒತ್ತು ನೀಡುವ ಇಂದಿನ ದಿನಗಳಲ್ಲಿ ಪೊಲೀಸರ ಮಕ್ಕಳು ಕರಾಟೆ, ಟೆನ್ನಿಸ್, ಚೆಸ್, ಬ್ಮಾಡ್ಮಿಂಟನ್ ನಂತರ ಇತರೆ ಕ್ರೀಡೆಗಳಲ್ಲೂ ರಾಜ್ಯ, ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿರುವುದು ಖುಷಿ ತಂದಿದೆ. ಪೊಲೀಸ್ ಸಿಬ್ಬಂದಿ ತಮ್ಮ ಮಕ್ಕಳ ಕ್ರೀಡಾಸಕ್ತಿ, ಕ್ರೀಡಾ ಸಾಧನೆಗೆ ಬೆಂಬಲವಾಗಿ ನಿಲ್ಲಬೇಕು. 2008ರಲ್ಲಿ ದಾವಣಗೆರೆಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕನಾಗಿ ಸೇವೆ ಸಲ್ಲಿಸಿದ ದಿನಗಳು ನನಗೆ ಇಂದಿಗೂ ಸ್ಮೃತಿಪಟಲದಲ್ಲಿವೆ.
- ಸಂದೀಪ್ ಪಾಟೀಲ್, ಐಜಿಪಿ, ಕೆಎಸ್ಆರ್ಪಿ, ಬೆಂಗಳೂರು.
- - - -17ಕೆಡಿವಿಜಿ10: ದಾವಣಗೆರೆ ಜಿಲ್ಲಾ ಪೊಲೀಸ್ ಕವಾಯಿತು ಮೈದಾನದಲ್ಲಿ ಜಿಲ್ಲಾ ಪೊಲೀಸ್ ಕ್ರೀಡಾಕೂಟ- 2025 ಉದ್ಘಾಟಿಸಿದ ಬೆಂಗಳೂರಿನ ಕೆಎಸ್ಆರ್ಪಿ ಐಜಿಪಿ ಸಂದೀಪ್ ಪಾಟೀಲ ಕ್ರೀಡಾಪಟುಗಳಿಗೆ ಶುಭ ಕೋರಿದರು. -17ಕೆಡಿವಿಜಿ12, 13: ದಾವಣಗೆರೆ ಜಿಲ್ಲಾ ಪೊಲೀಸ್ ಕವಾಯಿತು ಮೈದಾನದಲ್ಲಿ ಜಿಲ್ಲಾ ಪೊಲೀಸ್ ಕ್ರೀಡಾಕೂಟ 2025ನ್ನು ಉದ್ಘಾಟಿಸಿದ ಬೆಂಗಳೂರಿನ ಕೆಎಸ್ಸಾರ್ಪಿ ಐಜಿಪಿ ಸಂದೀಪ್ ಪಾಟೀಲ ಎಸ್ಪಿ ಉಮಾ ಪ್ರಶಾಂತ ಅವರ ಜೊತೆಗೆ ಟೇಬಲ್ ಟೆನ್ನಿಸ್ ಆಡಿ ಗಮನ ಸೆಳೆದರು. -17ಕೆಡಿವಿಜಿ14: ದಾವಣಗೆರೆ ಜಿಲ್ಲಾ ಪೊಲೀಸ್ ಕವಾಯಿತು ಮೈದಾನದಲ್ಲಿ ಜಿಲ್ಲಾ ಪೊಲೀಸ್ ಕ್ರೀಡಾಕೂಟ 2025ನ್ನು ಉದ್ಘಾಟಿಸಿದ ಬೆಂಗಳೂರಿನ ಕೆಎಸ್ಸಾರ್ಪಿ ಐಜಿಪಿ ಸಂದೀಪ್ , ಎಸ್ಪಿ ಉಮಾ ಪ್ರಶಾಂತ, ಜಿಪಂ ಸಿಇಒ ಗಿತ್ತೆ ಮಾಧವ ವಿಠಲರಾವ್ ಅವರು ಸಾಧನೆ ಮಾಡಿದ ಪೊಲೀಸ್ ಸಿಬ್ಬಂದಿ ಮಕ್ಕಳಿಗೆ ಸನ್ಮಾನಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.