ಕನ್ನಡಪ್ರಭ ವಾರ್ತೆ ವಿಜಯಪುರ
ಜಿಲ್ಲೆಯಲ್ಲಿ ಅತೀ ಹೆಚ್ಚು ಮೆಕ್ಕೆಜೋಳ ಬೆಳೆದಿದ್ದಾರೆ. ಮಾರುಕಟ್ಟೆಯಲ್ಲಿ ಮೆಕ್ಕೆಜೋಳ ಬಂದು 2 ತಿಂಗಳು ಗತಿಸಿದರು ಇಲ್ಲಿಯವರೆಗೆ ಖರೀದಿ ಕೇಂದ್ರವನ್ನು ಆರಂಭ ಮಾಡಿಲ್ಲ. ಕೂಡಲೇ ಜಿಲ್ಲೆ ಹಾಗೂ ತಾಲೂಕು ಕೇಂದ್ರಗಳಲ್ಲಿ ಖರೀದಿ ಕೇಂದ್ರ ಆರಂಭಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.ಯಾವುದೇ ಷರತ್ತುಗಳನ್ನು ನೀಡದೆ ರೈತರು ಬೆಳೆದಿರುವ ಎಲ್ಲ ಮೆಕ್ಕೆಜೋಳವನ್ನು ಖರೀದಿ ಮಾಡಬೇಕು ಹಾಗೂ ಇಲ್ಲಿರುವ ಗೊಂದಲಗಳನ್ನು ನಿವಾರಿಸಬೇಕು. ಧಾರವಾಡಕ್ಕೆ ಸ್ಯಾಂಪಲ್ ಕಳಿಸಲು ಸಾಧ್ಯವಾಗುವುದಿಲ್ಲ. ಕೂಡಲೇ ಇಲ್ಲಿಯೇ ವಿಜಯಪುರ ಜಿಲ್ಲೆಯಲ್ಲಿ ಹಾಗೂ ಎಲ್ಲ ತಾಲೂಕು ಕೇಂದ್ರಗಳಲ್ಲಿ ಖರೀದಿ ಕೇಂದ್ರ ಪ್ರಾರಂಭ ಮಾಡುವಂತೆ ಸಂಘಟನೆ ಪದಾಧಿಕಾರಿಗಳು ಆಗ್ರಹಿಸಿದರು.
ಒಬ್ಬ ರೈತರ ಖಾತೆಗೆ 2000 ಕೆ.ಜಿ ಎಂದು ನಿಗದಿ ಮಾಡಿದರೆ, ಉಳಿದ ಮೆಕ್ಕೆಜೋಳ ಏನು ಮಾಡಬೇಕು?. ಸರ್ಕಾರ ಕೇವಲ ನೆಪ ಮಾತ್ರಕ್ಕೆ ರೈತ ಪರ ಮುಖವಾಡ ಹಾಕಿದರೆ ಏನು ಪ್ರಯೋಜನವಾಗುವುದಿಲ್ಲ. ಎಲ್ಲ ಬೆಳೆಗಾರರನ್ನು ಗಮನದಲ್ಲಿಟ್ಟುಕೊಂಡು ಯೋಜನೆ ರೂಪಿಸಬೇಕು. ಕೇವಲ ಗೊಂದಲ ಸೃಷ್ಟಿಸಿದರೆ ಹೇಗೆ ಎಂಬುದು ತಿಳಿಯದಾಗಿದೆ ಎಂದರು. ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ, ಜಂಟಿ ಕೃಷಿ ನಿರ್ದೇಶಕ ಶಿವನಗೌಡ ಪಾಟೀಲ, ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಹುಲ ಕುಬಕಡ್ಡಿ, ರಾಜ್ಯ ಉಪಾಧ್ಯಕ್ಷ ಕಲ್ಲು ಸೊನ್ನದ, ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಇದ್ದರು.ಈಗಾಗಲೇ ಸರ್ಕಾರಕ್ಕೆ 3 ಬಾರಿ ಹಾಗೂ ಸಂಬಂಧಿಸಿದ ಎಲ್ಲಾ ಅಧಿಕಾರಿಗಳಿಗೆ ವರದಿ ಕಳುಹಿಸಿ ಶೀಘ್ರವಾಗಿ ಖರೀದಿ ಕೇಂದ್ರ ಆರಂಭಿಸುವಂತೆ ನಾವೂ ಕೂಡ ತಿಳಿಸಿದ್ದೇವೆ. ಕೆಎಂಎಫ್, ಡಿಸ್ಟಿಲರಿ ಹಾಗೂ ಪೋಲ್ಟ್ರಿ ಫುಡ್ ಸೇರಿದಂತೆ ಸಾಧ್ಯವಿರುವ ಎಲ್ಲಾ ಕಡೆಗೂ ಖರೀದಿ ಕೇಂದ್ರ ಆರಂಭಿಸಲು ಪ್ರಯತ್ನ ಮಾಡಲಾಗುತ್ತಿದೆ. ಮೆಕ್ಕೆಜೋಳ ಬೆಳೆಗರಾರ ಸಮಸ್ಯೆ ಕುರಿತು ಅರಿತಿರುವ ನಾವು ಆದಷ್ಟು ಬೇಗ ಪ್ರಾರಂಭ ಮಾಡುಲು ಪ್ರಯತ್ನ ಮಾಡುತ್ತೇನೆ ಎಂದು ಜಿಲ್ಲಾಧಿಕಾರಿ ಡಾ.ಆನಂದ.ಕೆ ಹೇಳಿದರು.