ಹರಪನಹಳ್ಳಿ: ಒಗ್ಗಟ್ಟು, ಸಮೃದ್ದಿ ಸಂತೋಷದ ಸಂಕೇತವೇ ಮಕರ ಸಂಕ್ರಾಂತಿ ಹಬ್ಬವಾಗಿದೆ ಎಂದು ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ಹೇಳಿದ್ದಾರೆ.ತಾಲೂಕಿನ ಕಡತಿ ಗ್ರಾಮ ಸಮೀಪದ ತುಂಗಭದ್ರ ನದಿ ತಟದಲ್ಲಿ ಪ್ರತಿ ವರ್ಷದಂತೆ ಮಕರ ಸಂಕ್ರಾತಿ ಹಬ್ಬದ ನಿಮಿತ್ತ ಭಾನುವಾರ ಆಯೋಜಿಸಿದ್ದ ಜಾನಪದ ನೃತ್ಯದರ್ಶನಂ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರತಿ ಹಬ್ಬಗಳಲ್ಲಿ ವಿಶಿಷ್ಠ ರೀತಿಯ ಭಕ್ಷಗಳನ್ನು ತಯಾರಿಸಿ ನೈವೈದ್ಯ ಮಾಡುವ ಪರಿಪಾಠ ನಮ್ಮಲ್ಲಿ ಚಾಲ್ತಿಯಲ್ಲಿದೆ. ಪ್ರಮುಖವಾಗಿ ಸಂಕ್ರಾತಿ ಹಬ್ಬ ಚಳಿಗಾಲ ಮುಗಿಸಿ ಬೇಸಿಗೆ ಕಾಲಕ್ಕೆ ಪಾರ್ದಾಪಣೆ ಮಾಡುವ ಕಾಲ. ಈ ಹಬ್ಬದಲ್ಲಿ ಎಳ್ಳು ಬೆಲ್ಲ ಹಂಚಿ ಆಚರಣೆ ಮಾಡುವುದರಲ್ಲಿ ವೈಜ್ಞಾನಿಕ ಮಹತ್ವವಿದೆ. ಹಿರಿಯ ಸಂಪ್ರದಾಯಗಳನ್ನು ಉಳಿಸಿ ಬೆಳಸಲು ಇಂತಹ ಹಬ್ಬ ಹರಿದಿನಗಳನ್ನು ಸಾಮೂಹಿಕವಾಗಿ ಆಚರಣೆ ಮಾಡೋಣ. ಟಿ.ವಿ. ಮೊಬೈಲ್ಗಳ ದಾಸ್ಯದಿಂದ ಹೊರಗೆ ಬರಬೇಕಾಗಿದೆ.
ಸಂಕ್ರಾತಿ ಹಬ್ಬದಾಚರಣೆಗೆ ಆಗಮಿಸಿದ ಎಲ್ಲರಿಗೂ ಎಳ್ಳು-ಬೆಲ್ಲ ನೀಡಿ ಸ್ವಾಗತಿಸಿದ್ದು ವಿಶೇಷವಾಗಿತ್ತು.ಶಿಗ್ಗಾಂವ ತಾಲೂಕಿನ ಕಬನೂರು ಶ್ರೀ ಅಲ್ಲಿಕೇರಿ ಬಸವೇಶ್ವರ ಸಾಂಸ್ಕೃತಿಕ ಕ್ರೀಡಾ ಯುವ ಸಂಘ, ಮರಿಯಮ್ಮನಹಳ್ಳಿ ಕಲಾ ತಂಡ ಸೇರಿದಂತೆ ಇತರರಿಂದ ಜಾನಪದ ಹಾಡು, ಜನಪದ ನೃತ್ಯ, ಸುಗ್ಗಿ ನೃತ್ಯ, ದೀಪದ ನೃತ್ಯ, ಗಾಯನ ನೆರೆದ ಪ್ರೇಕ್ಷಕರಿಗೆ ಮುದು ನೀಡಿದವು.
ತುಂಗಭದ್ರಾ ನದಿ ತೀರದಲ್ಲಿ ಜಾನಪದ ರಸದೌತಣ ಸಂಕ್ರಾಂತಿ ಹಬ್ಬದ ಆಚರಣೆಗೆ ರಂಗು ನೀಡಿತ್ತು. ಮುಖಂಡರಾದ ಎಚ್.ಎಂ. ಮಲ್ಲಿಕಾರ್ಜುನ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ.ವಿ. ಅಂಜಿನಪ್ಪ, ಮೈದೂರು ಕುಬೇರಗೌಡ, ಪುರಸಭಾ ಸದಸ್ಯರಾದ ಡಿ. ಅಬ್ದುಲ್ ರಹಿಮಾನ್, ಗೊಂಗಡಿ ನಾಗರಾಜ, ಲಾಟಿ ದಾದಾಪೀರ, ಉದ್ದಾರ ಗಣೇಶ, ಟಿ. ವೆಂಕಟೇಶ, ಡಿವೈಎಸ್ಪಿ ವೆಂಕಟಪ್ಪ ನಾಯಕ, ಸಿಪಿಐ ನಾಗರಾಜ ಎಂ. ಕಮ್ಮಾರ, ಉಪವಿಭಾಗಾಧಿಕಾರಿ ಚಿದಾನಂದ ಗುರುಸ್ವಾಮಿ, ತಹಸೀಲ್ದಾರ್ ಬಿ.ವಿ. ಗಿರೀಶಬಾಬು, ಕಿರಣಕುಮಾರ ನಾಯ್ಕ, ವಸಂತಪ್ಪ, ಮೇಘರಾಜ, ಮತ್ತೂರು ಬಸವರಾಜ, ಪ್ರದೀಪಗೌಡ, ಮೈದೂರು ರಾಮಣ್ಣ, ಹುಲ್ಲಿಕಟ್ಟಿ ಚಂದ್ರಪ್ಪ, ಎಚ್.ಎಂ. ಕೊಟ್ರಯ್ಯ, ಸಣ್ಣ ಹಾಲಪ್ಪ, ಉದಯಶಂಕರ, ಕಂಚಿಕೇರಿ ಜಯಲಕ್ಷ್ಮೀ, ನೇತ್ರಾವತಿ, ಉಮಾ ಮಹೇಶ್ವರಿ, ಸುಮಾ ಜಗದೀಶ, ತೆಲಿಗಿ ಉಮಾಕಾಂತ ಅನೇಕರು ಹಾಜರಿದ್ದರು.