ಕ್ರೀಡೆ, ಸಾಂಸ್ಕೃತಿಕ ಉತ್ಸವ । 5ನೇ ವರ್ಷದ ಸಂಭ್ರಮ । 2023-24ನೇ ಸಾಲಲ್ಲಿ ಸಾಧನೆ ಮಾಡಿದ ಮಕ್ಕಳಿಗೆ ಗೌರವ । ಸ್ಪರ್ಧಾ ವಿಜೇತರಿಗೆ ಬಹುಮಾನ
ಕನ್ನಡಪ್ರಭ ವಾರ್ತೆ ಹಾಸನಮೊಸಳೆಹೊಸಹಳ್ಳಿಯ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸಂಸ್ಥೆಯ 5ನೇ ವರ್ಷದ ಸಾಂಸ್ಕೃತಿಕ ಮತ್ತು ಕ್ರೀಡಾ ಮಹೋತ್ಸವ ‘ಮಕರೋತ್ಸವ-2024’ ಅತ್ಯಂತ ವಿಜೃಂಭಣೆಯಿಂದ ನೆರವೇರಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಬೆಂಗಳೂರಿನ ಇಂಟೆಲ್ ಟೆಕ್ನಾಲಜಿ ಇಂಡಿಯಾ ಪ್ರೈ.ಲಿ. ನಿರ್ದೇಶಕ ವಿಜಯಾನಂದ ನಾಯಕ್, ಹಾಸನ ಆಕಾಶವಾಣಿಯ ಕಾರ್ಯಕ್ರಮ ಮುಖ್ಯಸ್ಥ ವಿಜಯ್ ಅಂಗಡಿ, ಸಮಾಜ ಕಲ್ಯಾಣ ಇಲಾಖೆ ನಿವೃತ್ತ ಜಂಟಿ ನಿರ್ದೇಶಕ ಕೊಪ್ಪೂರ್ಕರ್ ಮತ್ತು ಸಂಸ್ಥೆಯ ಪ್ರಾಂಶುಪಾಲ ಡಾ.ಟಿ.ರಂಗಸ್ವಾಮಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.2023-24 ನೇ ಶೈಕ್ಷಣಿಕ ಸಾಲಿನಲ್ಲಿ ಉತ್ತಮ ಸಾಧನೆಗೈದ ವಿದ್ಯಾರ್ಥಿಗಳಿಗೆ ‘ಉತ್ತಮ ವಿದ್ಯಾರ್ಥಿ ಪ್ರಶಸ್ತಿ’ ಹಾಗೂ ಪ್ರತಿ ಸೆಮಿಸ್ಟರ್ನಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸಲಾಯಿತು. ಕಾಲೇಇನಲ್ಲಿ ಆಯೋಜಿಸಿದ್ದ ಸ್ಪರ್ಧೆಯ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಈ ವೇಳೆ ಮಾತನಾಡಿದ ವಿಜಯಾನಂದ ನಾಯಕ್, ವಿದ್ಯಾರ್ಥಿಗಳು ಶೈಕ್ಷಣಿಕ ಮತ್ತು ತಾಂತ್ರಿಕತೆಯ ಜತೆಗೆ ತಮ್ಮಲ್ಲಿರುವ ಪ್ರತಿಭೆಯನ್ನು ವೃದ್ಧಿಸಿಕೊಳ್ಳುವ ಕಡೆಗೆ ಗಮನ ಹರಿಸಿ ಉನ್ನತ ಮಟ್ಟಕ್ಕೆ ಬೆಳೆಯಬೇಕು. ‘ಕೈಲಾಗದು ಎಂದು ಕೈಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ’ ಎಂಬ ಹಾಡಿನ ಸಾಲಿನಂತೆ ನಾವು ಯಾವುದೇ ಗುರಿಯೆಡೆಗೆ ಸಾಗಬೇಕಾದರೆ ಮೊದಲು ನಮ್ಮ ಮೇಲೆ ನಮಗೆ ವಿಶ್ವಾಸ ಹಾಗೂ ನಂಬಿಕೆಯಿರಬೇಕು. ‘ಸತತ ಪ್ರಯತ್ನವೇ ಸಾಧನೆಯೇ ರಹಸ್ಯ’ ಎಂಬಂತೆ ಕಂಡ ಕನಸು ನನಸಾಗುವವರೆಗೂ ಎಡೆಬಿಡದೆ ಛಲದಿಂದ ಮುನ್ನುಗ್ಗಿ ಗುರಿ ಮುಟ್ಟಬೇಕು ಎಂದು ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.ಹಾಸನದ ಆಕಾಶವಾಣಿಯ ಕಾರ್ಯಕ್ರಮ ಮುಖ್ಯಸ್ಥ ವಿಜಯ್ ಅಂಗಡಿ ಮಾತನಾಡಿ, ‘ವಿದ್ಯೆ ಇದ್ದರೇನಂತೆ ವಿವೇಕ ಇಲ್ಲದಿದ್ದರೆ ಎಂಬಂತೆ ಆರಂಭದಿಂದಲೇ ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ಶಿಸ್ತನ್ನು ರೂಢಿಸಿಕೊಳ್ಳಬೇಕು. ಜೀವನದಲ್ಲಿ ಶಿಕ್ಷಣ ಎಷ್ಟು ಮುಖ್ಯವೋ ಶಿಸ್ತು ಕೂಡ ಅಷ್ಟೇ ಮುಖ್ಯ. ಮಾತು ಬೆಳ್ಳಿ ಮೌನ ಬಂಗಾರದಂತೆ, ಮಾತಿಗಿಂತ ಮೌನವು ಹೆಚ್ಚು ಬೆಲೆ ಬಾಳುವಂತದ್ದು, ಅದನ್ನು ಕಾಪಾಡಿಕೊಳ್ಳಿ, ಕಡಿಮೆ ಮಾತನಾಡಿ ಹೆಚ್ಚು ಕೆಲಸ ಮಾಡಿ, ಯಶಸ್ಸು ತಾನಾಗಿಯೇ ಅರಸಿ ಬರುತ್ತದೆ’ ಎಂದು ವಿವರಿಸಿದರು.
ಪ್ರಾಂಶುಪಾಲ ಡಾ.ಟಿ.ರಂಗಸ್ವಾಮಿ ಮಾತನಾಡಿ, ‘ನಮ್ಮ ಸರ್ಕಾರಿ ಸಂಸ್ಥೆಯ ವಿದ್ಯಾರ್ಥಿಗಳು ಯಾವ ವಿಷಯದಲ್ಲೂ ಖಾಸಗಿ ಸಂಸ್ಥೆಗಳಿಗೆ ಕಡಿಮೆ ಇಲ್ಲದಂತೆ ಎಲ್ಲಾ ಚಟುವಟಿಕೆಗಳಲ್ಲಿಯೂ ಭಾಗವಹಿಸಿ ತಮ್ಮ ಪ್ರತಿಭೆಯ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕು. ಎಂಜಿನಿಯರಿಂಗ್ ಪದವಿಯ ನಂತರ ವೃತ್ತಿ ಜೀವನದಲ್ಲಿ ಹಾಗೂ ಸಮಾಜದ ಸರ್ವತೋಮುಖ ಉನ್ನತಿಯಲ್ಲಿ ಭಾಗಿಯಾಗಿ, ಭವಿಷ್ಯದಲ್ಲಿ ದೇಶದ ತಾಂತ್ರಿಕತೆಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿ ಅತ್ಯುತ್ತಮ ಕೊಡುಗೆ ನೀಡಬೇಕು’ ಎಂದು ಕಿವಿಮಾತು ಹೇಳಿದರು.ಎಲ್ಲಾ ವಿಭಾಗದ ಮುಖ್ಯಸ್ಥರು, ಪ್ರಾಧ್ಯಾಪಕರು, ಸಾಂಸ್ಕೃತಿಕ ಮತ್ತು ಕ್ರೀಡಾ ಸಂಯೋಜಕರು, ವಿದ್ಯಾರ್ಥಿ ಕ್ಷೇಮಾಧಿಕಾರಿ, ಬೋಧಕ-ಬೋಧಕೇತರ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಇದ್ದರು.