ದೊರೆತ ಅವಕಾಶ ಬಳಸಿಕೊಂಡು ಉಜ್ವಲ ಭವಿಷ್ಯ ರೂಪಿಸಿಕೊಳ್ಳಿ

KannadaprabhaNewsNetwork | Published : Nov 6, 2024 11:54 PM

ಸಾರಾಂಶ

ಪದವೀಧರರು ಉದ್ಯೋಗ ಪಡೆಯುವ ಅವಕಾಶಗಳಿಗೆ ಕಾಯುವ ಬದಲು, ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಆಕ್-ಲಕ್ಷ್ಯ ಉದ್ಯೋಗ ನಿಯೋಜನಾ ಸಂಸ್ಥೆಯ ನಿರ್ದೇಶಕ ರಾಜಾ ಶಶಿಧರ್ ಹೇಳಿದರು.

ಕನ್ನಡಪ್ರಭ ವಾರ್ತೆ ತುಮಕೂರು

ಪದವೀಧರರು ಉದ್ಯೋಗ ಪಡೆಯುವ ಅವಕಾಶಗಳಿಗೆ ಕಾಯುವ ಬದಲು, ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಆಕ್-ಲಕ್ಷ್ಯ ಉದ್ಯೋಗ ನಿಯೋಜನಾ ಸಂಸ್ಥೆಯ ನಿರ್ದೇಶಕ ರಾಜಾ ಶಶಿಧರ್ ಹೇಳಿದರು.

ನಗರದ ವಿವಿ ವಿಜ್ಞಾನ ಕಾಲೇಜಿನ ಉದ್ಯೋಗ ಕೋಶ ಮತ್ತು ವೃತ್ತಿ ಸಮಾಲೋಚನ ಕೋಶವು ಆಕ್-ಲಕ್ಷ್ಯ ಉದ್ಯೋಗ ನಿಯೋಜನಾ ಸಂಸ್ಥೆಯ ಸಹಯೋಗದಲ್ಲಿ ಅಂತಿಮ ವರ್ಷದ ಬಿ.ಎಸ್ಸಿ ವಿದ್ಯಾರ್ಥಿಗಳಿಗೆ ಬುಧವಾರ ಆಯೋಜಿಸಿದ್ದ ಉದ್ಯೋಗ ಮೇಳದಲ್ಲಿ ಮಾತನಾಡಿದರು.

ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಲು, ಉದ್ಯೋಗ ಪಡೆಯಲು ವಿದ್ಯಾರ್ಥಿಗಳನ್ನು ಶಿಕ್ಷಣ ಸಂಸ್ಥೆಗಳು ತಯಾರು ಮಾಡಬೇಕು. ಉದ್ಯೋಗ ಪಡೆಯಲು ಅವರನ್ನು ನೂಕುವಂಥ ಪರಿಸ್ಥಿತಿ ಉಂಟಾಗಿದೆ. ಪರೀಕ್ಷೆಗಳಲ್ಲಿ ಅನುತ್ತೀರ್ಣರಾಗಿ, ಅವಧಿ ಮೀರಿ ಪದವಿಯನ್ನು ಮುಗಿಸಿದವರಿಗೆ ಬಹುತೇಕ ಉದ್ಯೋಗ ಸಂಸ್ಥೆಗಳಲ್ಲಿ ಸಂದರ್ಶನಕ್ಕೆ ಹಾಜರಾಗಲು ಅರ್ಹತೆ ಇರುವುದಿಲ್ಲ ಎಂದರು.

ಸಂವಹನ ಕೌಶಲ್ಯ, ಗುಣಮಟ್ಟದಬರೆವಣಿಗೆ, ವಿಷಯ ಪರಿಣಿತಿಯ ನೈಪುಣ್ಯತೆ ಹೊಂದಿದವರಿಗೆ ಕೇಳುವಷ್ಟು ಸಂಬಳ ನೀಡಿ ಕಂಪನಿಗಳು ಆಯ್ಕೆ ಮಾಡಿಕೊಳ್ಳುತ್ತಿವೆ ಎಂದು ತಿಳಿಸಿದರು.

ಆಕ್-ಲಕ್ಷ್ಯಉದ್ಯೋಗ ನಿಯೋಜನಾ ಸಂಸ್ಥೆ ನಿರ್ದೇಶಕ ಅಶೋಕ್‌ ರಾಮಚಂದ್ರನ್‌ ಮಾತನಾಡಿ, ಉದ್ಯೋಗ ಆಯ್ಕೆಯ ಹಂತಗಳ ಕುರಿತು ವಿವರಿಸಿದರು.

ಕಾರ್ಯಕ್ರಮ ನಿರ್ವಾಹಕಿ ಸೌಜನ್ಯಅವರು ವಿದ್ಯಾರ್ಥಿಗಳು ಉದ್ಯೋಗ ಪಡೆಯಲು ಅಗತ್ಯವಿರುವ ಕೌಶಲ್ಯಗಳ ಕುರಿತು ತಿಳಿಸಿದರು.

ಉದ್ಯೋಗ ಮೇಳದಲ್ಲಿ ವಿವಿ ವಿಜ್ಞಾನ ಕಾಲೇಜಿನ ಅಂತಿಮ ವರ್ಷದ ಬಿ.ಎಸ್ಸಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಭಾಗವಹಿಸಿದ್ದರು. ರಾಜ್ಯದ ವಿವಿಧ ಪ್ರತಿಷ್ಠಿತ ಕಂಪನಿಗಳು ಬಯಸುವ ಕೌಶಲ್ಯಆಧಾರಿತ ಪ್ರವೇಶ ಪರೀಕ್ಷೆ ಹಾಗೂ ಸಂದರ್ಶನ ನಡೆಸಲಾಯಿತು. ಈ ಹಂತದಲ್ಲಿ ಅತ್ಯುತ್ತಮ ಪ್ರದರ್ಶನತೋರಿ, ಸೂಕ್ತ ವಿಷಯಗಳಲ್ಲಿ ಪರಿಣಿತಿ ಹೊಂದಿಆಯ್ಕೆಯಾದ ವಿದ್ಯಾರ್ಥಿಗಳನ್ನು ಕಂಪನಿಗಳಿಗೆ ನೇರತರಬೇತಿಗಾಗಿ ಕಳುಹಿಸಲಾಗುವುದು.

ಕುಲಸಚಿವೆ ನಾಹಿದಾ ಜಮ್‌ಜಮ್, ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಪ್ರೊ.ಶೇಟ್ ಎಂ.ಪ್ರಕಾಶ್, ವಿವಿಯ ಉದ್ಯೋಗಾಧಿಕಾರಿ ಪ್ರೊ.ಪರಶುರಾಮ ಕೆ.ಜಿ., ಉದ್ಯೋಗಕೋಶದ ಸಂಯೋಜಕಡಾ. ವಿಜಯಕುಮಾರ್ ಜಿ. ಆರ್.ಉಪಸ್ಥಿತರಿದ್ದರು.

Share this article