ಗೋಕರ್ಣದ ಮುಖ್ಯ ಕಡಲತೀರದಲ್ಲಿ ಸ್ವಚ್ಛತಾ ಕಾರ್ಯಕ್ರಮದಲ್ಲಿ ಪರಿಸರ ತಜ್ಞ
ಸ್ವಚ್ಛತೆಯ ಪರಿಜ್ಞಾನ, ಪ್ಲಾಸ್ಟಿಕ್ ಬಳಕೆ ಬೇಡ ಎಂಬ ದೃಢ ನಿರ್ಧಾರ ಮಾಡಿದರೆ ದೇಶದಲ್ಲಿನ ಸ್ವಚ್ಛತೆ ಹಾಗೂ ಪ್ಲಾಸ್ಟಿಕ್ ನಿಯಂತ್ರಣ ಕ್ರಮ ಅರ್ಧಕ್ಕಿಂತ ಹೆಚ್ಚು ಯಶಸ್ವಿಯಾಗುತ್ತದೆ ಎಂದು ಪರಿಸರ ತಜ್ಞ ಡಾ. ವಿ.ಎನ್. ನಾಯಕ ಹೇಳಿದರು.
ಬೆಂಗಳೂರಿನ ಪರಿಸರ ನಿರ್ವಹಣೆ ನೀತಿ ಸಂಶೋಧನಾ ಸಂಸ್ಥೆ, ವನಲೋಕ ಫೌಂಡೇಶನ್, ಕುಮಟಾದ ಐಕ್ಯ ಎನ್. ಜಿ.ಒ, ಇಲ್ಲಿನ ಗ್ರಾಪಂ, ಪುಣ್ಯಾಶ್ರಮ, ಉತ್ತರ ಕನ್ನಡ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಸಂಸ್ಥೆ ಆಶ್ರಯದಲ್ಲಿ ಮುಖ್ಯ ಕಡಲತೀರದಲ್ಲಿ ನಡೆದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಮಾತನಾಡಿದರು.ಸ್ವಚ್ಛತಾ ಕಾರ್ಯಕ್ರಮ, ಸಭೆ ಕೇವಲ ಘೋಷಣೆಗೆ ಸಿಮೀತವಾಗದೆ ನಾವೇ ಅಳವಡಿಸಿಕೊಂಡು ಪ್ರತಿಯೊಬ್ಬರು ಅದರಂತೆ ನಡೆದರೆ ಪರಿಸರ ಸ್ವಚ್ಛವಾಗಿಡಲು ಕಾರಣವಾಗುವುದರ ಜೊತೆ ಸ್ವಚ್ಛತೆಯ ಪಾಠದ ಅವಶ್ಯಕತೆ ಇರುವುದಿಲ್ಲ ಎಂದ ಅವರು, ನೀರಿನ ಬಾಟಲಿ ಬಳಕೆಯ ದುಷ್ಪರಿಣಾಮಗಳು ಹಾಗೂ ಪ್ರವಾಸಿ ತಾಣದಲ್ಲಿ ಕೈಗೊಳ್ಳಬಹುದಾದ ಕ್ರಮಗಳ ಕುರಿತು ಸಲಹೆ ನೀಡಿದರು.
ಅನುವಂಶೀಯ ಉಪಾಧಿವಂತ ಮಂಡಲದ ಅಧ್ಯಕ್ಷ ಪುಣ್ಯಾಶ್ರಮದ ವೇ. ರಾಜಗೋಪಾಲ ಅಡಿಗುರೂಜಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಮಾತೆ, ಮಾತೃಭೂಮಿ ಕಾಪಾಡಿಕೊಳ್ಳಬೇಕು. ಜನ್ಮಕೊಟ್ಟ ಮಾತೆಯನ್ನ ನೋಡಿಕೊಂಡಂತೆ ನಾವು ಇರುವ ನೆಲವನ್ನ ನೋಡಿಕೊಳ್ಳಬೇಕು. ಸ್ವಚ್ಛತಾ ಕಾರ್ಯ, ಪ್ರವಾಸಿಗರಿಗೆ ತಿಳುವಳಿಕೆ ಮತ್ತಿತರ ಕ್ರಮಕ್ಕೆ ಗ್ರಾಪಂ ಜೊತೆ ಪ್ರಮುಖ ದೇವಾಲಯ ಆಡಳಿತದ ಸಹಕಾರವು ಅಗತ್ಯ ಎಂದರು.ಹೆಚ್ಚಿನ ಅನುದಾನದ ಮೂಲಕ ಪ್ರವಾಸಿ ತಾಣ ಅಭಿವೃದ್ಧಿ ಪಡಿಸಲು ಗ್ರಾಮ ಪಂಚಾಯಿತಿಯನ್ನ ಪಟ್ಟಣ ಪಂಚಾಯಿತಿ ಆಗಿ ಮೇಲ್ದರ್ಜೆಗೇರಿಸಬೇಕು. ಈ ಕುರಿತು ಪುಣ್ಯಾಶ್ರಮ ಸದಾ ಜೊತೆಯಾಗಿದ್ದು ಹೋರಾಟಕ್ಕೂ ಬೆಂಬಲ ನೀಡುತ್ತದೆ ಎಂದರು.ಬೆಂಗಳೂರಿನ ವನಲೋಕ ಫೌಂಡೇಶನ್ ನಿರ್ದೇಶಕಿ ಡಾ. ರೂಪಾ ಸ್ವಾಗತಿಸಿ ಕಾರ್ಯಕ್ರಮದ ಉದ್ದೇಶ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ಬೆಂಗಳೂರಿನ ಎಂಪ್ರಿ ಸಂಸ್ಥೆಯ ಪ್ರತಿನಿಧಿಗಳು, ಐಕ್ಯ ಎನ್.ಜಿ.ಒ ಅಧ್ಯಕ್ಷ ಎಂ.ಜಿ. ನಾಯ್ಕ, ಗ್ರಾಪಂ ಅಧ್ಯಕ್ಷೆ ಸುಮನಾ ಗೌಡ, ಪಿ.ಐ. ಶ್ರೀಧರ ಎಸ್.ಆರ್. ಉತ್ತರ ಕನ್ನಡ ಸ್ಕೌಟ್ಸ್ ಮತ್ತು ಗೈಡ್ಸ್ ಸಂಚಾಲಕಿ ಭಾರತಿ ಡಯಾಸ್, ಪಹರೆ ವೇದಿಕೆಯ ಗೋಕರ್ಣ ಘಟಕದ ಮುಖ್ಯಸ್ಥ ಮಹೇಶ್ ಶೆಟ್ಟಿ, ಗ್ರಾಪಂ ಸದಸ್ಯರಾದ ಮಂಜುನಾಥ ಶೆಟ್ಟಿ, ಪಾರ್ವತಿ ಶೆಟ್ಟಿ, ತೇಜಸ್ವಿ ನಾಯ್ಕ, ಕುಮಾರ ಮಾರ್ಕಾಂಡೆ, ಭದ್ರಕಾಳಿ ಪಿ.ಯು. ಕಾಲೇಜು ವಿದ್ಯಾರ್ಥಿಗಳು, ಸ್ಕೌಟ್ಸ್ ಮತ್ತು ಗೈಡ್ಸ್ ಪದಾಧಿಕಾರಿಗಳು ಕುಮಟಾದ ಡಾ. ಎ. ವಿ. ಬಾಳಿಗಾ ಕಾಲೇಜು ಎನ್.ಎಸ್.ಎಸ್ ಘಟಕ ಪ್ರತಿನಿಧಿಗಳು ಉಪಸ್ಥಿತರಿದ್ದರು. ಗ್ರಾಪಂ ಅಭಿವೃದ್ಧಿ ಅಧಿಕಾರಿ ವೆಂಕಟರಮಣ ಪಟಗಾರ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದರ್ಶಿ ಮಂಜುನಾಥ ಹಾಗೂ ಸಿಬ್ಬಂದಿ ಸಹಕರಿಸಿದರು.ಕಾರ್ಯಕ್ರಮದ ಮೊದಲು ರಥಬೀದಿಯಿಂದ ಮುಖ್ಯಕಡಲತೀರದವರೆಗೆ ಜಾಗೃತಿ ಜಾಥಾ ನಡೆಯಿತು. ಒಂದು ಕಿಮೀ ಹೆಚ್ಚು ದೂರದ ಕಡಲತೀರದಲ್ಲಿ ಬಿದ್ದ ಕಸ ಕಡ್ಡಿಗಳನ್ನ ತೆಗೆದು ಸಂಗ್ರಹಿಸಿ ಗ್ರಾಪಂಗೆ ವಿಲೇವಾರಿಗೆ ನೀಡಲಾಯಿತು. ಸಂಘ-ಸಂಸ್ಥೆಯ ಪ್ರಮುಖರು, ಸದಸ್ಯರು, ಶಿಕ್ಷಕ ವೃಂದ, ವಿದ್ಯಾರ್ಥಿಗಳು, ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ, ಸಾರ್ವಜನಿಕರು ಪಾಲ್ಗೊಂಡಿದ್ದರು. ಪುಣ್ಯಾಶ್ರಮದಿಂದ ಉಟೋಪಚಾರದ ವ್ಯವಸ್ಥೆ ಮಾಡಲಾಗಿತ್ತು.