ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಜಿಲ್ಲೆಯಲ್ಲಿ ಇಂದಿನಿಂದ ನೂರು ದಿನಗಳ ಕಾಲ ಕ್ಷಯರೋಗ ಪತ್ತೆ ಅಭಿಯಾನಕ್ಕೆ ಚಾಲನೆ ನೀಡಲಾಗಿದ್ದು, ಪ್ರಸ್ತುತ ಜಿಲ್ಲೆಯಲ್ಲಿ 23 ಗ್ರಾಮ ಪಂಚಾಯಿತಿಗಳನ್ನು ಕ್ಷಯಮುಕ್ತ ಗ್ರಾಮ ಪಂಚಾಯಿತಿಗಳನ್ನಾಗಿ ಘೋಷಿಸಲಾಗಿದೆ. 2025 ನೇ ವರ್ಷದ ಅಂತ್ಯದೊಳಗೆ ಇಡೀ ಜಿಲ್ಲೆಯನ್ನು ಕ್ಷಯಮುಕ್ತ ಎಂದು ಘೋಷಿಸಲು ಉದ್ದೇಶಿಸಿರುವುದಾಗಿ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಹೇಳಿದರು.ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಸಹಯೋಗದಲ್ಲಿ ಶನಿವಾರ ಜಿಲ್ಲಾಡಳಿತ ಭವನದ ಆಡಿಟೋರಿಯಂನಲ್ಲಿ ರಾಷ್ಟ್ರೀಯ ಕ್ಷಯ ರೋಗ ನಿರ್ಮೂಲನೆ ಕಾರ್ಯಕ್ರಮದಡಿ 100 ದಿನ ಕ್ಷಯರೋಗ ತಿಳಿವಳಿಕೆ ಮತ್ತು ನಿರ್ಮೂಲನಾ ಅಭಿಯಾನವನ್ನು ಉದ್ಘಾಟಿಸಿ ಮಾತನಾಡಿದರು.
ಗುಣಪಡಿಸಬಹುದಾಗ ರೋಗಕ್ಷಯ ಮತ್ತು ಕುಷ್ಠರೋಗಿಗಳನ್ನು ಹಲವು ವರ್ಷಗಳ ಹಿಂದೆ ಅತ್ಯಂತ ಅಮಾನವೀಯವಾಗಿ ಮತ್ತು ಹೀನಾಯವಾಗಿ ನೋಡಲಾಗುತ್ತಿತ್ತು. ಆದರೆ, ಆಧುನಿಕತೆ, ವೈದ್ಯಕೀಯ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರಭಾವ, ಪರಿಣಾಮದಿಂದ ನಾಗರೀಕತೆ ಬೆಳೆದಂತೆ ಪರಿಸ್ಥಿತಿ ಬದಲಾಗಿದೆ. ಈಗ ಕ್ಷಯ ಮತ್ತು ಕುಷ್ಠರೋಗಗಳು ಸಂಪೂರ್ಣವಾಗಿ ಗುಣಪಡಿಸಬಹುದಾದಂತಹ ಕಾಯಿಲೆ. ಈ ಹಿನ್ನೆಲೆಯಲ್ಲಿ ಕೇಂದ್ರ- ಸರ್ಕಾರವು ರಾಜ್ಯ ಸರ್ಕಾರಗಳ ಸಹಕಾರದೊಂದಿಗೆ ಇಡೀ ದೇಶಾದ್ಯಂತ ಕ್ಷಯ ಮತ್ತು ಕುಷ್ಠರೋಗಗಳನ್ನು ನಿರ್ಮೂಲನೆ ಮಾಡಲು ಸಂಪೂರ್ಣ ಉಚಿತ ಚಿಕಿತ್ಸೆಗೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದರು.
ಈ ನಿಟ್ಟಿನಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿಯೂ ಹಲವು ವರ್ಷಗಳಿಂದ ಆರೋಗ್ಯ ಇಲಾಖೆ ಕೈಗೊಂಡ ಪರಿಣಾಮಕಾರಿ ಕ್ರಮಗಳ ಪರಿಣಾಮವಾಗಿ ಕ್ಷಯರೋಗ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಜಿಲ್ಲೆಯನ್ನು ಕ್ಷಯಮುಕ್ತ ಎಂದು ಘೋಷಿಸುವ ಗುರಿ ಸಾಧಿಸುವಲ್ಲಿ ಆರೋಗ್ಯ ಇಲಾಖೆಯೊಂದಿಗೆ ಸಾರ್ವಜನಿಕರ ಸಹಭಾಗಿತ್ವವೂ ಅತಿ ಮುಖ್ಯವಾಗಿ ಅಗತ್ಯವಿದೆ. ಆದ್ದರಿಂದ ಸಾರ್ವಜನಿಕರು ಈ ನೂರು ದಿನಗಳ ಅಭಿಯಾನಕ್ಕೆ ಹೆಚ್ಚಿನ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.6 ಲಕ್ಷ ಮಂದಿ ತಪಾಸಣೆ ಗುರಿ
ಒಂದು ವೇಳೆ ಯಾರಿಗಾದರೂ ರೋಗ ಪತ್ತೆಯಾದರೆ ಅವರಿಗೆ ಸರ್ಕಾರದಿಂದ ಸಿಗುವ ಸಂಪೂರ್ಣ ಉಚಿತ ಚಿಕಿತ್ಸೆ ಮತ್ತು ಪೌಷ್ಠಿಕ ಆಹಾರ ನೀಡುವ ಸೌಲಭ್ಯಗಳನ್ನು ತಲುಪಿಸಲು ಶ್ರಮಿಸುವ ಜೊತೆಗೆ ಚಿಕಿತ್ಸಾ ಅವಧಿ ಮುಗಿಯುವವರೆಗೂ ಅವರೊಂದಿಗೆ ನಿರಂತರ ಸಂಪರ್ಕದಲ್ಲಿರುತ್ತಾರೆ. ಅಲ್ಲದೇ, ಆ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಮಾರ್ಗಸೂಚಿಗಳಂತೆ ರೋಗಿಗಳಿಗೆ ಅಗತ್ಯ ಸಲಹೆ,ಸೂಚನೆ ಮತ್ತು ಮಾರ್ಗದರ್ಶನ ನೀಡಲಿದ್ದಾರೆ. ಇಂದು ಆರಂಭವಾಗಿರುವ 100 ದಿನಗಳ ಅಭಿಯಾನದಲ್ಲಿ ಜಿಲ್ಲೆಯಲ್ಲಿ ಗರಿಷ್ಠ 6 ಲಕ್ಷ ಜನರನ್ನು ತಪಾಸಣೆ ಮಾಡುವ ಗುರಿ ಹೊಂದಲಾಗಿದೆ ಎಂದರು.ಜಿಲ್ಲಾ ಉಸ್ತುವಾರಿ ಸಚಿವರ ನಿರ್ದೇಶನದಂತೆ ಜಿಲ್ಲಾ ಖನಿಜ ನಿಧಿಯಡಿ 60 ಲಕ್ಷ ರೂಪಾಯಿಗಳನ್ನು ಕ್ಷಯ ರೋಗಿಗಳ ಸಮತೋಲನ ಪೌಷ್ಟಿಕ ಆಹಾರಕ್ಕೆ ಮೀಸಲಿಡಲಾಗಿದೆ. ಎರಡು ವಾರಕ್ಕೂ ಹೆಚ್ಚು ಕೆಮ್ಮು ಇದ್ದಲ್ಲಿ ತಪಾಸಣೆಗೆ ಒಳಪಡುವುದು ಒಳ್ಳೆಯದು ಎಂದು ಇದೇ ವೇಳೆ ಜಿಲ್ಲಾಧಿಕಾರಿಗಳು ತಿಳಿಸಿದರು. ಈ ಸಂದರ್ಭದಲ್ಲಿ ಜಿಪಂ ಸಿಇಒ ಪ್ರಕಾಶ್ ಜಿ.ಟಿ. ನಿಟ್ಟಾಲಿ, ಅಪರ ಡೀಸಿ ಡಾ. ಎನ್. ಭಾಸ್ಕರ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಸ್.ಎಸ್.ಮಹೇಶ್ ಕುಮಾರ್, ಡಾ. ಮಂಜುಳಾದೇವಿ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ಚಂದ್ರಶೇಖರರೆಡ್ಡಿ, ಪಟ್ರೇನಹಳ್ಳಿ ಗ್ರಾಪಂ ಅಧ್ಯಕ್ಷೆ ಬೃಂದಾ, ಆರೋಗ್ಯ ಇಲಾಖೆಯ ಅಧಿಕಾರಿಗಳು, ತಾಲ್ಲೂಕು ವೈದ್ಯಾಧಿಕಾರಿಗಳು, ವೈದ್ಯರು, ಆಶಾ, ಅಂಗನವಾಡಿ ಕಾರ್ಯಕರ್ತೆಯರು ಇದ್ದರು.