ಸವಣೂರು: ಮನುಷ್ಯನ ಜೀವನ ಭಕ್ತಿಯೊಂದಿಗೆ ಮುಕ್ತಿ ಹೊಂದಲು ಹೊನ್ನಮ್ಮದೇವಿ ಸೇವೆಗೈಯುವುದು ಅವಶ್ಯವಾಗಿದೆ ಎಂದು ಹೂವಿನಶಿಗ್ಲಿ ವಿರಕ್ತಮಠದ ಚನ್ನವೀರ ಸ್ವಾಮೀಜಿ ತಿಳಿಸಿದರು.ತಾಲೂಕಿನ ನಂದಿಹಳ್ಳಿ ಗ್ರಾಮದ ಆದಿಶಕ್ತಿ ಹೊನ್ನಮ್ಮದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಬುಧವಾರ ಏರ್ಪಡಿಸಿದ್ದ ಸಾಂಸ್ಕೃತಿಕ ಉತ್ಸವ ಹಾಗೂ ಸ್ವಯಂಪ್ರೇರಿತ ರಕ್ತದಾನ ಶಿಬಿರ ಉದ್ಘಾಟಿಸಿ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಆಶಿರ್ವಚನ ನೀಡಿದರು.ದೇವಸ್ಥಾನಗಳು ಮನುಷ್ಯನನ್ನು ಮಹದೇವನಲ್ಲಿಗೆ ತೆಗೆದುಕೊಂಡು ಹೋಗುವ ಸಾಧನಗಳಾದರೆ ಜಾತ್ರೆ, ಹಬ್ಬ ಹರಿ ದಿನಗಳು ಮನಸ್ಸಿಗೆ ಶಾಂತಿಯನ್ನು ತಂದು ಕೊಡುತ್ತವೆ. ಮನುಷ್ಯನ ಜೀವನ ಸಾಧನೆ ಮಾಡಿ ಸಂಸ್ಕಾರವನ್ನು ಹೊಂದಿ ಸದ್ಗತಿ ಕಾಣುವಂತಹ ಪ್ರಯತ್ನವನ್ನು ಮಾಡಬೇಕು ಎಂದರು.
ಬೀರೇಶ್ವರ ಕ್ರೆಡಿಟ್ ಕೋ ಆಪ್ ಸೊಸೈಟಿ ಸಲಹಾ ಸಮಿತಿಗೆ ನೇಮಕ
ಗುತ್ತಲ: ಪಟ್ಟಣದ ಶ್ರೀ ಬೀರೇಶ್ವರ ಕ್ರೆಡಿಟ್ ಕೋ ಆಪ್ ಸೊಸೈಟಿ ಗುತ್ತಲ ಶಾಖೆಯ ನೂತನ ಸಲಹಾ ಸಮಿತಿ ಸದಸ್ಯರ ನೇಮಕದ ಆದೇಶ ಪ್ರತಿಯನ್ನು ಸೋಮವಾರ ನೀಡಿ ಸನ್ಮಾನಿಸಿ ಅಭಿನಂದಿಸಲಾಯಿತು.ಪ್ರತಿಷ್ಠಿತ ಜೊಲ್ಲೆ ಗ್ರೂಪ್ನ ಅಂಗ ಸಂಸ್ಥೆಯಾದ ಶ್ರೀ ಬೀರೇಶ್ವರ ಕ್ರೆಡಿಟ್ ಕೋ ಆಪ್ ಸೊಸೈಟಿ ಯಕ್ಸಂಬಾ ಇದರ ಗುತ್ತಲ ಶಾಖೆಯ ಸಂಸ್ಥಾಪಕ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಹಾಗೂ ಸಹ ಸಂಸ್ಥಾಪಕರಾದ ಮಾಜಿ ಸಚಿವೆ ಶಶಿಕಲಾ ಜೊಲ್ಲೆ ಅವರ ದಿಗ್ದರ್ಶಕ ಮಂಡಳಿ ಸಭೆಯಲ್ಲಿ ನೇಮಕವಾಗಿದ್ದು, ಸಹಕಾರಿ ರಂಗದಲ್ಲಿ ಉತ್ತಮ ಸಂಪರ್ಕ ಇರುವುದರಿಂದ ಶಾಖೆಗೆ ಸೂಕ್ತ ಸಲಹೆ ಸೂಚನೆ ನೀಡಿ ಶಾಖೆಯ ಅಭಿವೃದ್ಧಿಯಲ್ಲಿ ಸದಾ ಕೈಜೋಡಿಸಬೇಕು ಎಂದು ಗುತ್ತಲ ಶಾಖೆಯ ಮ್ಯಾನೇಜರ್ ಪಾಂಡುರಂಗ ಕೋಳಿ ತಿಳಿಸಿದರು.ನೂತನ ಸಲಹಾ ಸಮಿತಿ ಸಧಸ್ಯರಾದ ಸಂತೋಷ ಚಿಕ್ಕಮಠ, ನಾಗನಗೌಡ ನಾಗನಗೌಡ್ರ, ವಿಶ್ವನಾಥ ಮನ್ನಂಗಿ, ಚಂದ್ರಶೇಖರ ಬನ್ನಿಮಟ್ಟಿ, ಶೇಖಪ್ಪ ಸಪ್ಪಿನ, ಪ್ರಶಾಂತ ಕಡಾರಿ, ಮಂಜುನಾಥ ಯರವಿನತಲಿ ಅವರನ್ನು ಸನ್ಮಾನಿಸಲಾಯಿತು.ಇದೇ ಸಂದರ್ಭದಲ್ಲಿ ಬೀರೇಶ್ವರ ಸೊಸೈಟಿ ಗುತ್ತಲ ಶಾಖೆಯಲ್ಲಿ ಸಾಲಗಾರ ಮಹಿಳೆ ಫಾತೀಮಾ ಮಹ್ಮದಶಪಿ ಬಾಸೂರ ಹೃದಯಾಘಾತದಿಂದ ಮೃತಪಟ್ಟ ಹಿನ್ನೆಲೆ ಅವರ ಕುಟುಂಬದ ಮಹ್ಮದಶಪೀ ಬಾಸೂರ ಅವರಿಗೆ ₹30 ಸಾವಿರ ಮರಣೋತ್ತರ ನಿಧಿಯ ಚೆಕ್ನ್ನು ಸಲಹಾ ಸಮಿತಿ ಸದಸ್ಯರಿಂದ ನೀಡಲಾಯಿತು.
ಕಾರ್ಯಕ್ರಮದಲ್ಲಿ ಪ್ರಕಾಶ ಸೊಪ್ಪಿನ, ಎ.ಜಿ., ಮಾನಸ, ಬೀರೇಶ್ವರ ಸೊಸೈಟಿಯ ಸಿಬ್ಬಂದಿಗಳಾದ ರಾಮಕೃಷ್ಣ ವಾಳಕೆ, ವಿವೇಕ ಟಿ.ಎಚ್., ರೇಣುಕಸ್ವಾಮಿ ಗಣಾಚಾರಿ ಸೇರಿದಂತೆ ಅನೇಕರಿದ್ದರು.