ಸಮಾಜದ ಅಭಿವೃದ್ಧಿಗೋಸ್ಕರ ಸಮಾಜದ ವಿದ್ಯಾ ಸಂಸ್ಥೆಯೊಂದರ ಅಗತ್ಯತೆ ಇದೆ
ಭಟ್ಕಳ: ಶಿರಾಲಿಯ ಸಾರದಹೊಳೆಯ ಹಳೆಕೋಟೆ ಹನುಮಂತ ದೇವ ನಾಮಧಾರಿ ಅಭಿವೃದ್ಧಿ ಸಂಘದ ವಿದ್ಯಾ ವಿಕಾಸ ಯೋಜನೆಯಡಿಯಲ್ಲಿ ೨೦೨೫-೨೬ನೇ ಸಾಲಿನ ಪ್ರಥಮ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮವನ್ನು ದೇವಸ್ಥಾನದ ಮುಕ್ತೇಸರ ಸುಬ್ರಾಯ ಜೆ ನಾಯ್ಕ ಉದ್ಘಾಟಿಸಿದರು.ನಂತರ ಮಾತನಾಡಿದ ಅವರು, ವಿದ್ಯಾರ್ಥಿಗಳು ಪುಸ್ತಕದ ಸದುಪಯೋಗವನ್ನು ಪಡೆದುಕೊಳ್ಳುವುದರ ಜೊತೆಗೆ ತಮ್ಮನ್ನು ಪಡೆದಂತಹ ತಂದೆ- ತಾಯಿಯರಿಗೆ ಗೌರವನ್ನು ಸಲ್ಲಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ನಾಮಧಾರಿ ಅಭಿವೃದ್ಧಿ ಸಂಘದ ಅಧ್ಯಕ್ಷ ಆರ್.ಕೆ. ನಾಯ್ಕ ಮಾತನಾಡಿ, ಸಮಾಜದ ಅಭಿವೃದ್ಧಿಗೋಸ್ಕರ ಸಮಾಜದ ವಿದ್ಯಾ ಸಂಸ್ಥೆಯೊಂದರ ಅಗತ್ಯತೆ ಇದೆ ಎಂದರು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ವಿಶ್ರಾಂತ ನ್ಯಾಯಾಧೀಶರಾದ ರವಿ ಎಂ ನಾಯ್ಕ ಮಾತನಾಡಿ, ವಿದ್ಯಾರ್ಥಿಗಳು ಕೇವಲ ಪುಸ್ತಕದ ಹುಳುಗಳಾಗದೆ ತಮ್ಮ ಸುತ್ತಮುತ್ತಲಿನ ಪರಿಸರ ಹಾಗೂ ಅನುಭವಾತ್ಮಕ ಕಲಿಕೆಗೆ ಹೆಚ್ಚಿನ ಒತ್ತು ನೀಡಬೇಕೆಂದರು. ಸಂಪನ್ಮೂಲ ವ್ಯಕ್ತಿಯಾದ ಹೈಕೋರ್ಟಿನ ನ್ಯಾಯವಾದಿ ನಾಗೇಂದ್ರ ನಾಯ್ಕ ಮಾತನಾಡಿ, ಸಮಾಜದ ಅಭಿವೃದ್ಧಿಗೋಸ್ಕರ ಸಂಸ್ಥೆಯೊಂದನ್ನು ಸ್ಥಾಪಿಸುವುದು ಅತ್ಯಂತ ತುರ್ತಾಗಿ ಆಗಬೇಕಾದ ಕಾರ್ಯವಾಗಿದೆ. ಈ ನಿಟ್ಟಿನಲ್ಲಿ ಸಮಾಜದ ಮುಂಚೂಣಿಯಲ್ಲಿರುವ ವ್ಯಕ್ತಿಗಳು ಚಿಂತಿಸಬೇಕಾದ ಕಾಲ ಒದಗಿ ಬಂದಿದೆ ಎಂದು ಮಾರ್ಮಿಕವಾಗಿ ನುಡಿದರು.
ಮುಖ್ಯ ಅತಿಥಿಗಳಾದ ಮಾಜಿ ಶಾಸಕ ಜೆ.ಡಿ. ನಾಯ್ಕ, ನಿವೃತ್ತ ಬ್ಯಾಂಕ್ ವ್ಯವಸ್ಥಾಪಕ ಎಸ್.ಎಂ. ನಾಯ್ಕ ಮಾತನಾಡಿದರು. ನಿಚ್ಚಲಮಕ್ಕಿ ಗುರುಮಠದ ಅಧ್ಯಕ್ಷ ಅರುಣ್ ನಾಯ್ಕ, ಮಾವಳ್ಳಿ ಹೋಬಳಿ ನಾಮಧಾರಿ ಸಮಾಜದ ಉಪಾಧ್ಯಕ್ಷ ನಾಗೇಂದ್ರ ಡಿ ನಾಯ್ಕ, ಸಮಾಜದ ಪ್ರಮುಖರಾದ ವೆಂಕಟೇಶ್ ಎನ್ ನಾಯ್ಕ ಅಂಗಡಿ ಮನೆ, ಕೃಷ್ಣ ನಾಯ್ಕ ಇದ್ದರು. ಹಳೆಕೋಟೆ ಹನುಮಂತ ದೇವಸ್ಥಾನದ ಕಾರ್ಯದರ್ಶಿ ವಾಸುದೇವ ನಾಯ್ಕ ಅವರು ಸ್ವಾಗತಿಸಿ ಅಭಿನಂದಿಸಿದರು. ಶಿಕ್ಷಕ ಪರಮೇಶ್ವರ್ ನಾಯ್ಕ ನಿರೂಪಿಸಿದರು.
ಶಿರಾಲಿಯ ಸಾರದಹೊಳೆಯ ಹಳೇಕೋಟೆ ಹನುಮಂತ ದೇವಸ್ಥಾನದಲ್ಲಿ ಪಿಯುಸಿ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣಾ ಸಮಾರಂಭ ನಡೆಯಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.