ರಾಮನಗರ: ಸೌರವಿದ್ಯುತ್ ಬಳಕೆಯನ್ನು ಉತ್ತೇಜಿಸಲು ಕೇಂದ್ರ ಸರ್ಕಾರ ಪಿಎಂ ಸೂರ್ಯಘರ್ ಯೋಜನೆಯನ್ನು ಅನುಷ್ಠಾನ ಮಾಡಿದ್ದು, ಜನರು ಸದುಪಯೋಗ ಪಡಿಸಿಕೊಳ್ಳುವ ಮೂಲಕ ವಿದ್ಯುತ್ ಉತ್ಪಾದನೆಯ ಮೇಲಿನ ಅವಲವಂಬನೆ ತಗ್ಗಿಸುವಂತೆ ಸಾಕ್ರೆಡ್ ಸಂಸ್ಥೆ ಕಾರ್ಯದರ್ಶಿ ಫಿಲೋಮಿನಾ ಹೇಳಿದರು.
ಭಾರತ ಅತಿ ಹೆಚ್ಚು ಇಂಧನ(ವಿದ್ಯುತ್) ಬಳಸುವ ರಾಷ್ಟ್ರವಾಗಿದ್ದು, ಸೌರಶಕ್ತಿಯ ಬಳಕೆಯಲ್ಲಿ 5ನೇ ಸ್ಥಾನದಲ್ಲಿದೆ. ಕಳೆದ 9 ವರ್ಷದಲ್ಲಿ ದೇಶದಲ್ಲಿ ಸೌರ ಇಂಧನ ಸಾಮರ್ಥ್ಯ 30 ಪಟ್ಟು ಹೆಚ್ಚಾಗಿದೆ. 2024ರ ಮಾರ್ಚ್ವರೆಗಿನ ಅಂಕಿ ಅಂಶಗಳ ಪ್ರಕಾರ 81.81 ಗಿಗಾ ವ್ಯಾಟ್ ಸೌರ ವಿದ್ಯುತ್ ದೇಶದಲ್ಲಿ ಉತ್ಪಾದನೆ ಆಗುತ್ತಿದೆ. ಕರ್ನಾಟಕದಲ್ಲೂ ಈ ಯೋಜನೆ ಅನುಷ್ಠಾನಗೊಂಡಿದೆ. ಜನರು ಸೆಕ್ರೆಡ್ ಸಂಸ್ಥೆಯಲ್ಲಿ ಹೆಚ್ಚಿನ ಮಾಹಿತಿ ಪಡೆದು ಈ ಯೋಜನೆಯ ಸದುಪಯೋಗ ಪಡೆಯಬಹುದು ಎಂದು ಫಿಲೋಮಿನಾ ಹೇಳಿದರು.
ಡಿಜಿಪ್ಲಿಕ್ನ ನಿರ್ದೇಶಕಿ ಸಿ.ಎಸ್.ಕಮಲ್ ಮಾತನಾಡಿ, ಕಂಪನಿ ವತಿಯಿಂದ ಸಾಮಾನ್ಯ ಜನರಿಗೂ ಯೋಜನೆ ತಲುಪಬೇಕು. ಸಾಮಾನ್ಯ ದಾಖಲೆಗಳಡಿ ಮನೆ. ವಿದ್ಯುತ್ ಬಿಲ್, ಬ್ಯಾಂಕ್ ಖಾತೆ ಹಾಗೂ ಆಧಾರ್ಕಾರ್ಡ್ ಇದ್ದರೆ ಸಾಕು ಸುಲಭವಾಗಿ ಯೋಜನೆಯ ಲಾಭ ಪಡೆಯಬಹುದು. ಇದಕ್ಕೆ ಸಾಲದ ಜೊತೆಗೆ ಸಬ್ಸಿಡಿ ಸಹ ಸಿಗಲಿದೆ. ಸೌರಫಲಕಗಳ ಅಳವಡಿಕೆಗೆ ತಗಲುವ ವೆಚ್ಚದ ಮೇಲೆ ಶೇ.60ವರೆಗೂ ಸಬ್ಸಿಡಿ ನೀಡಲಾಗುತ್ತದೆ. 1ರಿಂದ 3 ಕಿಲೋ ವ್ಯಾಟ್ವರೆಗಿನ ಸೌರ ವಿದ್ಯುತ್ ಘಟಕದ ಅಳವಡಿಕೆಗೆ ಸರ್ಕಾರ ಧನ ಸಹಾಯ ನೀಡಲಿದೆ. ಇದರಿಂದ ಯುವಕರಲ್ಲಿ ಅರಿವು ಮೂಡಿಸುವ ಜೊತೆಗೆ ಮುಂದಿನ ಪೀಳಿಗೆಗೂ ಕೊಡುಗೆ ನೀಡಲಿದೆ ಎಂದು ಮಾಹಿತಿ ನೀಡಿದರು.ರಾಜ್ಯ ನಿರ್ದೇಶಕ ಮೂರ್ತಿ ಮಾತನಾಡಿ, ಹೆಚ್ಚಿನ ಪ್ರಮಾಣದಲ್ಲಿ ಈ ಯೋಜನೆಯನ್ನು ಜಾರಿಗೊಳಿಸುವುದರಿಂದ ಇಂಗಾಲದ ಹೊರಸೂಸುವಿಕೆ ಗಣನೀಯ ಪ್ರಮಾಣದಲ್ಲಿ ಇಳಿಕೆ ಆಗಲಿದ್ದು, ವಾಯು ಮಾಲಿನ್ಯ ಪ್ರಮಾಣವೂ ತಗ್ಗಲಿದೆ. ಸೌರ ಘಟಕದ ಸ್ಥಾಪನೆಗಾಗಿ ಕುಟುಂಬಗಳು ಪ್ರತಿಶತ ಶೇ.7ರಷ್ಟು ಬಡ್ಡಿಯೊಂದಿಗೆ ಮೇಲಾಧಾರ ರಹಿತ ಸಾಲದ ಉತ್ಪನ್ನಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಗ್ರಾಮೀಣ ಪ್ರದೇಶದಲ್ಲಿ ಜನರು ತಮ್ಮ ಮನೆಯ ಮೇಲೆ ಸೌರ ಫಲಕಗಳನ್ನು ಅಳವಡಿಸುವುದನ್ನು ಪ್ರೇರೇಪಿಸಲು ಸರ್ಕಾರ ಪ್ರತಿ ಜಿಲ್ಲೆಗೆ ಒಂದು ಮಾದರಿ ಸೌರ ಗ್ರಾಮ ನಿರ್ಮಾಣ ಮಾಡಲು ಮುಂದಾಗಿದೆ. ಜನರು ಹೂಡಿಕೆ ಮಾಡಿದ ಬಂಡವಾಳ ೫ ವರ್ಷದಲ್ಲಿ ಮರಳಲಿದ್ದು, ೨೦ ವರ್ಷಗಳವರೆಗೆ ಉಚಿತ ವಿದ್ಯುತ್ ಪಡೆಯಬಹುದಾಗಿದೆ ಎಂದರು.
ಕಾರ್ಯಾಗಾರದಲ್ಲಿ ಬೆಸ್ಕಾ ಎಇ ಪ್ರಭಾಕರ್, ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಸಾಕ್ರೆಡ್ ಸ್ವಯಂ ಸಂಸ್ಥೆಯ ಸಿಬ್ಬಂದಿ ಭಾಗವಹಿಸಿದ್ದರು.13ಕೆಆರ್ ಎಂಎನ್ 1.ಜೆಪಿಜಿ
ರಾಮನಗರದ ಚೈತನ್ಯ ಭವನದಲ್ಲಿ ಶುಕ್ರವಾರ ಡಿಜಿಪ್ಲಿಕ್ ಕಂಪನಿ ಮತ್ತು ಸಾಕ್ರೆಡ್ ಸ್ವಯಂ ಸೇವಾ ಸಂಸ್ಥೆಯಿಂದ ಪಿಎಂ ಸೂರ್ಯಘರ್ ಓರಿಯಂಟೇಷನ್ ಕಾರ್ಯಾಗಾರ ನಡೆಯಿತು.