-ಡಾ. ದಾಕ್ಷಾಯಿಣಿ ಅವ್ವಾಜಿ ಮಾಹಿತಿ । ಮಹಾಮಾನವ ಕೃತಿ ಬಿಡುಗಡೆ
ಕನ್ನಡಪ್ರಭ ವಾರ್ತೆ ಕಲಬುರಗಿ ಶ್ರಾವಣ ಮಾಸದ ಅಂಗವಾಗಿ ಶರಣಬಸವೇಶ್ವರ ದೇವಸ್ಥಾನ ಆವರಣದಲ್ಲಿ ಪ್ರತಿವರ್ಷ ನಡೆವ 40 ದಿನಗಳ ವಾರ್ಷಿಕ ಉತ್ಸವ ಬುಧವಾರ ಆರಂಭವಾಗಲಿದೆ. ಉತ್ಸವದ ಅಂಗವಾಗಿ ಸಾಮಾಜಿಕ ಹಾಗೂ ಧಾರ್ಮಿಕ ವಿಷಯಗಳ ಕುರಿತು ಪ್ರವಚನಗಳು, ವಿಶೇಷ ಉಪನ್ಯಾಸಗಳು ಸೇರಿದಂತೆ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಭಕ್ತರು ಶ್ರಾವಣ ಮಾಸದ 30 ದಿನಗಳ ಕಾಲ ನಡೆವ ಧಾರ್ಮಿಕ ಪ್ರವಚನಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶರಣಬಸವ ಕುಲಾಧಿಪತಿ ಡಾ. ದಾಕ್ಷಾಯಿಣಿ ಅವ್ವಾಜಿ ಎಂದು ಭಕ್ತರಲ್ಲಿ ಮನವಿ ಮಾಡಿದ್ದಾರೆ.ಶರಣಬಸವೇಶ್ವರ ಸಂಸ್ಥಾನದ 8ನೇ ಮಹಾದಾಸೋಹ ಪೀಠಾಧಿಪತಿ ಡಾ. ಶರಣಬಸವಪ್ಪ ಅಪ್ಪಾಜಿ, ಪ್ರಥಮ ಪುಣ್ಯತಿಥಿ ಹಾಗೂ ಸಂಸ್ಥಾನದ 7ನೇ ಮಹಾದಾಸೋಹ ಪೀಠಾಧಿಪತಿ ದೊಡ್ಡಪ್ಪ ಅಪ್ಪಾಜಿ ಅವರ 43ನೇ ಪುಣ್ಯತಿಥಿ ಅಂಗವಾಗಿ 40 ದಿನಗಳ ಕಾಲ ವಿಶೇಷ ಉಪನ್ಯಾಸ ಆಯೋಜಿಸಲಾಗಿದೆ.
ಶರಣಬಸವೇಶ್ವರರ ಜೀವನ ಮತ್ತು ಸಾಧನೆ ಕುರಿತು ಜಿಲ್ಲೆಯ ಸುಂಟನೂರಿನ ಧಾರ್ಮಿಕ ಪ್ರವಚನಕಾರ ಬಂಡಯ್ಯ ಶಾಸ್ತ್ರಿಗಳು ಅಖಿಲ ಭಾರತ ಶಿವಾನುಭವ ಮಂಟಪದಲ್ಲಿ ಶ್ರಾವಣ ಮಾಸದ 30 ದಿನಗಳ ಕಾಲ ಪ್ರತಿದಿನ ಒಂದು ಗಂಟೆ ಪ್ರವಚನ ನೀಡಲಿದ್ದಾರೆ ಎಂದು ಡಾ. ಅವ್ವಾಜಿ ಹೇಳಿದ್ದಾರೆ.
ಪ್ರತಿ ಸೋಮವಾರ ಶರಣಬಸವೇಶ್ವರರ ವಿಶೇಷ ಪಲ್ಲಕ್ಕಿ ಉತ್ಸವದಲ್ಲಿ ಸಾನಿಧ್ಯ ವಹಿಸುವರು. ದಿನಂಪ್ರತಿ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ, ಜಾಗತಿಕ ಲಿಂಗಾಯತ ಮಹಾಸಭಾ ಮಹಿಳಾ ಮಂಡಳದಿಂದ ವಚನಾಂಜಲಿ ನಡೆಯಲಿದೆ.
ಹಿಂದೂ ಪಂಚಾಂಗದ ಪ್ರಕಾರ ಡಾ. ಅಪ್ಪಾಜಿ ಅವರ ಪ್ರಥಮ ಪುಣ್ಯತಿಥಿಯು ಸೆ.2 ರಂದು ನಡೆಯಲಿದ್ದು, ಅಂದು ವಿವಿಧ ಧಾರ್ಮಿಕ ಮಠಗಳ ಪೀಠಾಧಿಪತಿಗಳು ಭಾಗವಹಿಸುವ ಬೃಹತ್ ಕಾರ್ಯಕ್ರಮವನ್ನು ಆಯೋಜಿಸಲಾಗುವುದು ಎಂದರು.