ನಿತ್ಯ ಪುಸ್ತಕ ಓದುವುದನ್ನು ರೂಢಿಸಿಕೊಳ್ಳಿ: ಅನಂತಮೂರ್ತಿ ಹೆಗಡೆ

KannadaprabhaNewsNetwork | Published : Dec 15, 2024 2:03 AM

ಮಕ್ಕಳು ಮೊಬೈಲ್ ಮೋಹದಿಂದ ಇಂದು ಪುಸ್ತಕ ಹಿಡಿಯುತ್ತಿಲ್ಲ. ಮಕ್ಕಳಿಗೆ ಓದುವದನ್ನು ಕಲಿಸಬೇಕು. ರಾತ್ರಿ ಮಲಗುವ ಮುನ್ನ ೧ ತಾಸಾದರೂ ಓದುವುದನ್ನು ರೂಢಿಸಿಕೊಳ್ಳಬೇಕು ಎಂದು ಹೋರಾಟಗಾರ ಅನಂತಮೂರ್ತಿ ಹೆಗಡೆ ಹೇಳಿದರು.

ಶಿರಸಿ: ನಿತ್ಯ ಒಂದು ಗಂಟೆಯಾದರೂ ಪುಸ್ತಕ ಓದುವುದನ್ನು ರೂಢಿಸಿಕೊಳ್ಳಬೇಕು. ಸಾಹಿತ್ಯ ಓದಿನ ಆಸಕ್ತಿ ಜತೆಗೆ ಓದುಗನಿಗೆ ಸೃಜನಶೀಲತೆ ಬೆಳೆಯುತ್ತದೆ ಎಂದು ಹೋರಾಟಗಾರ ಅನಂತಮೂರ್ತಿ ಹೆಗಡೆ ಹೇಳಿದರು.

ನಗರದ ರಂಗಧಾಮದಲ್ಲಿ ಮಾಸ್ಕೇರಿ ಸಾಹಿತ್ಯಾರಾಧಾನಾ ಸಂಸ್ಥೆ, ಸಾಹಿತ್ಯ ಸಂಚಲನ ಸಂಯುಕ್ತ ಆಶ್ರಯದಲ್ಲಿ ಶನಿವಾರ ನಡೆದ ಸರಳ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳು ಮೊಬೈಲ್ ಮೋಹದಿಂದ ಇಂದು ಪುಸ್ತಕ ಹಿಡಿಯುತ್ತಿಲ್ಲ. ಮಕ್ಕಳಿಗೆ ಓದುವದನ್ನು ಕಲಿಸಬೇಕು. ರಾತ್ರಿ ಮಲಗುವ ಮುನ್ನ ೧ ತಾಸಾದರೂ ಓದುವುದನ್ನು ರೂಢಿಸಿಕೊಳ್ಳಬೇಕು. ಸಾಹಿತ್ಯ, ಸಂಗೀತ, ಕಲೆಯ ಮೇಲೆ ಆಸಕ್ತಿ ಇರದಿರುವುದು ಪಶುವಿಗೆ ಸಮಾನ. ಇದನ್ನು ಸುಭಾಷಿತ ಕೂಡ ಹೇಳಿದೆ ಎಂದು ಹೇಳಿದರು.

ಭಾರತ ಮಾತೆಯ ಮಗಳು ಭುವನೇಶ್ವರಿ. ಅದರ ನಾಡು ಇದು. ಕದಂಬರ ನಾಡಿನಲ್ಲಿ ಸರಳ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ. ಎಡಪಂಕ್ತಿಯ ಕವಿಗಳಿಗೆ ಬೈದರೆ, ಹಿಂದೂ ದೇವತೆ ಬೈದರೆ, ಗೋಮಾಂಸ ತಿಂದರೆ ಪ್ರಶಸ್ತಿ ಸಿಗುವ ಕಾಲದಲ್ಲಿದ್ದೇವೆ. ಹಿಂದೂ ದೇವರನ್ನು, ಹಿಂದೂಗಳನ್ನು ದೂಷಿಸಿದರೆ ಸರ್ಕಾರದ ಪ್ರಶಸ್ತಿ ಸಿಗುತ್ತದೆ ಎಂದರು.

ಸರ್ವಾಧ್ಯಕ್ಷತೆವಹಿಸಿದ್ದ ಕವಿ ವನರಾಗ ಶರ್ಮಾ, ಸಾಹಿತ್ಯ ಬದುಕನ್ನು ಕಟ್ಟಿಕೊಡುತ್ತದೆ ಎಂದರು.

ಮಾಸ್ಕೇರಿ ಎಂ.ಕೆ. ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಸ್ಕೋಡ್‌ವೆಸ್ ಕಾರ್ಯನಿರ್ವಾಹಕ ನಿರ್ದೇಶಕ ಡಾ. ವೆಂಕಟೇಶ ನಾಯ್ಕ, ಸಾಹಿತ್ಯ ಸಂಚಲನದ ಅಧ್ಯಕ್ಷ ಕೃಷ್ಣ ಪದಕಿ, ಸಾಹಿತಿ ಮಹೇಶಕುಮಾರ ಹನಕೆರೆ, ಕವಯತ್ರಿ ದಾಕ್ಷಾಯಿಣಿ ಪಿ.ಸಿ. ಇದ್ದರು.

ರಾಜಲಕ್ಷ್ಮೀ ಭಟ್ಟ ಪ್ರಾರ್ಥಿಸಿದರು. ರೋಹಿಣಿ ಹೆಗಡೆ ಕಾರ್ಯಕ್ರಮ ನಿರ್ವಹಿಸಿದರು. ಪ್ರತಿಭಾ ನಾಯ್ಕ ಪರಿಚಯಿಸಿದರು. ಇದೇ ವೇಳೆ ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ಡಿ.ಎಂ. ಭಟ್ಟ, ವನರಾಗ ಶರ್ಮಾ, ಫಾಲ್ಗುಣ ಗೌಡ, ರಾಮು ಭಟಕಳ, ಕಾವ್ಯಾ ಭಟ್ಟ ದಾಂಡೇಲಿ, ಮಂಜುನಾಥ ನಾಯ್ಕ ಅವರನ್ನು ಗೌರವಿಸಲಾಯಿತು. ವಿವಿಧ ಕ್ಷೇತ್ರದ ಸೇವಾ ಕಾರ್ಯಕರ್ತರನ್ನು ಅಭಿನಂದಿಸಲಾಯಿತು. ಬಳಿಕ ಕವಿಗೋಷ್ಠಿ ನಡೆಯಿತು.