ಜನ ಜಾನುವಾರುಗಳಿಗೆ ನೀರಿನ ತೊಂದರೆಯಾಗದಂತೆ ನೋಡಿಕೊಳ್ಳಿ

KannadaprabhaNewsNetwork | Published : Mar 3, 2024 1:33 AM

ಜಿಲ್ಲೆಯನ್ನು ಮೊದಲ ಹಂತದಲ್ಲೆ ಬರ ಪೀಡಿತ ಪ್ರದೇಶ ಎಂದು ಸರ್ಕಾರ ಘೋಷಣೆ ಮಾಡಿದ್ದು, ಜನ ಜಾನುವಾರುಗಳಿಗೆ ಕುಡಿಯುವ ನೀರಿನ ತೊಂದರೆಯಾಗದಂತೆ ನೋಡಿಕೊಳ್ಳಲು ಶಾಸಕರು ಮತ್ತು ಎಂಎಸ್ಐಎಲ್ ಅಧ್ಯಕ್ಷ ಸಿ.ಪುಟ್ಟರಂಗಶೆಟ್ಟಿ ಅಧಿಕಾರಿಗಳಿಗೆ ಸೂಚಿಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಜಿಲ್ಲೆಯನ್ನು ಮೊದಲ ಹಂತದಲ್ಲೆ ಬರ ಪೀಡಿತ ಪ್ರದೇಶ ಎಂದು ಸರ್ಕಾರ ಘೋಷಣೆ ಮಾಡಿದ್ದು, ಜನ ಜಾನುವಾರುಗಳಿಗೆ ಕುಡಿಯುವ ನೀರಿನ ತೊಂದರೆಯಾಗದಂತೆ ನೋಡಿಕೊಳ್ಳಲು ಶಾಸಕರು ಮತ್ತು ಎಂಎಸ್ಐಎಲ್ ಅಧ್ಯಕ್ಷ ಸಿ.ಪುಟ್ಟರಂಗಶೆಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ತಾಲೂಕಿನ ಹಿತ್ತಲಗುಡ್ಡ ಗ್ರಾಮದಲ್ಲಿ ಏರ್ಪಡಿಸಿದ್ದ ಹೆಬ್ಬಸೂರು ಗ್ರಾಪಂ ವ್ಯಾಪ್ತಿಯ ಫಲಾನುಭವಿಗಳಿಗೆ ಮನೆ ಮಂಜೂರಾತಿ ಮತ್ತು ಕಾಮಗಾರಿ ಆದೇಶ ಪತ್ರ ವಿತರಿಸಿ ಮಾತನಾಡಿದರು. ಈಗಾಗಲೇ ಕುಡಿಯುವ ನೀರಿಗಾಗಿ 7 ಕೋಟಿ ಹಣ ಜಿಲ್ಲಾಧಿಕಾರಿ ಖಾತೆಯಲ್ಲಿ ಇರಿಸಲಾಗಿದೆ. ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಲು ಮಾರ್ಚ್ ನಂತರ 1ಕೋಟಿ ಹಣ ಬಿಡುಗಡೆಯಾಗುತ್ತದೆ ಮತ್ತು ಪರಿಶಿಷ್ಟ ಜಾತಿ ಮತ್ತು ಪಂಗಡವರಿಗೆ ವಿವಿಧ ಸಾಲ ಸೌಲಭ್ಯ ನೀಡಲು 1367 ಅರ್ಜಿ ಬಂದಿದ್ದು 40 ಮಂದಿ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ ಎಂದರು. ಕಳೆದ ಐದು ವರ್ಷಗಳ ಅವಧಿಯಲ್ಲಿ ಬಿಜೆಪಿ ಸರ್ಕಾರ ಇದ್ದು ನನಗೆ ಅನುದಾನ ಕೊಡಲಿಲ್ಲ ತಮ್ಮ ಪಕ್ಷದ ಶಾಸಕರಿರುವ ಕಡೆಗೆ ಹಣ ಬಿಡುಗಡೆ ಮಾಡಿದರು ಇದರಿಂದ ಅಭಿವೃದ್ಧಿ ಕುಂಠಿತವಾಯಿತು. ಬಿಜೆಪಿ ಸರ್ಕಾರ ಒಂದು ಮನೆಯನ್ನು ಬಿಡುಗಡೆ ಮಾಡಲ್ಲಿಲ್ಲ ಎಂದು ಆರೋಪಿಸಿದರು. ಹೆಬ್ಬಸೂರು ಗ್ರಾಪಂಯಲ್ಲಿ ಅಂಬೇಡ್ಕರ್ ನಿವಾಸ್ ಯೋಜನೆಯಡಿ 31 ಬಸವ ವಸತಿ ಯೋಜನೆಯಡಿಯಲ್ಲಿ 13 ,ಒಟ್ಟು 44 ಮಂದಿಗೆ ಮಂಜೂರಾತಿ ಪತ್ರ ವಿತರಿಸಲಾಗಿದೆ. ಬುಡಕಟ್ಟು ಸಮುದಾಯದ ಜನರು ನಮ್ಮಿಂದ ಮನೆ ಕಟ್ಟಿಕೊಳ್ಳಲು ಆಗುತ್ತಿಲ್ಲ ನೀವೆ ನಿರ್ಮಿಸಿಕೊಡಿ ಎನ್ನುವ ಮನವಿಮಾಡಿದ್ದಾರೆ ಲ್ಯಾಂಡ್ ಆರ್ಮಿ ಅಥವಾ ನಿರ್ಮಿತಿ ಕೇಂದ್ರದವರಿಗೆ ವಹಿಸುವ ಚಿಂತನೆ ಇದೆ. ಸರ್ಕಾರದ 5 ಗ್ಯಾರಂಟಿಗಳು ಸಮರ್ಪಕವಾಗಿ ಜನರನ್ನು ತಲುಪುತ್ತಿದೆ ಇದರಿಂದ ಜನರಿಗೆ ಅನುಕೂಲವಾಗಿದೆ. ಗೃಹಲಕ್ಷ್ಮೀ ಬಾರದೆ ಇರುವವರಿದ್ದರೆ ಗ್ರಾಪಂ ಅಥವಾ ಸಿಡಿಪಿಒ ಕಚೇರಿಯಲ್ಲಿ ಸಮಸ್ಯೆ ಬಗೆಹರಿಸಿಕೊಳ್ಳಬಹುದು. ಚಂದಕವಾಡಿ ಮಾರ್ಗ ದಡದಹಳ್ಳಿ ರಸ್ತೆ ಅಭಿವೃದ್ಧಿಗೆ ಟೆಂಡರ್ ಆಗಿದ್ದು ಶೀರ್ಘದಲ್ಲೆ ಕಾಮಗಾರಿ ಆರಂಭಿಸಲಾಗುವುದು ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷೆ ಪದ್ಮನಂಜುಂಡಸ್ವಾಮಿ, ಉಪಾಧ್ಯಕ್ಷ ಕುಮಾರ್‌‌, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಂಜಿತಾ, ಸದಸ್ಯರಾದ ಮಧು, ಸಾಧೀಕ್ ಉಲ್ಲಾ, ಮಹದೇವಸ್ವಾಮಿ, ಪಿ.ಮೂರ್ತಿ, ಜಯಶಂಕರ್, ಆಶಾ, ಮಂಜುಳ, ರಶ್ಮಿ ಶಿವಣ್ಣ, ವಸಂತ,ಭಾಗ್ಯಮ್ಮ, ರಂಗಸ್ವಾಮಿ, ವೀರಭದ್ರ ಸ್ವಾಮಿ, ಮೂಕ್ತಮ್, ಉಮೇಶ್, ಗಿರಿಜನರ ಸಂಘದ ತಾಲ್ಲೂಕು ಅಧ್ಯಕ್ಷ ಶಿವಣ್ಣ, ಗೋವಿಂದರಾಜು, ನಂದೀಶ, ಗ್ರಾಮ ಲೆಕ್ಕಾಧಿಕಾರಿ ಯಲ್ಲಪ್ಪ ಲಮಾಣಿ ಇತರರು ಇದ್ದರು.