ಡಿಜಿಟಲ್‌ ಇಂಡಿಯಾ ಕನಸು ನನಸಾಗಿಸಿ

KannadaprabhaNewsNetwork |  
Published : Nov 21, 2025, 02:00 AM IST
20ಡಿಡಬ್ಲೂಡಿ4ಭಾರತೀಯ ಸ್ಟೇಟ್ ಬ್ಯಾಂಕನ ಮುಖ್ಯ ಶಾಖೆಯಲ್ಲಿ ನಿವೃತ್ತಿದಾರರಿಗೆ ಕೇಂದ್ರ ಸರ್ಕಾರ ಒದಗಿಸಿರುವ ನೂತನ ಡಿಜಿಟಲ್ ಲೈಫ್ ಸರ್ಟಿಫಿಕೇಟ್ ಕುರಿತ ಜಾಗೃತಿ ಕಾರ್ಯಕ್ರಮವನ್ನು ಗುರುವಾರ ಉದ್ಘಾಟಿಸಿ ದೀಪಕ ಗುಪ್ತ ಮಾತನಾಡಿದರು.  | Kannada Prabha

ಸಾರಾಂಶ

ಕೇಂದ್ರ, ರಾಜ್ಯ ಅಥವಾ ಯಾವುದೇ ಸರ್ಕಾರಿ ಸಂಸ್ಥೆಯ ಪಿಂಚಣಿದಾರರು ತಮ್ಮ ಪಿಂಚಣಿಯನ್ನು ಪಡೆಯುವುದನ್ನು ಮುಂದುವರಿಸಲು ಈ ಡಿಜಿಟಲ್‌ ಲೈಫ್‌ ಸರ್ಟಿಫಿಕೇಟ್‌ ಬಳಸಬೇಕು.

ಧಾರವಾಡ:

ಪ್ರತಿಯೊಬ್ಬರು ತಮ್ಮ ನಿತ್ಯದ ವ್ಯವಹಾರದಲ್ಲಿ ಡಿಜಿಟಲ್ ಇಂಡಿಯಾ ತೊಡಗಿಸಿಕೊಂಡಾಗ ಮಾತ್ರ ನರೇಂದ್ರ ಮೋದಿ ಅವರ ಡಿಜಿಟಲ್‌ ಇಂಡಿಯಾ ಕನಸು ನನಸಾಗಲಿದೆ ಎಂದು ಕೇಂದ್ರ ಸರ್ಕಾರದ ಪಿಂಚಣಿ ಇಲಾಖೆಯ ಅಧೀನ ಕಾರ್ಯದರ್ಶಿ ದೀಪಕ ಗುಪ್ತ ಹೇಳಿದರು.

ಇಲ್ಲಿಯ ಭಾರತೀಯ ಸ್ಟೇಟ್ ಬ್ಯಾಂಕ್‌ನ ಮುಖ್ಯ ಶಾಖೆಯಲ್ಲಿ ನಿವೃತ್ತಿದಾರರಿಗೆ ಕೇಂದ್ರ ಸರ್ಕಾರ ಒದಗಿಸಿರುವ ನೂತನ ಡಿಜಿಟಲ್ ಲೈಫ್ ಸರ್ಟಿಫಿಕೇಟ್ ಕುರಿತ ಜಾಗೃತಿ ಕಾರ್ಯಕ್ರಮವನ್ನು ಗುರುವಾರ ಉದ್ಘಾಟಿಸಿದ ಅವರು, ಕೇಂದ್ರ, ರಾಜ್ಯ ಅಥವಾ ಯಾವುದೇ ಸರ್ಕಾರಿ ಸಂಸ್ಥೆಯ ಪಿಂಚಣಿದಾರರು ತಮ್ಮ ಪಿಂಚಣಿಯನ್ನು ಪಡೆಯುವುದನ್ನು ಮುಂದುವರಿಸಲು ಈ ಡಿಜಿಟಲ್‌ ಲೈಫ್‌ ಸರ್ಟಿಫಿಕೇಟ್‌ ಬಳಸಬೇಕು. ಇದನ್ನು ಪಡೆಯಲು, ಆಧಾರ್ ಸಂಖ್ಯೆ ಮತ್ತು ಪಿಂಚಣಿ ವಿವರಗಳನ್ನು ಬ್ಯಾಂಕ್‌, ಅಂಚೆ ಕಚೇರಿ, ಅಥವಾ ಆನ್‌ಲೈನ್ ಪೋರ್ಟಲ್‌ಗಳಲ್ಲಿ ನೀಡಬಹುದು ಎಂದರು.

ಪ್ರಸ್ತುತ ನಾವು ಯಾವ ಸ್ಥಳದಲ್ಲಾದರೂ ಕುಳಿತುಕೊಂಡು ರೈಲ್ವೆ ಟಿಕೆಟ್ ಬುಕ್ ಮಾಡುತ್ತೇವೆ, ಹಣ ವರ್ಗಾವಣೆ ಮಾಡುತ್ತೇವೆ ಹಾಗೂ ಇತರೆ ಆನ್‌ಲೈನ್ ವ್ಯವಹಾರಗಳನ್ನು ಕ್ಷಣಮಾತ್ರದಲ್ಲಿ ಮಾಡುತ್ತಿದ್ದೇವೆ. ಅದೇ ರೀತಿ ಕೇಂದ್ರ ಸರ್ಕಾರವು ಡಿಜಿಟಲ್ ಲೈಫ್ ಸರ್ಟಿಫಿಕೇಟ್‌ನ್ನು ಸಲ್ಲಿಸಬಹುದಾದ ಅವಕಾಶವನ್ನು ಸೃಷ್ಟಿಸಿದೆ ಎಂದು ಹೇಳಿದರು.

ಒಬ್ಬಂಟಿಯಾಗಿ ಇರುವವರಿಗೆ, ಅನಾರೋಗ್ಯದಿಂದ ಬಳಲುವವರಿಗೆ ಮತ್ತು ಇತರ ಸಮಸ್ಯೆ ಇರುವ ಹಲವಾರು ಜನರಿಗೆ ಕೆಲವು ಸಮಯದಲ್ಲಿ ಬ್ಯಾಂಕ್‌ಗಳಿಗೆ ಬರಲು ಸಾಧ್ಯವಾಗುವುದಿಲ್ಲ. ಅವರೆಲ್ಲರೂ ಮನೆಯಲ್ಲಿಯೇ ಕೂತುಕೊಂಡು ಫೋನ್ ಮುಖಾಂತರ ಡಿಜಿಟಲ್ ಲೈಫ್ ಸರ್ಟಿಫಿಕೇಟ್ ಸಲ್ಲಿಸಬಹುದು ಅಥವಾ ಯಾರಾದರೂ ಒಬ್ಬರ ಸಹಾಯವನ್ನು ತೆಗೆದುಕೊಂಡು ಸಲ್ಲಿಸಬಹುದು ಎಂದರು.

ಪಿಂಚಣಿ ಇಲಾಖೆಯ ಹಿರಿಯ ಅಧಿಕಾರಿ ಉಮೇಶ ಪ್ರಸಾದ ಶಾ ಮಾತನಾಡಿ, 2.20 ಲಕ್ಷ ಜನ ಪಿಂಚಣಿದಾರರನ್ನು ಈ ವರ್ಷ ಡಿಜಿಟಲ್ ಲೈಫ್ ಸರ್ಟಿಫಿಕೇಟ್ ಹೊಸ ಅಭಿಯಾನದಲ್ಲಿ ತೆಗೆದುಕೊಂಡು ಬರುವ ಉದ್ದೇಶ ಹೊಂದಿದ್ದೇವೆ. ಪಿಂಚಣಿದಾರರಿಗೆ ನಾವು ನೀಡುತ್ತಿರುವ ಈ ಸೇವೆ ಸಂಪೂರ್ಣವಾಗಿ ಸುಲಭ, ವೇಗವಾದ ಮತ್ತು ತೊಂದರೆ ರಹಿತವಾಗಿರಬೇಕು ಎಂಬುದು ನಮ್ಮ ಆಶಯ. ಹಿರಿಯ ನಾಗರಿಕರು ಬ್ಯಾಂಕ್‌ಗೆ ಓಡಾಟ ಮಾಡಬೇಕಾದ ಅವಶ್ಯಕತೆ ಇಲ್ಲದಂತೆ, ಮನೆಯಲ್ಲಿಯೇ ಅಥವಾ ಸಮೀಪದ ಕೇಂದ್ರದಲ್ಲಿ ಡಿಜಿಟಲ್ ಲೈಫ್ ಸರ್ಟಿಫಿಕೇಟ್ ನೀಡುವ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದು ಹೇಳಿದರು.

ಹುಬ್ಬಳ್ಳಿಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಪ್ರಾದೇಶಿಕ ವ್ಯವಸ್ಥಾಪಕಿ ಸುಮಾ ಜಿ.ಕೆ. ಪ್ರಾಸ್ತಾವಿಕ ಮಾತನಾಡಿದರು. ಧಾರವಾಡ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮುಖ್ಯ ಶಾಖೆಯ ವ್ಯವಸ್ಥಾಪಕ ರೂಪೇಶ ಮಿಶ್ರಾ, ಡಿಜಿಟಲ್ ಇಂಡಿಯಾ ಕುರಿತು ಮಾತನಾಡಿದರು. ವಿದ್ಯಾಸಾಗರ ದೀಕ್ಷಿತ ನಿರೂಪಿಸಿದರು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಧಿಕಾರಿಗಳು, ಸಿಬ್ಬಂದಿ, ಪಿಂಚಣಿದಾರರು, ಸಾರ್ವಜನಿಕರು ಭಾಗವಹಿಸಿದ್ದರು.

PREV

Recommended Stories

8 ವರ್ಷದ ಬಾಲಕಿ ಹೊಟ್ಟೇಲಿ ಮೂರು ಕೆ.ಜಿ. ಕೂದಲು ಪತ್ತೆ! ಇದೊಂದು ಕಾಯಿಲೆ
ಜೈಪುರ ಸಾಹಿತ್ಯೋತ್ಸವ 2026ರಲ್ಲಿ ಬಾನು ಮುಷ್ತಾಕ್, ಸುಧಾಮೂರ್ತಿ