ಕನ್ನಡಪ್ರಭ ವಾರ್ತೆ ಕಲಬುರಗಿ
ಇಲ್ಲಿನ ಬಾಲಾಜಿ ಟೀ ಪಾಯಿಂಟ್ನ ಮಾಲೀಕ ರಮೇಶ ಮತ್ತವರ ಸಹೋದರರು ಸೇರಿಕೊಂಡು ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕರ್ಜುನ ಖರ್ಗೆಯವರ 82ನೇ ಹುಟ್ಟುಹಬ್ಬದ ನಿಮಿತ್ತ 2 ಸಾವಿರ ಜನರಿಗೆ ಅನ್ನ, ಸಾಂಬಾರ್, ಸಿಹಿ ಪದಾರ್ಥ, ಬದನಿಕಾಯಿ ಎಣ್ಣಿಗಾಯಿ, ಉಪ್ಪಿನಕಾಯಿ ಸೇರಿದಂತೆ ತರಹೇವಾರಿ ರುಚಿಕರ ಪದಾರ್ಥ ಸಿದ್ದಪಡಿಸಿ ವಿಶೇಷ ಭೋಜನ ಉಣಬಡಿಸಿ ಗಮನ ಸೆಳೆದಿದ್ದಾರೆ.ಟೀ ಪಾಯಿಂಟ್ ಮಾಲೀಕ ಬಾಲಾಜಿ ಈ ಬಗ್ಗೆ ಖುಷಿಯಲ್ಲಿ ಕನ್ನಡಪ್ರಭ ಜೊತೆ ಮಾತನಾಡುತ್ತ ನಮ್ಮ ಭಾಗದ ನಾಯಕರು ದಿಲ್ಲಿವರೆಗೂ ತಲುಪಿದ್ದೇ ಸಂತಸದ ಸಂಗತಿ. ಈ ಭಾಗಕ್ಕೆ, ಎಲ್ಲರಿಗೆ ಇದರಿಂದ ಅನುಕೂಲವಾಗುತ್ತಿದೆ. ಅವರ ಹುಟ್ಟುಹಬ್ಬದಂದು ನಾನು ಅನ್ನ ಸಂತರ್ಪಣೆ ಮಾಡಿ ಅವರ ಆರೋಗ್ಯ, ದೀರ್ಘಾಯುಷ್ಯಕ್ಕಾಗಿ ಬೇಡಿಕೊಳ್ಳುವೆ ಎಂದು ರಮೇಶ ಹೇಳಿದ್ದಾರೆ.
ಇಂದಿನ ಅನ್ನ ಸಂತರ್ಪಣೆಗೆ ರಮೇಶ ಇವರು 1 ಕ್ವಿಂಟಲ್ಗೂ ಹೆಚ್ಚು ಅನ್ನ, 300ಕ್ಕೂ ಹೆಚ್ಚು ಚಪಾತಿ, 30 ಕೆಜಿಗೂ ಅಧಿಕ ಶಿರಾ, ಬೇಳೆಕಾಳು, ಸಾಂಬಾರ್ ಪದಾರ್ಥಗಳನ್ನೆಲ್ಲ ಬಳಸಿ ಭರ್ಜರಿ ಭೋಜನ ಸಾರ್ವಜನಿಕವಾಗಿ ಜನತೆಗೆ ಪೂರೈಸಿದ್ದಾರೆ.ಕಳೆದ ವರ್ಷವೂ ಬಾಲಾಜಿ ಟೀ ಪಾಯಿಂಟ್ನಿಂದ ಖರ್ಗೆ ಹುಟ್ಟುಹಬ್ಬಕ್ಕೆ ಅನ್ನ ಸಂತರ್ಪಣೆ ಜೊತೆಗೇ ಅನೇಕ ಸಮಾಜಿಕ ಕೆಲಸಗಳನ್ನು ಹಮ್ಮಿಕೊಳ್ಳಲಾಗಿತ್ತು.
ಈ ಬಾರಿ ಅನ್ನ ಸಂತರ್ಪಣೆಯೊಂದಿಗೆ ರಮೇಶ ಇವರು ಮಾಡಿರುವ ವಿಧಾಯಕ ಕಾರ್ಯಕ್ರಮ ಕಲಬುರಗಿ ಜನರ ಗಮನ ಸೆಳೆದಿದೆ. ರಮೇಶ ಇವರು ಕಾಯಂ ತಮ್ಮ ಹೋಟಲ್, ಆಲೂಬಾತ್, ಚಾಯ್ ಇವನ್ನೆಲ್ಲ ಒಳಗೊಂಡ ಪುಟ್ಟದಾದ ಹೋಟಲ್ ಇಲ್ಲಿನ ಜಿಲ್ಲಾ ನ್ಯಾಯಾಲಯದ ಮುಂದಿರುವ ರಸ್ತೆಯಲ್ಲಿ ನಡೆಸುತ್ತಿದ್ದಾರೆ. ಈ ವ್ಯಾಪಾರದಿಂದ ಲಾಭದಿಂದಲೇ ಅವರು ತಮ್ಮ ಮೆಚ್ಚಿನ ನಾಯಕನ ಜನುಮ ದಿನಕ್ಕೆ ವೆಚ್ಚ ಮಾಡುತ್ತಿರೋದಕ್ಕೆ ಸಾರ್ವಜನಿಕವಾಗಿ ಶ್ಲಾಘನೆ ವ್ಯಕ್ತವಾಗಿದೆ.