ಕೃಷಿಗೆ ನೀಡುವಂತೆ ಮೀನುಗಾರಿಕೆಗೂ ಬೆಂಬಲ ಬೆಲೆ, ಸಾಲ, ಸಬ್ಸಿಡಿ ನೀಡುವ ಬಗ್ಗೆ ಯೋಜನೆಯೊಂದನ್ನು ರೂಪಿಸಿ ಮುಖ್ಯಮಂತ್ರಿಗಳ ಮುಂದೆ ಇಡುವುದಾಗಿ ರಾಜ್ಯ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಹಾಗೂ ಮುಜರಾಯಿ ಸಚಿವ ಕೆ.ಎಸ್ ಬಸವಂತಪ್ಪ ಅವರು ಹೇಳಿದರು.
ಉಡುಪಿ: ಕೃಷಿಗೆ ನೀಡುವಂತೆ ಮೀನುಗಾರಿಕೆಗೂ ಬೆಂಬಲ ಬೆಲೆ, ಸಾಲ, ಸಬ್ಸಿಡಿ ನೀಡುವ ಬಗ್ಗೆ ಯೋಜನೆಯೊಂದನ್ನು ರೂಪಿಸಿ ಮುಖ್ಯಮಂತ್ರಿಗಳ ಮುಂದೆ ಇಡುವುದಾಗಿ ರಾಜ್ಯ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಹಾಗೂ ಮುಜರಾಯಿ ಸಚಿವ ಕೆ.ಎಸ್ ಬಸವಂತಪ್ಪ ಅವರು ಹೇಳಿದರು.
ಬುಧವಾರ ಇಲ್ಲಿನ ಮಲ್ಪೆ ಬಂದರಿಗೆ ಭೇಟಿ ನೀಡಿದ ಮೀನುಗಾರಿಕಾ ಮತ್ತು ಬಂದರು ಸಚಿವರು ಮೀನುಗಾರರ ಬೇಡಿಕೆಗಳಿಗೆ ಸ್ಪಂದಿಸಿ ಮಾತನಾಡುತಿದ್ದರು.ಕರಾವಳಿಯಲ್ಲಿ ಪ್ರವಾಸೋದ್ಯಮಕ್ಕೆ ಸರ್ಕಾರ ಒತ್ತು ಕೊಡುತ್ತಿದೆ, ಆದರೇ ಸಮುದ್ರ ತೀರಗಳಲ್ಲಿ ಪ್ರವಾಸೋದ್ಯಮದ ಅಭಿವೃದ್ಧಿಯಿಂದ ಮೀನುಗಾರಿಗೆ ಮತ್ತು ಮೀನುಗಾರಿಕೆಗೆ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು, ಈ ಬಗ್ಗೆ ಆತಂಕ ಬೇಡ ಎಂದು ಸಚಿವರು ಮೀನುಗಾರರ ಬೇಡಿಕೆಯೊಂದಕ್ಕೆ ಉತ್ತರಿಸಿದರು.ಮೀನುಗಾರಿಕಾ ಬೋಟುಗಳಿಗೆ ನೀಡಲಾಗುವ ಸಬ್ಸಿಡಿ ಡಿಸೆಲ್ ಕೋಟವನ್ನು ಹೆಚ್ಚಿಸಲಾಗುವುದು, ಮೀನುಗಾರರಿಗೆ 3 ಲಕ್ಷ ವಸತಿಗಳನ್ನು ನೀಡುವುದಕ್ಕೆ ಪ್ರಯತ್ನಿಸಲಾಗುವುದು ಎಂದ ಸಚಿವರು ಎಲ್ಲವನ್ನು ಹಂತಹಂತವಾಗಿ ಒದಗಿಸಲಾಗುತ್ತದೆ ಎಂದು ಭರವಸೆ ನೀಡಿದರು.ಮಲ್ಪೆ ಮೀನುಗಾರಿಕಾ ಸಂಘದಿಂದ, ಮೀನುಗಾರಿಕಾ ಕಾರ್ಮಿಕರಿಂದ, ಮಂಜುಗಡ್ಡೆ ಸ್ಥಾವರಗಳ ಮಾಲಕರಿಂದ, ಮಹಿಳಾ ಮೀನುಗಾರರಿಂದ ಸಚಿವರಿಗೆ ಬೇಡಿಕೆಗಳ ಮನವಿಗಳನ್ನು ಸಲ್ಲಿಸಲಾಯಿತು. ಇದೇ ಸಂದರ್ಭದಲ್ಲಿ ಸಮಸ್ತ ಮೀನುಗಾರರ ಪರವಾಗಿ, ಪ್ರಥಮ ಬಾರಿಗೆ ಉಡುಪಿಗೆ ಭೇಟಿ ನೀಡಿದ ಬಂದರು ಮತ್ತು ಮೀನುಗಾರಿಕಾ ಸಚಿವರನ್ನು ಸನ್ಮಾನಿಸಲಾಯಿತು.ಶಾಸಕ ಯಶ್ಪಾಲ್ ಸುವರ್ಣ ಸಭೆಯ ಅಧ್ಯಕ್ಷತೆ ವಹಿಸಿದ್ದರು, ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ. ಎ. ಗಫೂರ್, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಅಶೋಕ್ ಕೊಡವೂರು, ಮಲ್ಪೆ ಮೀನುಗಾರರ ಸಂಘದ ಉಪಾಧ್ಯಕ್ಷ ನಾಗರಾಜ್ ಕುಂದರ್ ಇದ್ದರು.ಸಂಘದ ಮಾಜಿ ಅಧ್ಯಕ್ಷ ದಯಾನಂದ ಸುವರ್ಣ ಮೀನುಗಾರರ ಬೇಡಿಕೆಗಳನ್ನು ಸಚಿವರ ಮುಂದೆ ಪ್ರಸ್ತಾಪಿಸಿದರು, ಕಾರ್ಯದರ್ಶಿ ಜಗನ್ನಾಥ ಕಾರ್ಯಕ್ರಮ ನಿರೂಪಿಸಿದರು.ಮೀನುಗಾರರೊಂದಿಗೆ ಮಾತುಕತೆ: ಸಭಾ ಕಾರ್ಯಕ್ರಮದ ನಂತರು ಸಚಿವ ಕೆ.ಎಸ್ ಬಸವಂತಪ್ಪ ಏಷ್ಯಾದ 2ನೇ ಅತೀ ದೊಡ್ಡ ಮೀನುಗಾರಿಕಾ ಬಂದರು - ಮಲ್ಪೆ ಸರ್ವಋತು ಬಂದರಿಗೆ ಭೇಟಿ ನೀಡಿದರು ಮತ್ತು ಅಲ್ಲಿನ ವ್ಯವಸ್ಥೆಗಳನ್ನು ಪರಿಶೀಲಿಸಿದರು, ನಂತರ ಅಲ್ಲಿದ್ದ ಮೀನುಗಾರಿಕಾ ಕಾರ್ಮಿಕರೊಂದಿಗೆ ಮಾತುಕತೆ ನಡೆಸಿ, ಮೀನುಗಾರಿಕೆಯ ಮತ್ತು ಅವರ ಸಮಸ್ಯೆಗಳ ಬಗ್ಗೆ ಕೇಳಿ ಮಾಹಿತಿ ಪಡೆದುಕೊಂಡರು.ದೇವಳಕ್ಕೆ ಭೇಟಿ: ಇದಕ್ಕೆ ಮೊದಲು ಸಚಿವರು ಕೊಲ್ಲೂರು ಶ್ರೀ ಮುಕಾಂಬಿಕಾ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು, ನಂತರ ಮರವಂತೆ ಸಮುದ್ರ ತೀರಕ್ಕೆ ಭೇಟಿ ನೀಡಿದರು, ಉಡುಪಿ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಕಾರ್ಯಕರ್ತರನ್ನು ಭೇಟಿಯಾಗಿ ಅಭಿನಂದನೆ ಸ್ವೀಕರಿಸಿದರು, ಕೊಡವೂರು ಶಂರಕನಾರಾಯಣ ದೇವಾಲಯಕ್ಕೂ ಭೇಟಿ ನೀಡಿ ದೇವರ ದರ್ಶನ ಪಡೆದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.