ಪರಿಸರ ಇಲ್ಲದೆ ಮನುಷ್ಯ ಬದುಕಲು ಸಾಧ್ಯವಿಲ್ಲ: ಜಿ.ಟಿ.ದೇವೇಗೌಡ

KannadaprabhaNewsNetwork | Published : Jun 6, 2025 12:59 AM
ಸ್ವಚ್ಛ ಗಾಳಿ, ಸ್ವಚ್ಛ ಸಮಾಜ ಇರಬೇಕಾದರೆ ನಮ್ಮ ಸುತ್ತಲೂ ಗಿಡ, ಮರಗಳು ಇರಬೇಕು. ಅದರೊಂದಿಗೆ ನಾವೆಲ್ಲರೂ ಇದ್ದರೆ ಉಸಿರಾಡಿಕೊಂಡು ಇರಬಹುದು. ವೈಜ್ಞಾನಿಕವಾಗಿ ನಾವು ಮುಂದುವರಿದಿದ್ದೇವೆ. ಆದರೆ, ಉಸಿರಾಡಲು ಪೂರಕವಾಗುವಂತೆ ಗಾಳಿ ದೊರೆಯಲು ಹಿಂದಿನವರು ಸಾಲು ಮರಗಳನ್ನು ನೆಡುವಂತೆ ಮಾಡಿದ್ದರು. ಇದರಿಂದಾಗಿ ದೊಡ್ಡ ದೊಡ್ಡ ಮರಗಳನ್ನು ಕಾಣಲು ಸಾಧ್ಯವಾಗಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ಜಗತ್ತಿನಲ್ಲಿ ತಾಪಮಾನ, ಹವಾಮಾನ ವೈಪರೀತ್ಯದ ಬದಲಾವಣೆಗಳು ಆಗುತ್ತಿರುವುದರಿಂದ ಸಮಸ್ಯೆಗಳು ಎದುರಾಗುತ್ತಿವೆ. ನಾವು ಅಭಿವೃದ್ಧಿ ಜೊತೆಗೆ ನೈಸರ್ಗಿಕವಾಗಿ ಬಂದಿರುವ ಸಂಪನ್ಮೂಲ ಉಳಿಸಿಕೊಳ್ಳಬೇಕು. ಮನುಷ್ಯ ಪರಿಸರ ಇಲ್ಲದೆ ಬದುಕಲು ಸಾಧ್ಯವಿಲ್ಲ ಎನ್ನುವುದನ್ನು ಅರಿಯದಿದ್ದರೆ ಮುಂದೆ ಕಷ್ಟವಾಗಲಿದೆ ಎಂದು ಶಾಸಕ ಹಾಗೂ ಮಾಜಿ ಸಚಿವ ಜಿ.ಟಿ.ದೇವೇಗೌಡ ತಿಳಿಸಿದರು.

ಮೈಸೂರು ಹೊರವಲಯದ ಕೂರ್ಗಳ್ಳಿ ಗ್ರಾಮದಲ್ಲಿ ಆಟೋಮೋಟಿವ್ ಆಕ್ಸಲ್ ಲಿಮಿಟೆಡ್, ನಗರಸಭೆ, ಅರಣ್ಯ ಇಲಾಖೆ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಗುರುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕೆರೆಯ ಅಭಿವೃದ್ಧಿ, ಗಿಡ ನೆಡುವ ಕಾರ್ಯಕ್ರಮಕ್ಕೆ ಅವರು ಚಾಲನೆ ನೀಡಿ ಮಾತನಾಡಿದರು.

ಸ್ವಚ್ಛ ಗಾಳಿ, ಸ್ವಚ್ಛ ಸಮಾಜ ಇರಬೇಕಾದರೆ ನಮ್ಮ ಸುತ್ತಲೂ ಗಿಡ, ಮರಗಳು ಇರಬೇಕು. ಅದರೊಂದಿಗೆ ನಾವೆಲ್ಲರೂ ಇದ್ದರೆ ಉಸಿರಾಡಿಕೊಂಡು ಇರಬಹುದು. ವೈಜ್ಞಾನಿಕವಾಗಿ ನಾವು ಮುಂದುವರಿದಿದ್ದೇವೆ. ಆದರೆ, ಉಸಿರಾಡಲು ಪೂರಕವಾಗುವಂತೆ ಗಾಳಿ ದೊರೆಯಲು ಹಿಂದಿನವರು ಸಾಲು ಮರಗಳನ್ನು ನೆಡುವಂತೆ ಮಾಡಿದ್ದರು. ಇದರಿಂದಾಗಿ ದೊಡ್ಡ ದೊಡ್ಡ ಮರಗಳನ್ನು ಕಾಣಲು ಸಾಧ್ಯವಾಗಿದೆ ಎಂದರು.

ಮರಗಳು ನಮ್ಮ ಆರೋಗ್ಯ ರಕ್ಷಣೆ ಮಾಡುತ್ತವೆ. ಇಂದು ನದಿಗಳು ಕಲ್ಮಶಗೊಳ್ಳುತ್ತಿದೆ. ನಾವು ಶುದ್ಧ ನೀರು ಕುಡಿಯುತ್ತಿದ್ದೇವೆ ಎನ್ನುವಂತೆ ಹೇಳಿದರೂ ಕಲುಷಿತ ನೀರು ಸೇವನೆ ಮಾಡುತ್ತಿದ್ದೇವೆ. ಬೆಂಗಳೂರಿನಲ್ಲಿ ಕೆಆರ್‌ ಎಸ್ ನೀರು ಕುಡಿಯುತ್ತಿದ್ದರೂ ಲಕ್ಷ್ಮಣತೀರ್ಥ ನದಿಯ ಕಲುಷಿತ ಅಂಶಗಳು ಸೇರಿಕೊಂಡು ಬಿಡುತ್ತಿದೆ. ಈ ವಿಚಾರವನ್ನು ವಿಧಾನಸಭೆ ಅಧಿವೇಶನದಲ್ಲಿ ಪ್ರಸ್ತಾಪಿಸಿ ಗಮನ ಸೆಳೆದಿದ್ದೇನೆ. ನದಿಗಳಿಗೆ ವಿಷಕಾರಕ ವಸ್ತುಗಳು ಸೇರದಂತೆ ನೋಡಿಕೊಳ್ಳಬೇಕು. ಪರಿಸರದ ಪ್ರತಿಯೊಬ್ಬರೂ ಎಚ್ಚೆತ್ತುಕೊಂಡು ಕಾಪಾಡಿಕೊಳ್ಳಬೇಕು ಎಂದು ಕರೆ ನೀಡಿದರು.

ಆಟೋಮ್ಯಾಟಿವ್ ಆಕ್ಸಲ್ ಲಿಮಿಟೆಡ್ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಕೂರ್ಗಳ್ಳಿಕೆರೆ ಅಭಿವೃದ್ದಿ ಮಾಡುತ್ತಿರುವುದು ಶ್ಲಾಘನಿಯ. ಕಂಪನಿಯಲ್ಲಿ ಯಾವುದೇ ದೂರುಗಳು, ವಿಚಾರಗಳು ಬಾರದಂತೆ ಕಪ್ಪುಚುಕ್ಕೆ ಇಲ್ಲದಂತೆ ಕಾರ್ಯ ನಿರ್ವಹಿಸಿಕೊಂಡು ಬರುತ್ತಿದೆ. ಕಾರ್ಮಿಕರ ಹಿತದ ಜತೆಗೆ ಸಾಮಾಜಿಕ ಸೇವಾ ಕಾರ್ಯಗಳನ್ನು ಮಾಡುವುದರಿಂದ ಒಳ್ಳೆಯದಾಗಲಿದೆ ಎಂದು ಹಾರೈಸಿದರು.

ಆಟೋಮೋಟಿವ್ ಆಕ್ಸಲ್ ಲಿಮಿಟೆಡ್ ಸಂಸ್ಥೆಯ ಮುಖ್ಯಸ್ಥ ಮುರುಳಿಕೃಷ್ಣ, ನಾಗರಾಜು ಗರ್ಗೇಶ್ವರಿ, ರಂಗನಾಥ್, ಮನ್ಮಥ್, ಕೂರ್ಗಳ್ಳಿ ಪೌರಾಯುಕ್ತ ಎಚ್.ಬಿ. ಚಂದ್ರಶೇಖರ್, ಆರ್‌ಎಫ್‌ಒ ಸುಂದರ್, ಸ್ವಾಮಿ, ಮುಖಂಡರಾದ ಅಭಿಜ್ಞಾ, ನಂಜುಂಡೇಗೌಡ, ಸತೀಶ್, ರಾಮು, ಕುಮಾರ್, ಮಲ್ಲೇಶ್, ವಾಸು, ಚಂದ್ರಶೇಖರ್, ಮೂರ್ತಿ, ಮೈದನಹಳ್ಳಿ ಚಂದ್ರಶೇಖರ್, ಪರಿಸರ ತಜ್ಞ ಮನೋಜ್ ಪಾಟೀಲ್, ಪರಿಸರ ಎಂಜಿನಿಯರ್ ಗಿರಿಜಾ ಮೊದಲಾದವರು ಇದ್ದರು.