ಮನುಷ್ಯ ತನಗರಿವಿಲ್ಲದಂತೆ ಪರಿಸರ ಹಾಳು ಮಾಡುತ್ತಿದ್ದಾನೆ: ಮಲ್ಲಿಕಾರ್ಜುನ ತೊದಲಬಾಗಿ

KannadaprabhaNewsNetwork | Published : Jun 15, 2024 1:07 AM

ಸಾರಾಂಶ

ಸಸಿ, ಮರಗಳ ಪೋಷಣೆಯಲ್ಲಿ ಪರಿಸರ ಪ್ರಮುಖ ಪಾತ್ರ ವಹಿಸುತ್ತದೆ. ಆದ್ದರಿಂದ ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ.

ಕೊಪ್ಪಳ ನಗರದ ಬಸ್‌ ನಿಲ್ದಾಣದ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಕೊಪ್ಪಳ

ಸಸಿ, ಮರಗಳ ಪೋಷಣೆಯಲ್ಲಿ ಪರಿಸರ ಪ್ರಮುಖ ಪಾತ್ರ ವಹಿಸುತ್ತದೆ. ಆದ್ದರಿಂದ ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಜಿಪಂ ಉಪಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ ಹೇಳಿದರು.

ನಗರದ ಕಲ್ಯಾಣ ಕರ್ನಾಟಕ ಬಸ್‌ ಸಾರಿಗೆ ನಿಲ್ದಾಣದ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಸಮೃದ್ಧ ಪರಿಸರ, ಆರೋಗ್ಯಕರ ಜೀವನ ಮತ್ತು ಭೂಮಿಯ ಮೇಲಿನ ಪ್ರತಿಯೊಂದು ಜೀವಿಯ ಜೀವನದ ಅಸ್ತಿತ್ವಕ್ಕೆ ಕಾರಣವಾಗಿರುತ್ತದೆ. ಮನುಷ್ಯ ತನ್ನ ಅಭಿವೃದ್ಧಿಗಾಗಿ ತನಗರಿವಿಲ್ಲದಂತೆ ಪರಿಸರ ಹಾಳು ಮಾಡುತ್ತಿದ್ದಾನೆ. ಪರಿಸರದ ಬಗ್ಗೆ ಪ್ರತಿ ಮನುಷ್ಯನಲ್ಲೂ ಜಾಗೃತಿ ಮೂಡಿಸುವುದು ಮತ್ತು ಪರಿಸರ ಹಾಳು ಮಾಡುವುದನ್ನು ತಡೆಯುವುದು ಇದರ ಉದ್ದೇಶವಾಗಿದೆ. ನಮ್ಮ ಪರಿಸರದ ಸಂರಕ್ಷಣೆಗಾಗಿ ನಾವೆಲ್ಲರೂ ಜಾಗೃತಿ ಕಾರ್ಯಕ್ರಮಗಳ ಮೂಲಕ ಅರಿವು ಮೂಡಿಸುವುದು ಅವಶ್ಯವಿದೆ. ನಮ್ಮ ದೈನಂದಿನ ಜೀವನದಲ್ಲಿ ಕೆಲವೊಂದು ಪರಿಸರಕ್ಕೆ ಸಂಬಂಧಿಸಿದಂತೆ ಬದಲಾವಣೆ ಅನುಸರಿಸಿದಲ್ಲಿ ಭೂಮಿಯ ಉಳಿವಿಗೆ ಸಹಾಯಕವಾಗುತ್ತದೆ ಎಂದರು.ಸಪ್ತಪರಿಣಿ, ನೆರಳೆ, ಶೆಲ್ಟೋಪಾರ್ಮ, ಬೇವು ಸಸಿಗಳನ್ನು ನೆಟ್ಟರು ಸೇರಿದಂತೆ ಒಟ್ಟು 10 ಸಸಿಗಳನ್ನು ನೆಡಲಾಯಿತು.

ಈ ಸಂದರ್ಭದಲ್ಲಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ದುಂಡಪ್ಪ ತುರಾದಿ, ಸಾರಿಗೆ ಘಟಕದ ವ್ಯವಸ್ಥಾಪಕ ಬಿ.ವಿ. ಬಟ್ಟೂರು, ಪಂಚಾಯತ್‌ ರಾಜ್‌ ಸಹಾಯಕ ನಿರ್ದೇಶಕ ಮಹೇಶ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಹನಮಂತಪ್ಪ, ಸಾಮಾಜಿಕ ವಲಯ ಅರಣ್ಯಧಿಕಾರಿ ಗುರುನಗೌಡ ಪಾಟೀಲ್, ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಶಂಕ್ರಪ್ಪ, ಜಿಲ್ಲಾ ಎಸ್‌ ಬಿಎಂ ಸಮಾಲೋಚಕ ರಾಮಣ್ಣ, ತಾಲೂಕು ಐಇಸಿ ಸಂಯೋಜಕ ದೇವರಾಜ ಪತ್ತಾರ, ಸಾಮಾಜಿಕ ಅರಣ್ಯ ಇಲಾಖೆಯ ಸಿಬ್ಬಂದಿ ಬಸವರಾಜ, ಸಾರಿಗೆ ಘಟಕದ ಸಿಬ್ಬಂದಿ ಇತರರಿದ್ದರು.

Share this article