ಭಟ್ಕಳ: ತಾಲೂಕಿನ ವೆಂಕಟಾಪುರ ನದಿಯಲ್ಲಿ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿ ಮೃತದೇಹವನ್ನು ಎಸೆದು ಹೋಗಿದ್ದಾರೆಂದು ವ್ಯಕ್ತಿಯೋರ್ವ ತಹಸೀಲ್ದಾರ ಕಚೇರಿಯ ಕಂಟ್ರೋಲ್ ರೂಮ್ ಗೆ ಕರೆ ಮಾಡಿದ್ದು, ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಇದು ಹುಸಿ ಕರೆ ಎನ್ನುವುದು ಗೊತ್ತಾದ ಘಟನೆ ನಡೆದಿದೆ.
ಕಂಟ್ರೋಲ್ ರೂಮಿಗೆ ಬಂದ ಕರೆ ಕರೆ ಆಧರಿಸಿ ವೆಂಕಟಾಪುರ ನದಿ ಬಳಿ ಹೋದ ತಹಸೀಲ್ದಾರ ನಾಗೇಂದ್ರ ಕೋಳಶೆಟ್ಟಿ, ಗ್ರಾಮೀಣ ಠಾಣೆ ಪೊಲೀಸರು, 112 ವಾಹನ ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿ ದೌಡಾಯಿಸಿ ಎಲ್ಲೆಡೆ ಹುಡುಕಾಟ ನಡೆಸಿದ್ದಾರೆ.ಅಧಿಕಾರಿಗಳು, ಸಿಬ್ಬಂದಿ, ಪೊಲೀಸರು ಎಷ್ಟೇ ಹುಡುಕಾಡಿದರೂ ಮೃತದೇಹ ಸಿಗಲೇ ಇಲ್ಲ. ಕೊನೆಗೆ ಇದೊಂದು ಹುಸಿ ಕರೆ ಎಂದು ನಿರ್ಣಯಿಸಿ ವಾಪಸಾಗಿದ್ದಾರೆ. ಕಂಟ್ರೋಲ್ ರೂಮಿಗೆ ಕರೆ ಮಾಡಿದ ವ್ಯಕ್ತಿ ವೆಂಕಟಾಪುರ ನದಿಯಲ್ಲಿ ಮರ್ಡರ್ ಮಾಡಿ ಮೃತದೇಹ ಎಸೆದು ಹೋಗಿದ್ದಾರೆ ಎಂದು ಕರೆ ಮಾಡಿ ಪುನಃ ಮಾಹಿತಿ ಕೇಳುವುದರೊಳಗಾಗಿ ಕರೆಯನ್ನು ಖಡಿತಗೊಳಿಸಿದ್ದ. ಇದರಿಂದ ಗಾಬರಿಗೊಂಡ ಅಧಿಕಾರಿಗಳು, ಸಿಬ್ಬಂದಿ ಸ್ಥಳಕ್ಕೆ ತೆರಳಿ ಹುಡುಕಾಡಿದ್ದರು. ಕಂಟ್ರೋಲ್ ರೂಮಿಗೆ ಕರೆ ಮಾಡಿದ ವ್ಯಕ್ತಿ ಯಾರು? ಕರೆ ಮಾಡಿ ಸುಳ್ಳು ಹೇಳಲು ಕಾರಣವೇನು ಎನ್ನುವುದು ಗೊತ್ತಾಗಬೇಕಿದೆ. ಈ ಕುರಿತು ಪ್ರತಿಕ್ರಿಯಿಸಿರುವ ತಹಸೀಲ್ದಾರ ನಾಗೇಂದ್ರ ಕೋಳಶೆಟ್ಟಿ, ನಮ್ಮ ಕಂಟ್ರೋಲ್ ರೂಮಿಗೆ ಕರೆ ಬಂದ ತಕ್ಷಣ ನಾನು ನಮ್ಮ ಸಿಬ್ಬಂದಿ ಹಾಗೂ ಪೊಲೀಸರು ವೆಂಕಟಾಪುರದ ನದಿ ಬಳಿ ಹೋಗಿ ಪರಿಶೀಲನೆ ನಡೆಸಿದ್ದೇವೆ. ಸ್ಥಳದಲ್ಲಿ ಯಾವುದೇ ಮೃತದೇಹ ನಮಗೆ ಸಿಕ್ಕಿಲ್ಲ. ನಮ್ಮ ಕಚೇರಿಗೆ ಕರೆ ಮಾಡಿದ ವ್ಯಕ್ತಿಯ ಹೆಸರು ಕೇಳುವಷ್ಟರಲ್ಲಿ ಆತ ಕರೆ ಸ್ಥಗಿತಗೊಳಿದ್ದಾನೆ. ಕರೆ ಮಾಡಿದ ವ್ಯಕ್ತಿ ಯಾರು? ಆತನ ಹಿನ್ನೆಲೆ ಏನು ಎಂದು ನಾವು ಪತ್ತೆ ಹಚ್ಚುತ್ತೇವೆ ಎಂದು ಹೇಳಿದ್ದಾರೆ.