ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ ಕಲಿಸಿ: ನ್ಯಾ.ಟಿ.ಗೋವಿಂದಯ್ಯ

KannadaprabhaNewsNetwork | Published : Jun 16, 2025 5:34 AM

ಈ ಹಿಂದೆ ನಮ್ಮಲ್ಲಿ ಗುರುಕುಲ ಶಿಕ್ಷಣ ಪದ್ಧತಿಯಿತ್ತು. ಬದಲಾದ ಕಾಲಘಟ್ಟಕ್ಕೆ ತಕ್ಕಂತೆ ನಮ್ಮ ಶಾಲೆಗಳ ಕಲಿಕಾ ಪರಿಸರದಲ್ಲಿಯೂ ಬದಲಾವಣೆಗಳಾಗಿವೆ. ಶಾಲೆಗಳು ಶಿಕ್ಷಣ ನೀಡುವ ಕೇಂದ್ರಗಳಾಗಿದ್ದಾವೆಯೇ ಹೊರತು ಕಲಿಯುವ ಮಕ್ಕಳಿಗೆ ಸಂಸ್ಕಾರ ಕಲಿಸುವ ಕೆಲಸ ಮಾಡುತ್ತಿಲ್ಲ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ತಂದೆ-ತಾಯಂದಿರು ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರವನ್ನೂ ಕಲಿಸಬೇಕು ಎಂದು ಮೈಸೂರು ಜಿಲ್ಲಾ ಸೆಷನ್ಸ್‌ ನ್ಯಾಯಾಧೀಶ ಟಿ.ಗೋವಿಂದಯ್ಯ ಕರೆ ನೀಡಿದರು.

ಪಟ್ಟಣದ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠಕ್ಕೆ ಸೇರಿದ ಬಿ.ಜಿ.ಎಸ್ ಶಿಕ್ಷಣ ಸಂಸ್ಥೆ ಆವರಣದಲ್ಲಿ ಪೂರ್ವ ಪ್ರಾಥಮಿಕ ಶಾಲೆಗೆ ದಾಖಲಾಗಿರುವ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸುವ ಜ್ಞಾನಾಂಕುರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಇಂದಿನ ಪೋಷಕರು ಮಕ್ಕಳ ಅಂಕಗಳಿಕೆಯನ್ನು ಕೇಂದ್ರೀಕರಿಸಿ ಒತ್ತಡ ಹಾಕುತ್ತಿದ್ದಾರೆ. ಅಂಕಗಳಿಕೆಗಿಂತಲೂ ಸಂಸ್ಕಾರಯುತ ಶಿಕ್ಷಣ ದೊಡ್ಡದು. ಎಳೆಯ ವಯಸ್ಸಿನಲ್ಲಿಯೇ ಮಕ್ಕಳಲ್ಲಿ ಗುರು ಹಿರಿಯರು, ತಂದೆ ತಾಯಂದಿರನ್ನು ಗೌರವಿಸುವ ಗುಣಗಳನ್ನು ಬೆಳೆಸಬೇಕು ಎಂದರು.

ಈ ಹಿಂದೆ ನಮ್ಮಲ್ಲಿ ಗುರುಕುಲ ಶಿಕ್ಷಣ ಪದ್ಧತಿಯಿತ್ತು. ಬದಲಾದ ಕಾಲಘಟ್ಟಕ್ಕೆ ತಕ್ಕಂತೆ ನಮ್ಮ ಶಾಲೆಗಳ ಕಲಿಕಾ ಪರಿಸರದಲ್ಲಿಯೂ ಬದಲಾವಣೆಗಳಾಗಿವೆ. ಶಾಲೆಗಳು ಶಿಕ್ಷಣ ನೀಡುವ ಕೇಂದ್ರಗಳಾಗಿದ್ದಾವೆಯೇ ಹೊರತು ಕಲಿಯುವ ಮಕ್ಕಳಿಗೆ ಸಂಸ್ಕಾರ ಕಲಿಸುವ ಕೆಲಸ ಮಾಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಟಿಎಪಿಸಿಎಂಎಸ್ ಅಧ್ಯಕ್ಷ ಬಿ.ಎಲ್.ದೇವರಾಜು ಮಾತನಾಡಿ, ಕೂಸು ಹುಟ್ಟುವ ಮುನ್ನವೇ ನಮ್ಮ ಪೋಷಕರು ಮಕ್ಕಳ ಶಿಕ್ಷಣದ ಬಗ್ಗೆ ಯೋಚಿಸುವ ಕಾಲಘಟ್ಟದಲ್ಲಿ ನಾವು ನಿಂತಿದ್ದೇವೆ. ವಿದ್ಯಾವಂತರ ಸಂಖ್ಯೆ ಹೆಚ್ಚಾದಂತೆ ನಮ್ಮ ಕೌಟುಂಬಿಕ ಪರಿಸರ ಹಾಳಾಗುತ್ತಿದೆ. ಇದಕ್ಕೆ ಸಂಸ್ಕಾರ ರಹಿತ ಶಿಕ್ಷಣವೇ ಕಾರಣ ಎಂದರು.

ಕಾರ್ಯಕ್ರಮದಲ್ಲಿ ಬಿಜಿಎಸ್ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಜೆ.ಎನ್.ರಾಮಕೃಷ್ಣೇಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿ, ಭಗವಂತನ ಆರಾಧನೆಯ ಮೂಲಕ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಿ ಕಲಿಕೆಗೆ ಮುನ್ನಡಿ ಬರೆಯುತ್ತಿದ್ದೇವೆ. ನಮ್ಮ ವಿವಿಧ ಸಂಸ್ಥೆಗಳಲ್ಲಿ ಜ್ಞಾನಾಂಕುರ ಕಾರ್ಯಕ್ರಮ ಸಂಪ್ರದಾಯ ಬದ್ಧವಾಗಿ ನಡೆಯಲಿದೆ ಎಂದರು.

ಸಮಾರಂಭದಲ್ಲಿ ಜಿಪಂ ಮಾಜಿ ಸದಸ್ಯರಾದ ಬ್ಯಾಲದಕೆರೆ ಪಾಪೇಗೌಡ, ಶೀಳನೆರೆ ಅಂರೀಶ್, ಪುರಸಭಾ ಸದಸ್ಯರಾದ ಕೆ.ಬಿ.ಮಹೇಶ್, ಬಸ್ ಸಂತೋಷ್ ಕುಮಾರ್, ಮಾಜಿ ಸದಸ್ಯ ದಿನೇಶ್, ತಾಲೂಕುಕಸಾಪ ಮಾಜಿ ಅಧ್ಯಕ್ಷರಾದ ಎಂ.ಕೆ.ಹರಿಚರಣತಿಲಕ್ ಮತ್ತು ಕೆ.ಆರ್.ನೀಲಕಂಠ, ತಾಲೂಕು ವಕೀಲರ ಸಂಘದ ಅಧ್ಯಕ್ಷ ನಾಗೇಗೌಡ, ಹಿರಿಯ ವಕೀಲರಾದ ಎಸ್.ಸಿ.ವಿಜಯಕುಮಾರ್, ಮುಖಂಡರಾದ ಶೀಳನೆರೆ ಸಿದ್ದೇಶ್, ಬಿ.ನಂಜಪ್ಪ ಸೇರಿದಂತೆ ಹಲವರಿದ್ದರು.