ಚಾಮರಾಜನಗರ: ಹಳೇ ದ್ವೇಷದಿಂದಾಗಿ ದುಷ್ಕರ್ಮಿಗಳು 200ಕ್ಕೂ ಹೆಚ್ಚು ಬಾಳೆ ಗಿಡಗಳನ್ನು ಕೊಚ್ಚಿ ನೆಲಸಮ ಮಾಡಿರುವ ಘಟನೆ ಚಾಮರಾಜನಗರ ತಾಲೂಕಿನ ಸಪ್ಪಯ್ಯನಪುರ ಗ್ರಾಮದಲ್ಲಿ ನಡೆದಿದೆ. ಸಾಲಸೋಲ ಮಾಡಿ ರೈತ ಮಾದೇಗೌಡ ಬೆಳೆದಿದ್ದ ಬಾಳೆಯನ್ನು ದುಷ್ಕರ್ಮಿಗಳು ಕೊಚ್ಚಿ ಹಾಕಿರುವುದರಿಂದ ಕೈಗೆ ಬಂದ ತುತ್ತು ಬಾಯಿಗಿಲ್ಲದಂತಾಗಿ ರೈತ ಕಂಗಲಾಗಿದ್ದಾನೆ. ಚಿನ್ನ ಅಡವಿಟ್ಟು ಬೋರ್ ಹಾಕಿಸಿ ಇದೇ ಮೊದಲ ಬಾರಿಗೆ ರೈತ ಮಾದೇಗೌಡ ಬಾಳೆ ಬೆಳೆದಿದ್ದರು. ಇನ್ನೊಂದೆರಡು ತಿಂಗಳಲ್ಲಿ ಕಟಾವಾಗಬೇಕಿದ್ದ ಬಾಳೆ ದುಷ್ಕರ್ಮಿಗಳ ಕೃತ್ಯಕ್ಕೆ ಬಲಿಯಾಗಿವೆ. ಸಾಲ ತೀರಿಸಿ ನೆಮ್ಮದಿಯಾಗಿರಬಹುದೆಂದು ಕನಸು ಕಂಡಿದ್ದ ರೈತನ ಕನಸಿಗೆ ದುಷ್ಕರ್ಮಿಗಳು ಕೊಳ್ಳಿ ಇಟ್ಟಿದ್ದಾರೆ.